NEWSನಮ್ಮರಾಜ್ಯರಾಜಕೀಯ

ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಧರ್ಮಗಳ ಮಧ್ಯೆ ಕಂದಕ ಸೃಷ್ಟಿಸುತ್ತಿದೆ ಬಿಜೆಪಿ: ಮಾಜಿ ಎಂಪಿ ಡಾ. ವಿ.ವೆಂಕಟೇಶ್‌

ಕೋಲಾರ ಮಾಜಿ ಎಂಪಿ ಡಾ. ವಿ.ವೆಂಕಟೇಶ್‌ ಎಎಪಿ ಸೇರ್ಪಡೆ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಸಾವಿನಿಂದ ಉಂಟಾಗಿದ್ದ ಅನುಕಂಪದ ಅಲೆಯನ್ನು ಭೇದಿಸಿ, 1984ರಲ್ಲಿ ಜನತಾ ಪಕ್ಷದಿಂದ ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಜಯಗಳಿಸಿದ್ದ ಮಾಜಿ ಸಂಸದ ಡಾ. ವಿ.ವೆಂಕಟೇಶ್‌ ಅವರು ಆಮ್‌ ಆದ್ಮಿ ಪಾರ್ಟಿಗೆ ಶುಕ್ರವಾರ ಸೇರ್ಪಡೆಯಾದರು.

ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸಮಾರಂಭದಲ್ಲಿ ಎಎಪಿ ಸೇರಿ ಮಾತನಾಡಿದ ಡಾ. ವಿ.ವೆಂಕಟೇಶ್‌, “ಕಾಂಗ್ರೆಸ್‌ನ ಕುಟುಂಬ ರಾಜಕಾರಣವನ್ನು ವಿರೋಧಿಸಿ ಜನತಾ ಪಕ್ಷ ಅಸ್ತಿತ್ವಕ್ಕೆ ಬಂದಿತು. ಆದರೆ ಜನತಾ ಪಕ್ಷ ವಿಭಜನೆಯಾಗಿದ್ದರಿಂದ ಹುಟ್ಟಿಕೊಂಡ ಜೆಡಿಎಸ್‌ನಲ್ಲಿ ಕುಟುಂಬ ರಾಜಕಾರಣವೇ ತುಂಬಿಕೊಂಡಿದೆ. ಈಗ ದೇಶದ ಬಹುತೇಕ ಪಕ್ಷಗಳು ಕುಟುಂಬಗಳ ಸ್ವತ್ತಾಗಿಬಿಟ್ಟಿವೆ.

ಈ ಕುಟುಂಬ ರಾಜಕೀಯವನ್ನು ವಿರೋಧಿಸಿ ಮುನ್ನೆಲೆಗೆ ಬಂದ ಬಿಜೆಪಿಯು ಕೋಮು ರಾಜಕೀಯದಲ್ಲಿ ನಿರತವಾಗಿದೆ. ಎಲ್ಲ ಧರ್ಮಗಳನ್ನು, ಜಾತಿಗಳನ್ನು ಗೌರವಿಸಬೇಕೆಂಬ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಬಿಜೆಪಿಯು ಧರ್ಮಗಳ ಮಧ್ಯೆ ಕಂದಕ ಸೃಷ್ಟಿಸುತ್ತಿದೆ” ಎಂದು ಹೇಳಿದರು.

