NEWSಕೃಷಿರಾಜಕೀಯ

ರಾಜ್ಯ ಬಜೆಟ್‌ ಅಲ್ಲ, ಬಂಡಲ್‌ ಬಜೆಟ್: ಎಎಪಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಚುನಾವಣಾ ಗಿಮಿಕ್‌ಗಾಗಿ ಬಂಡಲ್‌ ಬಜೆಟ್‌ ಮಂಡಿಸಿದ್ದು, ಫ್ರೀಡಂ ಪಾರ್ಕ್‌ನಲ್ಲಿ ವಿವಿಧ ಪ್ರತಿಭಟನೆ ನಡೆಸುತ್ತಿರುವ ಜನರನ್ನು ಬಜೆಟ್‌ ತಯಾರಿಗೂ ಮುನ್ನ ಭೇಟಿಯಾಗಿದ್ದರೆ ವಾಸ್ತವಕ್ಕೆ ಹತ್ತಿರವಿರುವ ಬಜೆಟ್‌ ಮಂಡಿಸಬಹುದಿತ್ತು ಎಂದು ಆಮ್‌ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಹೇಳಿದ್ದಾರೆ.

Loading poll ...
KSRTC ನೌಕರರಿಗೆ ಸರಿಸಮಾನ ವೇತನ OR ಅಗ್ರಿಮೆಂಟ್‌ ನಿಮ್ಮ ಆಯ್ಕೆ ಯಾವುದು?

2023-24ನೇ ಸಾಲಿನ ರಾಜ್ಯ ಬಜೆಟ್‌ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಪೃಥ್ವಿ ರೆಡ್ಡಿ, ಬಿಜೆಪಿಯ ಚುನಾವಣಾ ಖರ್ಚಿಗಾಗಿ ವ್ಯವಸ್ಥೆ ಮಾಡಿಕೊಳ್ಳಲು ಸಿಎಂ ಬೊಮ್ಮಾಯಿಯವರು ಬಜೆಟ್‌ ಮಂಡಿಸಿದ್ದಾರೆ. ರೈತರಿಗೆ 3ರಿಂದ 5 ಲಕ್ಷದ ತನಕ ಬಡ್ಡಿರಹಿತ ಸಾಲ ಕೊಡುವುದಾಗಿ ಘೋಷಿಸಿ, ಮುಳುಗುತ್ತಿರುವ ದೋಣಿ ಮೇಲೆ ಇನ್ನಷ್ಟು ಭಾರ ಹೊರಿಸಿ ನಾಶ ಮಾಡಲು ಹೊರಟಿದ್ದಾರೆ. ಹೀಗೆ ರೈತರನ್ನು ಸಾಲದಲ್ಲಿ ಸಿಲುಕಿಸುವ ಬದಲು ಎಂಎಸ್‌ಪಿ, ಬೆಂಬಲ ಬೆಲೆ ಹೆಚ್ಚಿಸಬೇಕಿತ್ತು ಎಂದು ಕಿಡಿಕಾರಿದರು.

ಇನ್ನು ನಿರುದ್ಯೋಗದ ಸಮಸ್ಯೆ ಬಗೆಹರಿಸಲು ಬಜೆಟ್‌ನಲ್ಲಿ ಯಾವುದೇ ಪರಿಹಾರವಿಲ್ಲ. ತರಗತಿಗಳನ್ನು ಕಟ್ಟಿದ ಮಾತ್ರಕ್ಕೆ ಶಾಲೆಗಳ ಸಮಸ್ಯೆಗಳು ಬಗೆಹರಿಯುವುದಿಲ್ಲ. ಶಿಕ್ಷಕರಿಗೆ ಉನ್ನತವಾದ ತರಬೇತಿ ನೀಡಬೇಕು. ಸಮವಸ್ತ್ರ ಕೊಡಲು ಸಾಧ್ಯವಾಗದಿರುವುದಕ್ಕೆ ಹೈಕೋರ್ಟ್‌ ಛೀಮಾರಿ ಹಾಕಿರುವಾಗ ಬೇರೆ ಯೋಜನೆಗಳನ್ನು ಸರ್ಕಾರ ಹೇಗೆ ಜಾರಿಗೆ ತರಲಿದೆ? ಅಂಗನವಾಡಿ ಮಕ್ಕಳಿಗೆ ಈ ತಿಂಗಳು ಇನ್ನೂ ಮೊಟ್ಟೆ ಹಾಗೂ ಇತರೆ ಆಹಾರ ಪೂರೈಕೆಯಾಗಿಲ್ಲ ಇದನ್ನೇ ಮಾಡಲಾಗದವರು ಇನ್ನೇನು ಮಾಡಲು ಸಾಧ್ಯ ಎಂದು ಪ್ರಶ್ನಿಸಿದರು.

