ಬೆಂಗಳೂರು: ದ್ವಿತೀಯ ಪಿಯುಸಿ ಇಂಗ್ಲಿಷ್ ಪರೀಕ್ಷೆ ಬರೆದ ಬೆಂಗಳೂರಿನ ವಿದ್ಯಾರ್ಥಿನಿಯಲ್ಲಿ ಕೊರೊನಾ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಮತ್ತು ಅವರ ಪಾಲಕರಲ್ಲಿ ಆತಂಕ ಹೆಚ್ಚಾಗಿದೆ.
ಗುರುವಾರ ನಡೆದ ಪಿಯುಸಿ ಇಂಗ್ಲಿಷ್ ಪರೀಕ್ಷೆಗೆ ಹಾಜರಾಗಿದ್ದ ವಿದ್ಯಾರ್ಥಿನಿಯಲ್ಲಿ ಸೋಂಕು ದೃಢಪಟ್ಟಿದ್ದು, ಆಕೆಯ ಪಾಲಕರ ಸಮೇತ ಕ್ವಾರಂಟಿಗೆ ಒಳಪಡಿಸಲಾಗಿದೆ.
ಈಗ ಮುಂದಿನ ಗುರುವಾರದಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ನಿಗದಿಯಾಗಿದ್ದು, ಮಕ್ಕಳನ್ನು ಕಳುಹಿಸುವುದು ಹೇಗೆ ಎಂಬ ಚಿಂತೆಯಲ್ಲಿ ಪಾಲಕರಿದ್ದಾರೆ. ಇದೇ ವೇಳೆ ಪರೀಕ್ಷೆ ಬರೆಯುವುದರ ಅಪಾಯದ ಬಗ್ಗೆಯೂ ಅನೇಕ ವಿದ್ಯಾರ್ಥಿಗಳು ಆತಂಕ ತೋಡಿಕೊಂಡಿದ್ದಾರೆ.
ಸರ್ಕಾರವೇನೋ ಹಠಕ್ಕೆ ಬಿದ್ದು ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಿಯೇ ಸಿದ್ಧ ಎಂದು ಕುಳಿತಿದೆ. ಆದರೆ ಒಂದೇ ದಿನದ ಪರೀಕ್ಷೆಯಲ್ಲಿ ವಿದ್ಯಾರ್ಥಿನಿಗೆ ಸೋಂಕು ತಗುಲಿದೆ. ಇನ್ನು 10 ದಿನಗಳು ಮಕ್ಕಳನ್ನು ಪರೀಕ್ಷೆಗೆ ಕಳುಹಿಸುವುದು ಹೇಗೆ ಎನ್ನುವುದು ಪಾಲಕರ ಪ್ರಶ್ನೆಯಾಗಿದೆ. ಈ ಪ್ರಶ್ನೆಗೆ ಶಿಕ್ಷಣ ಇಲಾಖೆ ಅಧಿಕಾರಿಗಳಾಗಲಿ ಅಥವಾ ಸಚಿವರಾಗಿ ಯಾವುದೇ ಭರವಸೆ ಮಾತುಗಳನ್ನು ಆಡಿಲ್ಲ. ಇದು ಪಾಲಕರನ್ನು ಇನ್ನಷ್ಟು ಆತಂಕಕ್ಕೆ ತಳ್ಳಿದೆ.
ಸ್ಯಾನಿಟೈಸರ್ಗಳು, ಮಾಸ್ಕ್, ಸಾಮಾಜಿಕ ಅಂತರ ಎಲ್ಲವನ್ನೂ ಕಾಪಾಡುವುದಾಗಿ ಶಿಕ್ಷಣ ಸಚಿವರು ಹಿಂದೆಯೇ ಹೇಳಿಕೆ ನೀಡಿದ್ದಾರೆ. ಆದರೆ ಇಷ್ಟೆಲ್ಲ ಇದ್ದರೂ ವಿದ್ಯಾರ್ಥಿನಿಗೆ ಸೋಂಕು ತಗುಲಿದೆಯಲ್ಲ ಎಂಬ ಪ್ರಶ್ನೆಗೆ ಸಚಿವರೂ ಸೇರಿದಂತೆ ಯಾರ ಬಳಿಯೂ ಉತ್ತರ ಇನ್ನು ಸಿಕ್ಕಿಲ್ಲ.
ಇನ್ನು ಪರೀಕ್ಷೆಗೆ ಕಳುಹಿಸುವುದು ಹೇಗೆ ಎಂದು ಪಾಲಕರು ಯೋಚಿಸುತ್ತಿದ್ದರೆ. ಇತ್ತ ಕೊರೊನಾ ಸೋಂಕಿತರ ಸಂಖ್ಯೆ ರಾಜ್ಯದಲ್ಲಿ ದಿನದಿನಕ್ಕೆ ಹೆಚ್ಚಾಗುತ್ತಿದ್ದರೂ ಸಚಿವರು ವಿದ್ಯಾರ್ಥಿಗಳ ಜೀವದ ಜತೆ ಆಟವಾಡುತ್ತಿದ್ದಾರೆ. ಈ ಸಮಯದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸುವುದು ಮಕ್ಕಳ ಜೀವಕ್ಕೆ ಕಂಟಕ ಎಂದು ಆರೋಪಿಸಿ ಶಿಕ್ಷಣ ಸಚಿವರ ವಿರುದ್ಧ ಜನಾಧಿಕಾರ ಸಂಘರ್ಷ ಪರಿಷತ್ ಮುಖ್ಯಸ್ಥ ಹಾಗೂ ಸಾಮಾಜಿಕ ಕಾರ್ಯಕರ್ತ ಆದರ್ಶ ಅಯ್ಯರ್ ನಗರದ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಹೀಗಾಗಿ ಶಿಕ್ಷಣ ಇಲಾಖೆ ಮತ್ತು ಸಚಿವರು ಇನ್ನು ಕೆಲವೇ ದಿನವಿರ ಪರೀಕ್ಷೆ ಬಗ್ಗೆ ಯಾವ ನಿಲುವು ತಾಳುತ್ತಾರೋ ಎಂಬುದನ್ನು ಕಾದು ನೋಡಲು ಸಮಯವಿಲ್ಲ. ಆದ್ದರಿಂದ ಇನ್ನು ಎರಡು ದಿನದೊಳಗೆ ಮತ್ತೆ ಪರೀಕ್ಷೆ ಮಾಡುವ ಬಗ್ಗೆ ಸ್ಪಷ್ಟನೆ ಕೊಡಬೇಕಿದೆ.