ಎಲ್ಲ ಪಕ್ಷಗಳ ನಡೆಯನ್ನು ಇಷ್ಟು ವರ್ಷಗಳ ಕಾಲ ಸೂಕ್ಷ್ಮವಾಗಿ ಗಮನಿಸುತ್ತಿದ್ದೆ. ರಾಜಕೀಯ ಪಕ್ಷಗಳು ದೇಶವಿರೋಧಿ, ಸಂವಿಧಾನವಿರೋಧಿ ಹಾಗೂ ಮನುಷ್ಯತ್ವದ ವಿರೋಧಿಯಾಗಿರುವುದನ್ನು ಕಂಡು ಸಕ್ರಿಯ ರಾಜಕೀಯದಿಂದ ದೂರ ಉಳಿದಿದ್ದೆ. ಎಲ್ಲರನ್ನೂ ಒಂದುಗೂಡಿಸುವ ನಾಯಕತ್ವಕ್ಕಾಗಿ ದಶಕಗಳಿಂದ ಕಾಯುತ್ತಿದೆ. ಅಂತಹ ನಾಯಕತ್ವವು ಆಮ್‌ ಆದ್ಮಿ ಪಾರ್ಟಿಯಲ್ಲಿದೆ ಎಂದರು.

ಬೇರೆ ಪಕ್ಷಗಳು ಕೇವಲ ಘೋಷಣೆ ಮಾಡಿ ಜನತೆಯನ್ನು ವಂಚಿಸಿದರೆ, ಅರವಿಂದ್‌ ಕೇಜ್ರಿವಾಲ್‌ ನೇತೃತ್ವದ ಆಮ್‌ ಆದ್ಮಿ ಪಾರ್ಟಿಯು ಘೋಷಣೆಗಳನ್ನು ಕಾರ್ಯರೂಪಕ್ಕೆ ತರುವ ಕೆಲಸ ಮಾಡುತ್ತಿದೆ. ಆದ್ದರಿಂದಲೇ ದೆಹಲಿಯಲ್ಲಿ ಪಕ್ಷವು ನಿರಂತರವಾಗಿ ಜಯಗಳಿಸಿದೆ ಎಂದು ಡಾ. ವಿ.ವೆಂಕಟೇಶ್‌ ಅಭಿಪ್ರಾಯಪಟ್ಟರು.

ಆಮ್‌ ಆದ್ಮಿ ಪಾರ್ಟಿಯ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ಮಾತನಾಡಿ, 1984ರಲ್ಲಿ ಇಂದಿರಾ ಗಾಂಧಿಯವರು ಸಾವನ್ನಪ್ಪಿದಾಗ ಇಡೀ ದೇಶದಲ್ಲಿ ಕಾಂಗ್ರೆಸ್‌ ಪರ ಅನುಕಂಪದ ಅಲೆ ಸೃಷ್ಟಿಯಾಗಿತ್ತು. ಆ ಚುನಾವಣೆಯಲ್ಲಿ ಕಾಂಗ್ರೆಸೇತರ ಅಭ್ಯರ್ಥಿಗಳು ಸೆಣಸಾಡುವುದು ಬಹಳ ಕಷ್ಟವಾಗಿತ್ತು.

ಆ ಅನುಕಂಪದ ಅಲೆಯನ್ನು ಭೇದಿಸಿ ಗೆಲುವು ಸಾಧಿಸಿದ ಕೆಲವೇ ಕೆಲವು ನಾಯಕರಲ್ಲಿ ಡಾ. ವಿ.ವೆಂಕಟೇಶ್‌ ಒಬ್ಬರು. ಕಾಂಗ್ರೆಸ್‌ಗೆ 414 ಸ್ಥಾನ ಲಭಿಸಿದಾಗಲೂ ಇವರು ಜನತಾ ಪಕ್ಷದಿಂದ ಗೆದ್ದಿದ್ದಾರೆಂದರೆ ಜನರೊಂದಿಗೆ ಇವರಿಗಿದ್ದ ನಂಟು ಹೇಗಿತ್ತೆಂಬುದನ್ನು ಊಹಿಸಬಹುದು ಎಂದು ಹೇಳಿದರು.

