ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಆಮ್ ಆದ್ಮಿ ಪಕ್ಷದಿಂದ ಬೆಂಗಳೂರಿನಲ್ಲಿ ಹೋಂ ಐಸೋಲೇಷನ್ ನಲ್ಲಿ ಇರುವವರ ನೆರವಿಗಾಗಿ ಶನಿವಾರದಿಂದ ಕೋವಿಡ್ ಸಹಾಯವಾಣಿ ಆರಂಭಿಸಲಾಗಿದೆ ಎಂದು ಪಕ್ಷದ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ತಿಳಿಸಿದ್ದಾರೆ.
ಇಂದು ಪಕ್ಷದ ಮಾಧ್ಯಮ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ರೋಗಲಕ್ಷಣ ಹೊಂದಿದ್ದು ಆಸ್ಪತ್ರೆಗಳಲ್ಲಿ ಉಳಿದುಕೊಳ್ಳುವ ಅಗತ್ಯ ಇಲ್ಲದೆ ಮನೆಗಳಲ್ಲಿ ಪ್ರತ್ಯೇಕತೆ ಕಾಪಾಡಿಕೊಂಡು ಚೇತರಿಸಿಕೊಳ್ಳುತ್ತಿರುವ ಸೋಂಕಿತ ನಾಗರಿಕರಿಗೆ ನೆರವು ನೀಡಲು ಆಮ್ ಆದ್ಮಿ ಪಕ್ಷ ಸಹಾಯವಾಣಿಯನ್ನು ಆರಂಭಿಸಿದ್ದು, ನೆರವು ಬೇಕಾದವರು ಸಹಾಯವಾಣಿ ಸಂಖ್ಯೆ 7292 022 063ನ್ನು ಸಂಪರ್ಕಿಸಲು ಮನವಿ ಮಾಡಿದ್ದಾರೆ.
100 ಕೋವಿಡ್ ಸೊಂಕಿತರಲ್ಲಿ, ಕೇವಲ 5 ರಿಂದ 10 ಜನರಿಗೆ ಆಸ್ಪತ್ರೆಗೆ ದಾಖಲು, ಐಸಿಯು, ಬೆಡ್, ವೆಂಟಿಲೇಟರ್ ಇತ್ಯಾದಿಗಳ ಅಗತ್ಯವಿದೆ ಎಂದು ವೈದ್ಯಕೀಯ ತಜ್ಞರು ಹೇಳುತ್ತಾರೆ. ಸುಮಾರು 60-70 ಸೋಂಕಿತರಲ್ಲಿ ರೋಗಲಕ್ಷಣಗಳಿಲ್ಲ. 20-30 ಜನರಲ್ಲಿ ಜ್ವರ, ತಲೆನೋವು, ಕೆಮ್ಮು, ಉಸಿರಾಟದ ತೊಂದರೆ ಇತ್ಯಾದಿ ಲಕ್ಷಣಗಳಿವೆ. ಆದರೆ ಇವರಿಗೆ ಮನೆಯಲ್ಲಿ ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡಬಹುದು.
ಈ ರೋಗಿಗಳಿಗೆ ಮನೆಯಲ್ಲಿಯೇ ಇದ್ದು ಚೇತರಿಸಿಕೊಳ್ಳಲು ಸಹಾಯ ನೀಡುವುದರಿಂದ ಅವರ ಆತಂಕ ಮತ್ತು ಆರ್ಥಿಕ ವೆಚ್ಚಗಳನ್ನು ಕಡಿಮೆ ಮಾಡಬಹುದು. ಮುಖ್ಯವಾಗಿ ಆಸ್ಪತ್ರೆಗಳ ಮೇಲಿನ ಹೊರೆ ಕಡಿಮೆಯಾಗುತ್ತದೆ. ಈ ಉದ್ದೇಶದಿಂದ ಪಕ್ಷವು ಇಂದು ಬೆಂಗಳೂರಿನಲ್ಲಿಹೋಂ ಐಸೋಲೇಷನ್ ನಲ್ಲಿ ಇರುವವರಿಗೆ ನೆರವು ನೀಡಲು ಕೋವಿಡ್ ಸಹಾಯವಾಣಿ”ಆರಂಭಿಸಿದೆ ಎಂದರು.
ಆಮ್ ಆದ್ಮಿ ಪಕ್ಷದ ತಂಡವು ವೈದ್ಯರು, ಆರೋಗ್ಯ ಸಿಬ್ಬಂದಿಗಳಲ್ಲಿ ಮತ್ತು ನಾಗರಿಕರೊಂದಿಗೆ ಚರ್ಚೆ ನಡೆಸಿದೆ. ಮನೆಗಳಲ್ಲಿ ಪ್ರತ್ಯೇಕತೆಯನ್ನು ಕಾಯ್ದುಕೊಂಡಿರುವ ಸೋಂಕಿತರಿಗೆ ನಾಲ್ಕು ಮುಖ್ಯ ನೆರವಿನ ಅಗತ್ಯ ಇದೆ ಎಂಬುದು ಪಕ್ಷದ ಗಮನಕ್ಕೆ ಬಂದಿದೆ.
ಅವೆಂದರೆ: ಆಮ್ಲಜನಕದ ಪೂರೈಕೆಯ ಮೇಲ್ವಿಚಾರಣೆ, ವೈದ್ಯರ ಅಗತ್ಯತೆ, ಆಪ್ತ ಸಮಾಲೋಚಕರ ಅಗತ್ಯತೆ ಮತ್ತು ಹೋಂ ಐಸೋಲೇಷನ್ ನಿರ್ವಹಿಸುವ ಬಗ್ಗೆ. ಈ ಮಾಹಿತಿ ಸೇರಿದಂತೆ ಅನೇಕ ಉಪಯುಕ್ತ ಸೇವೆಗಳನ್ನು ಆಮ್ ಆದ್ಮಿ ಪಕ್ಷ ನಿರ್ವಹಿಸಲಿದೆ ಎಂದು ತಿಳಿಸಿದರು.
