ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಮೇ ಕೊನೆಯ ವಾರ ಅಥವಾ ಜೂನ್ ಮೊದಲನೇ ವಾರದಲ್ಲಿ ಕೊರೊನಾ ಎರಡನೇ ಅಲೆಯ ಪ್ರಭಾವ ಕಮ್ಮಿಯಾಗಬಹುದು. ಮೂಗಿಗೆ ನಿಂಬೆರಸ ಪ್ರಯೋಗ ಮಾಡಲು ಹೋಗಬೇಡಿ” ಎಂಬ ಸಲಹೆಯನ್ನು ಜಯದೇವ ಸಂಸ್ಥೆಯ ಡಾ. ಸಿ.ಎನ್.ಮಂಜುನಾಥ್ ನೀಡಿದ್ದಾರೆ.
ಕೊರೊನಾ ಮಹಾಮಾರಿ ರಾಜ್ಯದಲ್ಲಿ ಅಬ್ಬರಿಸುತ್ತಿದ್ದು, ಅದು ಕಡಿಮೆಯಾಗುವ ಸಂಭವ ಹೆಚ್ಚಿದೆ. ಈ ವೈರಸ್ ಬಗ್ಗೆ ಆತಂಕ ಬಿಟ್ಟು ಈಗ ಸಿಗುತ್ತಿರುವ ಎರಡೂ ವ್ಯಾಕ್ಸಿನ್ಗಳೂ ಉತ್ತಮವಾಗಿದ್ದು, ಅವುಗಳನ್ನು ಪಡೆಯಿರಿ ಎಂದು ಸಲಹೆ ನೀಡಿದ್ದಾರೆ.
ಒಂದು ವೇಳೆ ಆಸ್ಪತ್ರೆಯಲ್ಲಿ ಬೆಡ್ ಸಿಗದೇ ಇದ್ದ ಪಕ್ಷದಲ್ಲಿ ಮಕಾಡೆ ಮಲಗಿಕೊಂಡರೆ ಒಳ್ಳೆಯದು. ಆಗ ಶೇ.4ರಷ್ಟು ಆಕ್ಸಿಜನ್ ಲೆವೆಲ್ ಹೆಚ್ಚಾಗುತ್ತದೆ. ತೂಕ ಜಾಸ್ತಿ, ಹೊಟ್ಟೆ ಜಾಸ್ತಿ ಇರುವವರಿಗೆ ಇದು ಇನ್ನೂ ಅನುಕೂಲವಾಗಲಿದೆ. ಸಾಮಾಜಿಕ ತಾಣದಲ್ಲಿ ಬಹಳಷ್ಟು ತಪ್ಪು ಮಾಹಿತಿ ಹರಡುತ್ತಿದೆ. ಜನ ಇದನ್ನು ಗಂಭೀರವಾಗಿ ಪರಿಗಣಿಸಬಾರದು ಎಂದು ಡಾ.ಮಂಜುನಾಥ್ ಹೇಳಿದ್ದಾರೆ.
ಸಾಮಾನ್ಯವಾಗಿ ಬೇಸಿಗೆಯಲ್ಲಿ ನಿಂಬೆಹಣ್ಣಿಗೆ ಎಲ್ಲಿಲ್ಲದ ಬೇಡಿಕೆ ಇರುತ್ತದೆ. ಜೊತೆಗೆ, ಉದ್ಯಮಿ ವಿಜಯ ಸಂಕೇಶ್ವರ ಅವರು ನಿಂಬೆ ಹಣ್ಣಿನ ರಸ ಮತ್ತು ತೆಂಗಿನ ಎಣ್ಣೆಯ ಮಹತ್ವವನ್ನು ವಿವರಿಸಿದ ನಂತರವಂತೂ ಇದರ ಬೇಡಿಕೆ ದುಪ್ಪಟ್ಟಾಗಿದೆ.
ಸಾಮಾಜಿಕ ಮತ್ತು ವೈದ್ಯಕೀಯ ವಲಯದಲ್ಲಿ ಭಾರೀ ಪರ, ವಿರೋಧ ಚರ್ಚೆಗೆ ಕಾರಣವಾದ ಈ ವಿಚಾರದ ಬಗ್ಗೆ ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ವಿವರಣೆಯನ್ನು ನೀಡಿದ್ದಾರೆ.