ಆಮ್‌ ಆದ್ಮಿ ಪಾರ್ಟಿಯ ಹಿರಿಯ ಮುಖಂಡ ಹಾಗೂ ಮಾಜಿ ಶಾಸಕ ಎಚ್‌.ಡಿ.ಬಸವರಾಜು ಮಾತನಾಡಿ, “ಡಾ. ವಿ.ವೆಂಕಟೇಶ್‌ ಅವರು ಸಂಸದರಾಗಿದ್ದ ಸಂದರ್ಭದಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡುವ ಸರೋಜಿನಿ ಮಹಿಷಿ ವರದಿಯ ಪರಾಮರ್ಶೆ ಸಮಿತಿ ಸೇರಿದಂತೆ ಹಲವು ಸಮಿತಿಗಳ ಅಧ್ಯಕ್ಷರು ಹಾಗೂ ಸದಸ್ಯರಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.

ವಿಧಾನಸೌಧದ ಎದುರಿಗಿರುವ ಅಂಬೇಡ್ಕರ್‌ ಪ್ರತಿಮೆ ಸ್ಥಾಪನೆಯ ಹಿಂದೆ ಡಾ. ಬಿ.ಆರ್‌.ಅಂಬೇಡ್ಕರ್‌ ಮಿಷನ್‌ ಅಧ್ಯಕ್ಷರಾಗಿದ್ದ ಇವರ ಹೋರಾಟವಿದೆ. ಕನಕಪುರ ರಸ್ತೆಯಲ್ಲಿರುವ ದಯಾನಂದ ಆರ್ಯ ವಿದ್ಯಾಲಯ (ಡಿಎಪಿ) ಪಬ್ಲಿಕ್‌ ಶಾಲೆಯ ಸಂಸ್ಥಾಪಕ ಹಾಗೂ ಅದರ ನಿವೇಶನದ ದಾನಿಯಾಗಿದ್ದಾರೆ.

ಯೋಗಗುರು ಬಾಬಾ ರಾಮದೇವ್‌ ಅವರ ಜೊತೆಗೂಡಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕೇರಳ-ಕರ್ನಾಟಕ ಗಡಿಯಲ್ಲಿ ಬುಡಕಟ್ಟು ಜನಾಂಗದವರಿಗಾಗಿ ಆಸ್ಪತ್ರೆ ಆರಂಭಿಸಿ ಮುನ್ನಡೆಸುತ್ತಿದ್ದಾರೆ. ಜನಸಾಮಾನ್ಯರ ಬಗ್ಗೆ ಅಪಾರ ಕಾಳಜಿ ಹೊಂದಿರುವ ಡಾ. ವಿ.ವೆಂಕಟೇಶ್‌ ಅವರ ಸೇರ್ಪಡೆಯು ನಮ್ಮ ಉತ್ಸಾಹವನ್ನು ಇಮ್ಮಡಿಗೊಳಿಸಿದೆ ಎಂದು ಹೇಳಿದರು.

ಬೆಂಗಳೂರು ನಗರ ಆಮ್‌ ಆದ್ಮಿ ಪಾರ್ಟಿ ಅಧ್ಯಕ್ಷ ಮೋಹನ್‌ ದಾಸರಿ ಮಾತನಾಡಿ, “ಪಕ್ಷದ ಸಿದ್ಧಾಂತ ಹಾಗೂ ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ರವರ ಪಾರದರ್ಶಕ ಆಡಳಿತವನ್ನು ಮೆಚ್ಚಿ ಅನೇಕರು ಆಮ್‌ ಆದ್ಮಿ ಪಾರ್ಟಿ ಸೇರುತ್ತಿದ್ದಾರೆ. ಮಾಜಿ ಸಂಸದರಾದ ಡಾ. ವಿ.ವೆಂಕಟೇಶ್‌, ಮಾಜಿ ಶಾಸಕರಾದ ಎಚ್‌.ಡಿ.ಬಸವರಾಜು ಮುಂತಾದ ಅನುಭವಿಗಳ ಮಾರ್ಗದರ್ಶನದಲ್ಲಿ ಪಕ್ಷವು ಇನ್ನಷ್ಟು ಬಲಿಷ್ಠವಾಗಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಆಮ್‌ ಆದ್ಮಿ ಪಾರ್ಟಿಯ ರಾಜ್ಯ ಉಸ್ತುವಾರಿ ರೋಮಿ ಭಾಟಿ ಹಾಗೂ ಪಕ್ಷದ ಮುಖಂಡರಾದ ಸಂಚಿತ್‌ ಸೆಹವಾನಿ, ಜಗದೀಶ್‌ ವಿ. ಸದಂ, ದರ್ಶನ್‌ ಜೈನ್‌, ಮಂಜುನಾಥ ಸ್ವಾಮಿ, ಡಾ. ವಿಶ್ವನಾಥ್‌, ರವಿಶಂಕರ್‌, ಜಗದೀಶ್‌ ಚಂದ್ರ, ಶರತ್‌ ಖಾದ್ರಿ, ಪ್ರಭುಸ್ವಾಮಿ ಹಾಗೂ ಇನ್ನಿತರ ಮುಖಂಡರು ಭಾಗವಹಿಸಿದ್ದರು.