ಮುಖ್ಯಮಂತ್ರಿಯವರು ಬಜೆಟ್‌ ಮಂಡಿಸುವುದಕ್ಕೂ ಮುನ್ನ ಫ್ರೀಡಂ ಪಾರ್ಕ್‌ಗೆ ಹೋಗಿ ಪ್ರತಿಭಟನಾ ನಿರತರನ್ನು ಮಾತನಾಡಿಸಿದ್ದರೆ, ಜನರ ಸಮಸ್ಯೆಗಳು ಅರಿವಿಗೆ ಬರುತ್ತಿತ್ತು. ಕಳೆದ ಬಜೆಟ್‌ನಲ್ಲಿದ್ದ ಸುಮಾರು ನೂರು ಘೋಷಣೆಗಳು ಬಾಕಿ ಉಳಿದಿದ್ದು, ಈಗ ಅದನ್ನೇ ಮತ್ತೆ ಘೋಷಣೆ ಮಾಡಿದ್ದಾರೆ.

ಜಯದೇವ ಹೃದ್ರೋಗ ಆಸ್ಪತ್ರೆಗಳನ್ನು ಬೇರೆಬೇರೆ ಜಿಲ್ಲೆಗಳಲ್ಲಿ ಸ್ಥಾಪಿಸುವ ಯಾವುದೇ ಪ್ರಸ್ತಾಪವಿಲ್ಲ. ಕ್ರೀಡಾ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸುವ ಬಗ್ಗೆ ಕೂಡ ಘೋಷಣೆಯಿಲ್ಲ. ತುಮಕೂರಿಗೆ ಮೆಟ್ರೋ ವಿಸ್ತರಣೆ ಮಾಡುವ ಪ್ರಸ್ತಾಪವಿಲ್ಲ. ತೆಂಗು ಬೆಳೆಗಾರರಿಗೆ ವಿಶೇಷ ಆರ್ಥಿಕ ವಲಯ ಘೋಷಣೆಯಾಗಿಲ್ಲ.

ಎತ್ತಿನ ಹೊಳೆ, ಕೃಷ್ಣಾ ನದಿ ನೀರಿಗೆ ಸಂಬಂಧಿಸಿದ ಯಾವುದೇ ವಿಶೇಷ ಯೋಜನೆಯಿಲ್ಲ. ಚಿಕ್ಕಬಳ್ಳಾಪುರ ಮತ್ತು ಕೋಲಾರ ಭಾಗಗಳಿಗೆ ನೀರನ್ನು ಹರಿಸಲು ಎನ್‌.ಎಚ್‌.ವ್ಯಾಲಿಯ ಮೂರು ಹಂತದ ನೀರು ಶುದ್ಧೀಕರಣ ಮಾಡಲು ಯಾವುದೇ ಪ್ರಸ್ತಾಪವಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಜಕೀಯ ಕಾರಣಗಳಿಗಾಗಿ ರಾಜೀವ್‌ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯವನ್ನು ಸ್ಥಾಪಿಸುವುದನ್ನು ಬೊಮ್ಮಾಯಿ ಅವರು ಘೋಷಣೆ ಮಾಡಿಲ್ಲ. ಹೈಟೆಕ್‌ ರೇಷ್ಮೆ, ಮಾವು, ತೆಂಗು, ಹತ್ತಿ, ತೊಗರಿ ಇವುಗಳಿಗೆ ಅತ್ಯಾಧುನಿಕ ಮಾರುಕಟ್ಟೆ ಕಲ್ಪಿಸುವ ಪ್ರಸ್ತಾಪವಿಲ್ಲ.

ಕೋಲಾರ, ಚಿಕ್ಕಬಳ್ಳಾಪುರ, ಮಾಗಡಿ, ರಾಮನಗರ, ಕನಕಪುರ ಮುಂತಾದ ಜಿಲ್ಲೆಗಳಲ್ಲಿ ವಿಶೇಷ ಕೈಗಾರಿಕಾ ವಲಯ ಸ್ಥಾಪನೆ ಬಗ್ಗೆಯೂ ಬಿಜೆಟ್‌ನಲ್ಲಿ ಹೇಳಲಾಗಿಲ್ಲ. ವಿಶೇಷ ಪಾರಂಪರಿಕ ಸ್ಥಳಗಳ ವೀಕ್ಷಣೆಗೆ ಪ್ರವಾಸಿಗರನ್ನು ಆಕರ್ಷಿಸುವ ಯಾವುದೇ ವಿಶೇಷ ಯೋಜನೆಗಳಿಲ್ಲ. ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಯೋಜನೆಯನ್ನು ಪ್ರಕಟಿಸಿಲ್ಲ ಎಂದರು.