ಕೊರೊನಾ ಮೊದಲನೇ ಅಲೆಯಿಂದಲೇ ಸರಕಾರಕ್ಕೆ ಕಾಲಕಾಲಕ್ಕೆ ಸೂಕ್ತ ಸಲಹೆಯನ್ನು ನೀಡುತ್ತಾ ಬರುತ್ತಿರುವ ಡಾ.ಮಂಜುನಾಥ್, ಕೊರೊನಾದ ಸಣ್ಣ ಲಕ್ಷಣಗಳಿದ್ದರೆ ರೆಮ್ಡೆಸಿವಿರ್ ಅವಶ್ಯಕತೆಯಿಲ್ಲ. ಉಸಿರಾಟದ ತೊಂದರೆಯಾದರೂ ಭಯ ಪಡಬೇಕಾಗಿಲ್ಲ, ಹತ್ತು ದಿನ ಕ್ವಾರಂಟೈನ್ನಲ್ಲಿದ್ದರೆ ಸಾಕು ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಮೂಗಿನ ಹೊಳ್ಳೆಗೆ ನಿಂಬೆರಸ ಹಾಕಿಕೊಳ್ಳಬೇಡಿ
ಮೂಗಿನೊಳಗೆ ನಾಲ್ಕು ಹನಿ ನಿಂಬೆರಸ ಹಾಕಿಕೊಂಡರೆ ಕೊರೊನಾ ರಿಲೀಫ್ ಆಗುತ್ತೆ. ಕೊರೊನಾ ನನಗೆ ಇಲ್ಲದಿದ್ದರೂ ನಾನು ಹಾಕಿಕೊಂಡು ನೋಡಿದೆ, ನನಗೇನು ತೊಂದರೆಯಾಗಲಿಲ್ಲ. ನನ್ನ ಆಪ್ತವಲಯದವರೂ ಇದನ್ನು ಪ್ರಯತ್ನಿಸಿದ್ದಾರೆ. ಬಿ.ಎಂ.ಹೆಗಡೆಯವರು ಹೇಳಿದಂತೆ ತೆಂಗಿನ ಎಣ್ಣೆಯನ್ನು ಬಳಸಿ ಎಂದು ಇತ್ತೀಚೆಗೆ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ವಿಜಯ ಸಂಕೇಶ್ವರ ಹೇಳಿಕೆಯನ್ನು ನೀಡಿದ್ದರು. ಅದಕ್ಕೆ ಡಾ. ಸಿ.ಎನ್.ಮಂಜುನಾಥ್ ಏನಂತಾರೆ?
ಮೂಗಿನ ಹೊಳ್ಳೆಗೆ ನಿಂಬೆರಸ ಬಿಟ್ಟುಕೊಳ್ಳುವುದನ್ನು ಬಿಟ್ಟು ಬಿಡಿ. ಜನರು ಇಂಥ ಮೂಢನಂಬಿಕೆಗೆ ಒಳಗಾಗಬಾರದು. ಇವೆಲ್ಲಾ ಜನರನ್ನು ತಪ್ಪುದಾರಿಗೆ ಎಳೆಯುತ್ತವೆ. ಮೊದಲು ಜನರು ಕೊರೊನಾದಿಂದ ಹೊರಬರುವ ಬಗ್ಗೆ ಯೋಚಿಸಬೇಕು ಎಂದು ತಿಳಿಸಿದ್ದಾರೆ.
ಇನ್ನು ನನಗೆ ವಿಜಯ ಸಂಕೇಶ್ವರ ಅವರ ಬಗ್ಗೆ ವೈಯಕ್ತಿಕವಾಗಿ ಗೊತ್ತಿದೆ. ಅವರು ಏನಾದರೂ ಹೇಳಿದರೆ, ವೈಜ್ಞಾನಿಕ ನೆಲೆಗಟ್ಟಿನಲ್ಲೇ ಹೇಳಿರುತ್ತಾರೆ. ಸಿ.ಟಿ.ರವಿಯವರು ತಮ್ಮ ಪತ್ನಿಗೂ ನಿಂಬೆಹಣ್ಣಿನ ಪ್ರಯೋಗವನ್ನು ಮಾಡಿಸಿದ್ದರು, ಅದರಿಂದ ಕಫ ಕರಗಿದೆ ಎಂದು ರವಿಯವರು ಹೇಳಿದ್ದಾರೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಕೂಡಾ ಹೇಳಿಕೆಯನ್ನು ನೀಡಿದ್ದರು.
ಇದರಿಂದ ಹಲವು ಕೊರೊನಾ ರೋಗಿಗಳು ಒಂದು ಪರಿಹಾರ ಸಿಕ್ಕಿದಂತೆ ಪ್ರಯೋಗ ಮಾಡಿಕೊಳ್ಳಲು ಹೋದರು. ಹೀಗಾಗಿ ಒಬ್ಬ ಶಿಕ್ಷಕರು ಮೃತಪಟ್ಟರು. ಆದರೆ ಅವರ ಸಾವು ಇದರಿಂದ ಸಂಭವಿಸಿಲ್ಲ ಎಂಬ ಹೇಳಿಕೆಯೂ ಬಂತು. ಇದಕ್ಕೆಲ್ಲ ವೈಜ್ಞಾನಿಕವಾಗಿ ನಿರ್ಧಾರ ತೆಗೆದುಕೊಳ್ಳುವುದು ಒಳ್ಳೇದು.