ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ ನೌಕರರ ಅನಿರ್ದಿಷ್ಟಾವಧಿ ಮುಷ್ಕರ 12ನೇ ದಿನವೂ ಮುಂದುವರಿದಿದ್ದು, ಇಂದು ರಾಜ್ಯದ ಎಲ್ಲಾ ಸಂಘಟನೆಗಳ ಮುಖಂಡರ ಸಭೆ ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ನಡೆಯಲಿದೆ.
ಈ ಸಭೆಯಲ್ಲಿ ನಾಳೆ (ಏ.19) ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಹಮ್ಮಿಕೊಳ್ಳಲಿರುವ ನೌಕರರ ಪ್ರತಿಭಟನೆ ಸಾಥ್ ನೀಡಬೇಕು ಎಂದು ಮನವಿ ಮಾಡಲಿದ್ದು, ಈಗಾಗಲೇ ಬಹುತೇಕ ಎಲ್ಲಾ ಸಂಘಟನೆಗಳು ನಾಳೆ ನಡೆಯುವ ಪ್ರತಿಭಟನೆಗೆ ಬೆಂಬಲವಾಗಿ ನಿಲ್ಲುವುದಾಗಿ ಭರವಸೆ ನೀಡಿವೆ ಎಂದು ಕೂಟದ ಜಂಟಿ ಕಾರ್ಯದರ್ಶಿ ಆನಂದ ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಎಲ್ಲಾ ಸಾರಿಗೆ ನೌಕರರು ನಾಳೆ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಸರ್ಕಾರದ ಧೋರಣೆ ವಿರುದ್ಧ ಪ್ರತಿಭಟನೆ ನಡೆಸಿ ಬೇಡಿಕೆ ಈಡೇರಿಸಬೇಕು ಎಂಬ ಒತ್ತಾಯದ ಮನವಿ ಪತ್ರವನ್ನು ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.
ಇನ್ನು ಬೆಂಗಳೂರಿನಲ್ಲಿರುವ ಸಾರಿಗೆ ನೌಕರರು ಸೋಮವಾರ ಬೆಳಗ್ಗೆ ಫ್ರೀಡಂ ಪಾರ್ಕ್ನಲ್ಲಿ ಕೊರೊನಾ ನಿಯಮ ಪಾಲಿಸುವ ಮೂಲಕ ಮುಷ್ಕರದ ಹಿನ್ನೆಲೆಯಲ್ಲಿ ನಡೆಯುವ ಪ್ರತಿಭಟನೆಯಲ್ಲಿ ಭಾಗವಹಿಸಬೇಕು ಎಂದು ತಿಳಿಸಿದ್ದಾರೆ.
ಇನ್ನು ನಿನ್ನೆ ಕಾರ್ಮಿಕ ಆಯುಕ್ತರಿಗೆ ಮಾರ್ಚ್ ತಿಂಗಳ ವೇತನ ನೀಡದಿರುವ ಸಾರಿಗೆ ಇಲಾಖೆ ವಿರುದ್ಧ ಏನು ಕ್ರಮ ಜರುಗಿಸಿದ್ದೀರಿ ಎಂಬ ಬಗ್ಗೆ ಮಾಹಿತಿ ಪಡೆದು ಮತ್ತೊಮ್ಮೆ ಮನವಿ ಸಲ್ಲಿಸಲಿದ್ದಾರೆ.
ಈ ನಡುವೆ ಮುಷ್ಕರದ 10ನೇ ಇನವಾದ ಶುಕ್ರವಾರ ರಾಜ್ಯದ 224 ಶಾಸಕರ ಮನೆ ಮುಂದೆ ಧರಣಿ ನಡೆಸಿ ಮನವಿ ಪತ್ರ ಸಲ್ಲಿಸುವ ಚಳವಳಿ ಬೆಳಗ್ಗೆ 8ಗಂಟೆಯಿಂದಲೇ ಶುರುವಾಗಿ ಮಧ್ಯಾಹ್ನದ ವರೆಗೆ ನಡೆಯಿತು.
ಈ ವೇಳೆ ಹಲವು ಶಾಸಕರಿಗೆ ಸಾರಿಗೆ ನೌಕರರು ಮನವಿ ಸಲ್ಲಿಸುವ ಮೂಲಕ ಸರ್ಕಾರವೇ ಭರವಸೆ ಕೊಟ್ಟಿರುವ 6ನೇ ವೇತನ ಆಯೋಗ ಜಾರಿ ಮಾಡುವಂತೆ ಆಗ್ರಹಿಸಿ, ನಮ್ಮ ನ್ಯಾಯಯುತ ಬೇಡಿಕೆ ಈಡೇರಿಕೆಗೆ ಸಹಕರಿಸುವ ಮೂಲಕ ನಮ್ಮನ್ನು ಬೆಂಬಲಿಸಿ ಎಂದು ಕೇಳಿಕೊಂಡರು.
ಮುಷ್ಕರದ 6ನೇ ದಿನದಂದು ತಟ್ಟೆ ಲೋಟ ಬಡಿಯುವ ಚಳವಳಿ ಮಾಡಿದ್ದರು. ಈ ವೇಳೆ ಹಲವರನ್ನು ಬಂಧಿಸಿದ ಪೊಲೀಸರು ನಂತರ ಬಿಡುಗಡೆ ಮಾಡಿದ್ದರು. ಮುಷ್ಕರದ 7ನೇ ದಿನವಾದ ಚಂದ್ರಮಾನ ಯುಗಾದಿಯ ದಿನದಂದು ತಟ್ಟಿ ಹಿಡಿದು ಭಿಕ್ಷೆ ಬೇಡುವ ಚಳವಳಿ ಮಾಡಲಾಯಿತು.
ಮುಷ್ಕರದ 8ನೇ ದಿನದಂದು ಅಂದರೆ ಏ.14ರಂದು ಅಂಬೇಡ್ಕರ್ ಪುತ್ಥಳಿ, ಪ್ರತಿಮೆ ಮತ್ತು ಫೋಟೋಗಳಿಗೆ ಮಾಲಾರ್ಪಣೆ ಹಾಗೂ ಪುಷ್ಪಾರ್ಚನೆ ಮಾಡುವ ಮೂಲಕ ವಿನೂತನ ಚಳವಳಿ ನಡೆಸಿದ್ದು, ಮುಷ್ಕರದ 9ನೇ ದಿನದಂದು ಮೇಣದ ಬತ್ತಿ ಹಚ್ಚುವ ಮೂಲಕ ನಮ್ಮ ಬದುಕನ್ನು ಕತ್ತಲೆಗೆ ದೂಡುತ್ತಿರುವ ಸರ್ಕಾರ ಮತ್ತು ಸಾರಿಗೆ ಸಚಿವರು ಮತ್ತು ಅಧಿಕಾರಿಗಳ ಕಣ್ತೆರೆಸುವ ಚಳವಳಿ ಮಾಡಿದರು.
ಇನ್ನು ನೌಕರರ ಮುಷ್ಕರ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆಯುತ್ತಿದೆ. ಆದರೂ ಸರ್ಕಾರ ತನ್ನ ಮೊಂಡು ತನವನ್ನು ಪ್ರದರ್ಶಿಸುತ್ತಿದೆ. ಈ ನಡುವೆ ಈಗಾಗಲೇ ಸರ್ಕಾರದ ನಡೆಯಿಂದ ನೊಂದ ನೌಕರರು ಆತ್ಮಹತ್ಯೆ ಹಾದಿ ಹಿಡಿಯುತ್ತಿದ್ದಾರೆ.