Leave a Reply

error: Content is protected !!
LATEST
ವಿಜಯಪಥ: ಸಂಬಳ ಕುರಿತ KSRTC ಅಧಿಕಾರಿಗಳು/ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವೇತನ ಸಂಬಂಧ ಸಾರಿಗೆ  4 ನಿಗಮಗಳ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನ KSRTC ಚಾಲನಾ ಸಿಬ್ಬಂದಿ ತಮ್ಮ ಜೀವವನ್ನು ಪಣಕ್ಕಿಟ್ಟು ಸಲ್ಲಿಸುವ ಸೇವೆ ಅವಿಸ್ಮರಣೀಯ- ಶ್ರೀ ಸೌಮ್ಯನಾಥ ಸ್ವಾಮೀಜಿ ಶ್ಲಾಘ... ಬನ್ನೂರು: ಸ್ಮಶಾನ ರಸ್ತೆಗಾಗಿ ಶವವಿಟ್ಟು ಮುಖ್ಯರಸ್ತೆ ಬಂದ್‌ಮಾಡಿ ಪ್ರತಿಭಟನೆ ದೀಪಾವಳಿಗೂ ಮುನ್ನ ಸರ್ಕಾರಿ ನೌಕರರಿಗೆ ಗಿಫ್ಟ್‌: ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಳ KSRTC: ಒಂದೇ ಆಧಾರ್‌ನ 3ಜೆರಾಕ್ಸ್‌ ಪ್ರತಿ ಹಿಡಿದು ಟಿಕೆಟ್‌ ಕೇಳಿದ ನಾರಿಮಣಿಗಳು- ಪರಿಶೀಲಿಸಿದ ಕಂಡಕ್ಟರ್‌ಗೆ ನಾನು ಸರ... ಅ.21 ರಿಂದ ನ.20 ರವರೆಗೆ 6ನೇ ಸುತ್ತಿನ ಕಾಲುಬಾಯಿ ಲಸಿಕೆ: DC ಡಾ.ಶಿವಶಂಕರ ಪೋಕ್ಸೋ ಕಾಯ್ದೆಯನ್ವಯ ಸಂತ್ರಸ್ತ ಮಕ್ಕಳಿಗೆ ಸೇವೆ ಸಲ್ಲಿಸಲು ಅರ್ಜಿ ಆಹ್ವಾನ ಬೆಂ.ಗ್ರಾಂ.ಜಿಲ್ಲೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮಹೇಶ್ವರಿಗೆ 1 ಲಕ್ಷ ರೂ. ಪ್ರೋತ್ಸಾಹ ಧ... BBMP: ಮಳೆಯಿಂದ ಸಮಸ್ಯೆ ಆಗಿದ್ದರೆ ಕೂಡಲೇ 1533ಕ್ಕೆ ಕರೆ ಮಾಡಿ ದೂರು ನೀಡಿ