ವಿಜಯಪಥ ಸಮಗ್ರ ಸುದ್ದಿ
ತಿ.ನರಸೀಪುರ: ಚಾಮರಾಜನಗರ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಆಮ್ಲಜನಕ ಕೊರತೆಯಿಂದ ನಡೆದಿರುವ 24 ಕೋವಿಡ್ ರೋಗಿಗಳ ಸಾವು ಸರ್ಕಾರಿ ಪ್ರಾಯೋಜಿತ ಕೊಲೆಯಾಗಿದೆ ಎಂದು ದಸಂಸ ಜಿಲ್ಲಾ ಸಂಚಾಲಕ ಆಲಗೂಡು ಶಿವಕುಮಾರ್ ಗಂಭೀರ ಆರೋಪ ಮಾಡಿದ್ದಾರೆ.
ದೇಶದಲ್ಲಿ ಕಳೆದ ಆರು ತಿಂಗಳ ಮುಂಚಿತವಾಗಿಯೇ “ಕೋವಿಡ್ ನಿರ್ವಹಣೆ ತಜ್ಞರ ಸಮಿತಿ” ಎರಡನೆಯ ಅಲೆಯನ್ನು ಎದುರಿಸುವ ನಿಟ್ಟಿನಲ್ಲಿ ಪೂರ್ವ ತಯಾರಿ ಮಾಡಿಕೊಳ್ಳುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸಲಹೆ ನೀಡಲಾಗಿತ್ತಾದರೂ ಈ ಸರ್ಕಾರಗಳು ಕೊರೊನಾ ಎರಡನೇ ಅಲೆಯನ್ನು ತಡೆಯಲು ಸಂಪೂರ್ಣ ವಿಫಲವಾಗಿವೆ ಎಂದು ದೂರಿದರು.
ಉತ್ತರ ಭಾರತದ ಕುಂಭಮೇಳ ಮತ್ತು ಪಂಚರಾಜ್ಯಗಳ ಮತ್ತು ರಾಜ್ಯದ ಉಪ ಚುನಾವಣೆಗಳ ಗುಂಗಿನಲ್ಲಿದ್ದ ಸರ್ಕಾರಗಳು ಜವಾಬ್ದಾರಿಯನ್ನು ಮರೆತಿದ್ದು, ತನ್ನ ದ್ವಂದ್ವ ನಿಲುವುಗಳು ಹಾಗೂ ತಜ್ಞರ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸದ ಕಾರಣ ಕೋವಿಡ್ ನಿಂದಾಗಿ ಹೆಚ್ಚಾಗಿ ಸಾವು ನೋವುಗಳು ಸಂಭವಿಸುವಂತಾಗಿದೆ. ಇದರ ಫಲವೇ ಚಾ.ನಗರದಲ್ಲಿ ಇಂತಹ ದುರ್ಘಟನೆ ನಡೆಯಲು ಕಾರಣವಾಗಿದೆ ಎಂದರು.
ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದಾಗಿ ಕೋವಿಡ್ ಸೋಂಕಿಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದ ಅಮಾಯಕ, ಮುಗ್ದ ಜೀವಗಳು ಚಾಮರಾಜನಗರದಲ್ಲಿ ಬಲಿಯಾಗಿದ್ದು ನಿಜಕ್ಕೂ ದುರಂತ. ಈ ದುರಂತದ ಘಟನೆಯನ್ನು ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಿಂದ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು.
ಮೃತರ ಕುಟುಂಬಕ್ಕೆ ತಲಾ 50 ಲಕ್ಷ ರುಪಾಯಿ ಪರಿಹಾರ ಮಂಜೂರು ಮಾಡಬೇಕು. ಈ ದುರಂತದ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿಗಳು, ಆರೋಗ್ಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ರಾಜಿನಾಮೆ ನೀಡಬೇಕಾಗಿ ದಸಂಸ ಆಗ್ರಹಿಸುತ್ತದೆ.
ಇಲ್ಲದಿದ್ದಲ್ಲಿ ಕೊರೊನಾದ ಎಲ್ಲಾ ಮಾರ್ಗಸೂಚಿಗಳನ್ನು ಧಿಕ್ಕರಿಸಿ ಸರ್ಕಾರದ ಜನವಿರೋಧಿ ನಿಲುವುಗಳನ್ನು ಖಂಡಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಆಲಗೂಡು ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.