ವಿಜಯಪಥ ಸಮಗ್ರ ಸುದ್ದಿ
ಬೆಳಗಾವಿ: ರಾಜ್ಯ ಸರ್ಕಾರ ಬಿಪಿಎಸ್, ಅಂತ್ಯೋದಯ, ಎಪಿಎಲ್ ಪಡಿತರ ಚೀಟಿದಾರರಿಗೆ ನೀಡುತ್ತಿರುವ ಅಕ್ಕಿ ಕಡಿತ ಮಾಡಿರುವುದರ ಬಗ್ಗೆ ಫೋನ್ ಮೂಲಕ ಪ್ರಶ್ನಿಸಿದ ನಾಗರಿಕರೊಬ್ಬರಿಗೆ ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವ ಉಮೇಶ ಕತ್ತಿ ಅಹಂಕಾರದ ಮಾತುಗಳಿಂದ ನಿಂದಿಸಿದ್ದಾರೆ.
ಇಂಥ ಸಚಿವರು ನಮ್ಮನ್ನು ಆಳುವವರು. ನಾವು ಇಂಥವರಿಗೆ ಉನ್ನತ ಸ್ಥಾನ ಕಲ್ಪಸಿಕೊಟ್ಟು ಇವರಿಂದ ಈ ರೀತಿಯ ಮಾತು ಕೇಳಬೇಕು. ಇದು ನಾವೇ ಮಾಡಿಕೊಂಡಿರುವ ಸ್ವಯಂಕೃತ ಅಪರಾಧವೆ ಎಂದು ಹೇಳಬೇಕಿದೆ. ಕಾರಣ ಇವರನ್ನು ಓಟುಕೊಟ್ಟು ಗೆಲ್ಲಿಸಿ ಕಳುಹಿಸಿದ್ದಿವಲ್ಲ ಅದಕ್ಕೆ.
ನೋಡಿ ಒಬ್ಬ ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವರು ಆಡಿರುವ ಮಾತು ಇಡೀ ವಿಶ್ವವೇ ಕಿಡಿ ಕಾರುವಂತದ್ದು. ಆ ನಾಗರಿಕ ಕೇಳಬಾರದ್ದನ್ನು ಇವರ ಬಳಿ ಕೇಳಿದರ ಎಂದು ಎಲ್ಲರ ನೆತ್ತಿಹುಳ ಕೆದರದೆ ಇರದು ಈ ಸಚಿವರ ಮಾತು ಕೇಳಿದರೆ.
ಕೊರೊನಾ ಸಂಕಷ್ಟದಲ್ಲೂ ರಾಜ್ಯ ಸರ್ಕಾರ ಪಡಿತರ ಅಕ್ಕಿ ಕಡಿತಗೊಳಿಸಿದನ್ನು ಸಚಿವರಿಗೆ ಕರೆ ಮಾಡಿ ಪ್ರಶ್ನಿಸಿದ ಗದಗ ಜಿಲ್ಲೆ ರೈತ ಸಂಘದ ಕಾರ್ಯಕರ್ತ ಈಶ್ವರ ಎಂಬುವರು ಸಚಿವರಿಗೆ ಮೊಬೈಲ್ ಫೋನ್ಗೆ ಕರೆ ಮಾಡಿದ್ದರು.
ಅದೇನೆಂದರೆ, ಲಾಕ್ಡೌನ್ ಸಂದರ್ಭದಲ್ಲೂ ಕೇವಲ 2 ಕೆ.ಜಿ. ಅಕ್ಕಿ ಕೊಡುತ್ತಿದ್ದೀರಿ. ಇಷ್ಟು ಕಡಿಮೆ ಅಕ್ಕಿಯಲ್ಲಿ ನಾವು ಬದುಕುವುದಾದರೂ ಹೇಗೆ?’ ಎಂದು ಕೇಳಿದರು.
