ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ ನೌಕರರ ಅನಿರ್ದಿಷ್ಟಾವಧಿ ಮುಷ್ಕರ 13ನೇ ದಿನವೂ ಮುಂದುವರಿದಿದ್ದು, ಇಂದು ರಾಜ್ಯದ ಎಲ್ಲಾ ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ನೌಕರರು ಸತ್ಯಾಗ್ರಹ ನಡೆಸಲಿದ್ದಾರೆ.
ಇದರ ಅಂಗವಾಗಿ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬೆಂಗಳೂರಿನಲ್ಲಿರುವ ನೌಕರರು ನೌಕರರ ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ 50ಕ್ಕೂ ಹೆಚ್ಚು ಸಂಘಟನೆಗಳ ಸಹಯೋಗದಲ್ಲಿ ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ.
ರಾಜ್ಯದ ಎಲ್ಲಾ ಸಾರಿಗೆ ಡಿಪೋಗಳಲ್ಲಿ ಇಂದು ಬೆಳಗ್ಗೆ 6 ಗಂಟೆಯಿಂದ ಸತ್ಯಾಗ್ರಹ ಆರಂಭಿಸಿದ್ದು, ಡಿಪೋಗಳಿಂದ ಬಸ್ ಔಟ್ ಮಾಡುತ್ತಿರುವ ನೌಕರರನ್ನು ಎಚ್ಚರಿಸುವ ಕೆಲಸ ಮಾಡುತ್ತಿದ್ದು, 6ನೇ ವೇತನ ಆಯೋಗ ನಮಗೂ ಜಾರಿಯಾದರೆ ಒಂದು ಒಳ್ಳೆ ಜೀವನ ನಡೆಸಬಹುದು ಎಂಬ ಸಂದೇಶ ಸಾರುತ್ತಿದ್ದಾರೆ.
ಆದರೂ ಕೆಲವೇ ಕೆಲವು ನೌಕರರು ಅದ್ಯಾವುದನ್ನು ಲೆಕ್ಕಿಸದೆ ಬಸ್ಗಳನ್ನು ಓಡಿಸುತ್ತಿದ್ದಾರೆ. ಹೀಗಿದ್ದರೂ ಪ್ರತಿಭಟನಾ ನಿರತ ನೌಕರರ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದಾರೆ. ಇನ್ನು ಬ್ಯಾಡಗಿ ಘಟಕದ ಮುಂದೆ ಸಾರಿಗೆ ನೌಕರರು ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾರೆ.
ಸಾಗರ ಘಟಕದ ಮುಂದೆಯೂ ಸಾರಿಗೆ ನೌಕರರು ಉಪವಾಸ ಸತ್ಯಾಗ್ರಹ ಮಾಡಿ ಘಟಕದ ಸುತ್ತ ಮುತ್ತ ಸ್ವಚ್ಛಗೊಳಿಸುವ ಕಾರ್ಯವನ್ನು ಕೈಗೊಂಡು ಸ್ವಚ್ಛತೆಯಲ್ಲೂ ತೊಡಗುವ ಮೂಲಕ ಸಾರಿಗೆಯಲ್ಲಿರುವ ಇಂಥ ಕ್ರಿಮಿಗಳನ್ನು ದೂರವಿಡಬೇಕು ಎಂಬ ಸಂದೇಶವನ್ನು ಸಾರಿದ್ದಾರೆ.