ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ರಾಜ್ಯ ಸರ್ಕಾರ ಗುರುವಾರ (ಇಂದು) ಮಧ್ಯಾಹ್ನ ಏಕಾಏಕಿ ಕರ್ನಾಟಕದ ಎಲ್ಲ ಅಂಗಡಿಗಳನ್ನು ಮುಚ್ಚಲು ಆದೇಶಿಸಿರುವುದು ನಿಜಕ್ಕೂ ಸರ್ಕಾರದ ದಡ್ಡತನದ ಪರಮಾವಧಿ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ. ಸದಂ ಕಿಡಿಕಾರಿದ್ದಾರೆ.
ನಗರದಲ್ಲಿ ಸುದ್ದಿಗಾಋರೊಂದಿಗೆ ಮಾತನಾಡಿದ ಅವರು, ಈ ಬಗ್ಗೆ ನಿರ್ಣಯಗಳನ್ನು ತೆಗೆದುಕೊಳ್ಳುವ ಮೊದಲು ರಾಜ್ಯದ ರಾಜಸ್ವ ತೆರಿಗೆ ಸಂಗ್ರಹಣೆಯಲ್ಲಿ ಅಗ್ರ ಪಾಲನ್ನು ಹೊಂದಿರುವ ವರ್ತಕರ ಸಂಘಗಳೊಂದಿಗೆ ಚರ್ಚಿಸಿ ಇದರ ಪರಿಣಾಮಗಳ ಬಗ್ಗೆ ಆಲೋಚಿಸಬೇಕಿತ್ತು. ಅದನ್ನು ಬಿಟ್ಟು ಏಕಾಏಕಿ ನಿರ್ಣಯಗಳನ್ನು ತೆಗೆದುಕೊಳ್ಳುತ್ತಿರುವುದು ಸರ್ಕಾರದ ಅಂಧಾದುಂದಿ ವರ್ತನೆಯನ್ನು ತೋರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈಗಾಗಲೇ ರಾಜ್ಯದ ವರ್ತಕರು ಕಳೆದ ವರ್ಷದ ಕೊರೊನಾ ಮಹಾಮಾರಿಯ ಪರಿಣಾಮವಾಗಿ ದೀರ್ಘಕಾಲಿಕ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಈ ರೀತಿಯ ಅವೈಜ್ಞಾನಿಕ ಆದೇಶಗಳ ಮೂಲಕ ಮತ್ತಷ್ಟು ಮರ್ಮಾಘಾತವನ್ನು ಸರ್ಕಾರವು ನೀಡುತ್ತಿದೆ ಎಂದರು.
ಇಂತಹ ಕ್ಲಿಷ್ಟಕರ ಸಂದರ್ಭದಲ್ಲಿ ರಾಜ್ಯದ ಆರ್ಥಿಕ ಪರಿಣಾಮಗಳನ್ನು ಕೂಲಂಕಷವಾಗಿ ಪರಿಶೀಲಿಸದೆ ರಾಜ್ಯ ಸರ್ಕಾರವು ಇಂದು ಮಧ್ಯಾಹ್ನದಿಂದಲೇ ಏಕಾಏಕಿ ಅಂಗಡಿಗಳನ್ನು ಮುಚ್ಚಲು ಆದೇಶಿಸಿ ಪೊಲೀಸ್ ಇಲಾಖೆಯನ್ನು ಬಳಸಿಕೊಳ್ಳುತ್ತಿರುವುದು ತೀರಾ ಖಂಡನೀಯ. ಕೂಡಲೇ ರಾಜ್ಯದ ಎಲ್ಲಾ ವರ್ತಕರ ಸಂಘಗಳೊಂದಿಗೆ ಚರ್ಚಿಸಿ ತನ್ನ ಆದೇಶವನ್ನು ಮರುಪರಿಶೀಲಿಸಬೇಕೆಂದು ಆಮ್ ಆದ್ಮಿ ಪಕ್ಷವು ಆಗ್ರಹಿಸುತ್ತದೆ ಎಂದರು.