ಅದಕ್ಕೆ ಸಚಿವ ಉಮೇಶ್ ಕತ್ತಿ ಉತ್ತರಿಸಿ 2 ಕೆ.ಜಿ. ಅಕ್ಕಿ ಜೊತೆಗೆ 3 ಕೆ.ಜಿ. ರಾಗಿ ಕೊಡುತ್ತಿದ್ದೇವೆ. ಉತ್ತರ ಕರ್ನಾಟಕ ಭಾಗಕ್ಕೆ 3 ಕೆ.ಜಿ. ಜೋಳ ನೀಡುತ್ತಿದ್ದೇವೆ. ಒಟ್ಟು 5 ಕೆ.ಜಿ. ಪಡಿತರ ವಿತರಿಸಲಾಗುತ್ತಿದೆ ಎಂದು ಹೇಳಿದರು.
ಇದು ಸಾಲುತ್ತಾ ಸಾರ್? ಈಗ ಲಾಕ್ಡೌನ್ ಬೇರೆ ಇದೆ. ದುಡಿಮೆ ಇಲ್ಲ ಎಂದು ಕೇಳಿದ್ದಕ್ಕೆ ಕೇಂದ್ರ ಸರ್ಕಾರ ಕೊಡ್ತಿದೆ. ಮೇ, ಜೂನ್ನಲ್ಲಿ 5 ಕೆ.ಜಿ. ಅಕ್ಕಿ ಕೊಡುತ್ತದೆ ಎಂದು ಸಚಿವರು ತಿಳಿಸಿದರು.
ಯಾವಾಗ ಕೊಡ್ತಿರಾ ಎಂದು ಕೇಳಿದ್ದಕ್ಕೆ ಬರುವ ತಿಂಗಳು ಎಂದು ಹೇಳಿದರು. ಅಲ್ಲಿವರೆಗೆ ಉಪವಾಸ ಇರದಾ ಸರ್? ಸತ್ತು ಹೋಗಿಬಿಡೋದ ಎಂದಿದ್ದಕ್ಕೆ ಸಚಿವರು ಸತ್ತು ಹೋದರೆ ಒಳ್ಳೆಯದು. ಅದಕ್ಕಿಂತ, ಅಕ್ಕಿ ಮಾರುವ ದಂಧೆ ಬಂದ್ ಮಾಡಿ, ಮತ್ತೆ ಫೋನ್ ಮಾಡಬೇಡಿ ಎಂದು ಉಡಾಫೆಯಿಂದ ಪ್ರತಿಕ್ರಿಯೆ ನೀಡಿದ್ದಾರೆ.
ಈ ವೇಳೆ ಸರ್ ಫೋನ್ ಮಾಡ್ಬೇಡಿ ಅಂತಿರಲ್ಲ, ನೀವು ಪ್ರತಿನಿಧಿಗಳು. ಏನು ಪ್ರಜಾಪ್ರಭುತ್ವದಲ್ಲಿ ಪ್ರಜೆಗಳು ಮಾತ್ನಾಡಿದ್ರೆ ಆನ್ಸರ್ ಮಾಡ್ಬೇಕು ಎಂದು ಹೇಳುತ್ತಿದ್ದಂತೆ ಫೋನ್ ಕಟ್ ಮಾಡಿದ್ದಾರೆ ಅಹಂಕಾರಿ ಸಚಿವ ಕತ್ತಿ. ಇವರಿಂದ ನಾವು ಯಾವ ಅಭಿವೃದ್ಧಿ ಬಯಸಲು ಸಾಧ್ಯ. ಇಂಥವರಿಗೆ ಜನರು ಏನು ಮಾಡಬೇಕು ಎಂಬುದನ್ನು ತಿಳಿದುಕೊಂಡು ಬುದ್ಧಿವಂತರಾಗಬೇಕಿದೆ.
ಜತೆಗೆ ನಾಗರಿಕರ ಸಮಸ್ಯೆ ಪರಿಹರಿಸಲು ಆಗದ ಇಂಥ ಸಚಿವ ಅವಶ್ಯಕತೆ ನಮಗೆ ಇದೆಯೇ ಎಂದು ಪ್ರತಿಯೊಬ್ಬರೂ ಪ್ರಶ್ನೆ ಮಾಡಬೇಕಿದೆ. ಕೊರೊನಾದ ಈ ಹೊತ್ತಲ್ಲಿ ಸಚಿವರ ಅಹಂಕಾರದ ಮಾತು ಸದ್ಯ ಸಾಮಾಜಿಕ ಜಾಲತಾಣಗಲ್ಲಿ ವೈರಲ್ ಆಗುತ್ತಿದೆ.