ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಕೊರೊನಾ ಸೋಂಕಿನಿಂದ ಮೃತಪಟ್ಟವರ ಶವ ಸಂಸ್ಕಾರ ಮಾಡಲೂ ಸಾಧ್ಯವಾಗದಷ್ಟು ನೀಚ ಮಟ್ಟಕ್ಕಿಳಿದ ಸರಕಾರ ರಾಜ್ಯದಲ್ಲಿದೆ ಎಂದು ಸಂಸದ ಡಿ.ಕೆ.ಸುರೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶವ ಸಂಸ್ಕಾರ ನಡೆಸಲು ಹಿಂದೂ ಧರ್ಮದಲ್ಲಿ ವಿಶೇಷ ಪದ್ಧತಿಗಳು ಇರುತ್ತವೆ. ಆದರೆ ಸರ್ಕಾರ ಅದಾವುದನ್ನು ಗಮನಕ್ಕೆ ತೆಗೆದುಕೊಳ್ಳದೆ ಸಿಕ್ಕಸಿಕ್ಕರೀತಿಯಲ್ಲಿ ಮೃತದೇಹಗಳನ್ನು ಸುಟ್ಟುಹಾಕುತ್ತಿದೆ. ಇದು ಮೃತರ ಸಂಬಂಧಿಗಳಲ್ಲಿ ಎಷ್ಟು ನೋವು ತರಿಸುತ್ತೆ ಎಂಬುದರ ಅರಿವೂ ಸರ್ಕಾರಕ್ಕೆ ಇಲ್ಲದಿರುವುದು ದುರಂತ ಎಂದು ಅಸಮಾಧಾನ ಹೊರಹಾಕಿದರು.
ಇಂದಿನ ಅವ್ಯವಸ್ಥೆ ಬಗ್ಗೆ ವಿಪಕ್ಷದ ನಾಯಕನಾಗಿ ನಾನು ಮಾತ್ರ ಹೇಳುತ್ತಿರುವುದಲ್ಲ. ಸಾಮಾನ್ಯ ಜನರು, ಚಿತ್ರನಟರು, ಕಲಾವಿದರು, ಸಾಹಿತಿಗಳು, ಬುದ್ಧಿಜೀವಿಗಳು ಸಹಾ ಹೇಳಿಕೊಂಡು ಕಣ್ಣೀರು ಹಾಕುತ್ತಿದ್ದಾರೆ ಎಂದು ತಿಳಿಸಿದರು.
ಚಿತಾಗಾರದಲ್ಲಿ ಅಂತ್ಯ ಸಂಸ್ಕಾರಕ್ಕೆ ಅವಕಾಶ ನೀಡಿ ಎಂದು ಸರದಿ ಸಾಲಿನಲ್ಲಿ ನಿಂತು ಪರಿಪರಿಯಾಗಿ ಬೇಡಿಕೊಳ್ಳುತ್ತಿದ್ದಾರೆ. ಆದರೂ, ಇದರ ಬಗ್ಗೆ ಸರ್ಕಾರ ಗಮನ ಹರಿಸುತ್ತಿಲ್ಲ. ಹೀಗಾಗಿ ನಾಳೆ ರಾಜ್ಯ ಸಂಪುಟ ಸಚಿವರು ಬೆಂಗಳೂರು ಶಾಸಕರ ಸಭೆ ನಡೆಯಲಿದ್ದು ಆ ಸಭೆಯಲ್ಲಿ ವಿಚಾರಗಳನ್ನು ಮಂಡನೆ ಮಾಡಿ ಚರ್ಚಿಸುತ್ತೇವೆ ಎಂದು ತಿಳಿಸಿದರು.