ಇಂದಿನಿಂದ ಬೆಂಗಳೂರಿನ ನಾಗರಿಕರಿಗೆ ಈ ಕೆಳಗಿನ ಸೇವೆಗಳನ್ನು ಉಚಿತವಾಗಿ ನೀಡುವ ಮೂಲಕ ಸಹಾಯವಾಣಿ ಪ್ರಾರಂಭ
- ಕೊರೊನಾ ಸೋಂಕಿತರು ಚೇತರಿಸಿಕೊಳ್ಳುವವರೆಗೂ ರೋಗಿಗೆ ಒಂದು ಆಕ್ಸಿಮೀಟರ್ ಅನ್ನು ಉಚಿತವಾಗಿ ನೀಡಲಾಗುವುದು.
- ಹೋಂ ಐಸೋಲೇಷನ್ ಹೇಗೆ ನಿರ್ವಹಿಸುವುದು ಎಂಬುದರ ಕುರಿತು ರೋಗಿಗೆ ಫೋನ್ನಲ್ಲಿ ನಮ್ಮ ತಜ್ಞ ವೈದ್ಯರು ಸಲಹೆ ನೀಡುವರು.
- ಈ ಅವಧಿಯಲ್ಲಿ ಆತಂಕದಲ್ಲಿರುವ ರೋಗಿಗೆ ಕೌನ್ಸೆಲಿಂಗ್ ಸೇವೆಗಳನ್ನು ಒದಗಿಸಲಾಗುವುದು.
- ಮನೆ ಪ್ರತ್ಯೇಕತೆಯನ್ನು ಹೇಗೆ ಪರಿಣಾಮಕಾರಿಯಾಗಿ ನಿರ್ವಹಿಸುವುದು ಎಂಬುದರ ಕುರಿತು ರೋಗಿಗೆ ವಿಡಿಯೋ ಮತ್ತು ಕರೆಗಳ ಮೂಲಕ ಮಾಹಿತಿ ಒದಗಿಸಲಾಗುಚವುದು.
ರೋಗಿಗಳ ಆತಂಕವನ್ನು ಕಡಿಮೆ ಮಾಡಲು ನೆರವು ನೀಡಲಾಗುವುದು. ರೋಗಿಯು ಆಸ್ಪತ್ರೆಗೆ ಹೋಗಬೇಕೇ ಅಥವಾ ಬೇಡವೇ ಎಂಬ ಗೊಂದಲ ನಿವಾರಿಸಲು ನೆರವು ನೀಡಲಾಗುವುದು.
ಈ ಕಾರ್ಯಕ್ರಮದಲ್ಲಿ ಸ್ವಯಂಸೇವಕರು, ವೈದ್ಯರು, ಆಪ್ತಸಮಾಲೋಚನಾ ಸಲಹೆಗಾರರು ಮತ್ತು ಇತರ ತಜ್ಞರನ್ನು ನೇಮಿಸಿಕೊಳ್ಳಲಾಗಿದೆ. ನಾಗರಿಕರಿಗೆ ಅಗತ್ಯವಿರುವಂತೆ ಆಹಾರ ಮತ್ತು ಇತರ ಅಗತ್ಯ ವಸ್ತುಗಳನ್ನು ಮನೆಗೆ ತಲುಪಿಸುವ ನೆರವನ್ನೂ ನೀಡಲಾಗುವುದು.
ಬೆಂಗಳೂರು ಆಸ್ಪತ್ರೆಗಳಲ್ಲಿ ಕೇವಲ 5,100 ಬಿಬಿಎಂಪಿ ನಿಯೋಜಿಸಲಾದ ಎಚ್ಡಿಯು ಅಥವಾ ಐಸಿಯು ಅಥವಾ ವೆಂಟಿಲೇಟರ್ ಹಾಸಿಗೆಗಳು ಇವೆ. ಬೆಂಗಳೂರಿನಲ್ಲಿ ಪ್ರತಿದಿನ 20,000 ಕ್ಕೂ ಹೆಚ್ಚು ಹೊಸ ಪ್ರಕರಣಗಳು ದಾಖಲಾಗುತ್ತಿವೆ. ಬರಿ ಸೋಂಕಿತ ಆದರೆ ಮನೆಯಲ್ಲಿ ಚಿಕಿತ್ಸೆ ಪಡೆಯಬಹುದಾದ 1,000 ಜನರಿಗೆ ಪರಿಹಾರವನ್ನು ನೀಡುವುದರಿಂದ ವೈದ್ಯಕೀಯ ವ್ಯವಸ್ಥೆಯಲ್ಲಿನ ಕನಿಷ್ಠ 20% ರಷ್ಟು ಒತ್ತಡ ಕಡಿಮೆಯಾಗುತ್ತದೆ ಎಂದು ಪೃಥ್ವಿ ರೆಡ್ಡಿ ತಿಳಿಸಿದರು.
ಈ ಸೇವೆಯ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತಿರುವ ಪಕ್ಷದ ನೀತಿ ಮತ್ತು ಸಂಶೋಧನಾ ವಿಭಾಗದ ಮುಖ್ಯಸ್ಥ ಪ್ರಕಾಶ್ ನೆಡುಂಗಡಿ ಹಾಗೂ ಅವರ ತಂಡದ ಸದಸ್ಯರಾದ ವಿಜಯ್ ಶಾಸ್ತ್ರಿ ಭಟ್ ಉಪಸ್ಥಿತರಿದ್ದರು.