ಮಹಾನಗರಕ್ಕೆ ಸೀಮಿತವಾಗಿರುವ ಐಟಿ ಉದ್ಯಮಗಳನ್ನು ಜಿಲ್ಲಾ ಕೇಂದ್ರಗಳಿಗೂ ವಿಸ್ತರಿಸಲು ಬಜೆಟ್‌ನಲ್ಲಿ ಯಾವುದೇ ಕಾರ್ಯಕ್ರಮಗಳಿಲ್ಲ. ಬೆಂಗಳೂರು-ಚಾಮರಾಜನಗರ ರೈಲು ಮಾರ್ಗದ ಭೂಸ್ವಾಧೀನಕ್ಕೆ ಅನುದಾನದ ಪ್ರಸ್ತಾಪವಿಲ್ಲ. ಕೊಡಗು ರೈಲು ಮಾರ್ಗದ ಕುರಿತೂ ಪ್ರಸ್ತಾಪವಿಲ್ಲ.

ಬೆಂಗಳೂರಿಗೆ ಮತ್ತೆ ಅನುದಾನ ಘೋಷಿಸುವ ಮುನ್ನ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಬೆಂಗಳೂರಿಗೆ ವ್ಯಯಿಸಿರುವ ಕೋಟ್ಯಂತರ ರೂಪಾಯಿ ಅನುದಾನ ಹಾಗೂ ಅದನ್ನು ಖರ್ಚು ಮಾಡಿರುವ ಕುರಿತು ಶ್ವೇತ ಪತ್ರ ಹೊರಡಿಸಬೇಕಿತ್ತು ಎಂದು ಪೃಥ್ವಿ ರೆಡ್ಡಿ ಹೇಳಿದರು.

ಬೆಳಗಾವಿಯಲ್ಲಿರುವ ಸುವರ್ಣ ಸೌಧದ ಸದ್ಬಳಕೆ ಕುರಿತು ಯಾವುದೇ ಕಾರ್ಯಕ್ರಮ ಘೋಷಿಸಿಲ್ಲ. ಬೆಳಗಾವಿ, ಹುಬ್ಬಳ್ಳಿ, ಧಾರವಾಡ ತ್ರಿವಳಿ ನಗರ ರಚನೆಗೆ ಯಾವುದೇ ಯೋಜನೆ ಪ್ರಕಟಿಸಿಲ್ಲ. ಆಲಮಟ್ಟಿ ಡ್ಯಾಂ ಎತ್ತರಗೊಳಿಸುವ ಪ್ರಸ್ತಾಪವಿಲ್ಲ. ಕಲ್ಯಾಣ ಕರ್ನಾಟಕದಲ್ಲಿ ಖಾಲಿಯಿರುವ 25,000 ಹಾಗೂ ರಾಜ್ಯದಲ್ಲಿ ಖಾಲಿಯಿರುವ 2.5 ಲಕ್ಷ ಹುದ್ದೆಗಳನ್ನು ಭರ್ತಿ ಮಾಡುವ ಘೋಷಣೆಯಿಲ್ಲ.

ಗುತ್ತಿಗೆ ಕಾರ್ಮಿಕರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ರಾಷ್ಟ್ರೀಯ ಆರೋಗ್ಯ ಮಿಷನ್‌ ನೌಕರರು ಮುಂತಾದವರಿಗೆ ಯಾವುದೇ ಉದ್ಯೋಗ ಭದ್ರತೆ ಘೋಷಣೆ ಮಾಡಲಾಗಿಲ್ಲ ಎಂದ ಪೃಥ್ವಿ ರೆಡ್ಡಿ ಇಂಥ ಬಂಡಲ್‌ ಬಜೆಟ್‌ ರಾಜ್ಯದ ಜನರಿಗೆ ಬೇಕಾಗಿಲ್ಲ ಎಂದು ಹೇಳಿದರು.

Leave a Reply

error: Content is protected !!
LATEST
ಸಾರಿಗೆ ನೌಕರರಿಂದ ಚುನಾಯಿತರಾಗದ ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ ಸರಿ ಸಮಾನ... KSRTC ನೌಕರರ ಸಂಬಳ ಅ.30ರಂದೇ ಬ್ಯಾಂಕ್ ಖಾತೆಗೆ ಜಮೆ: ಸಂಸ್ಥೆ ನಿರ್ದೇಶಕರು ಬೆಳಗಾವಿಯಲ್ಲಿ ವಿಧಾನಮಂಡಲದ ಜಂಟಿ ಅಧಿವೇಶನಕ್ಕೆ ಬರಾಕ್ ಓಬಾಮಾ ಆಹ್ವಾನಕ್ಕೆ ಚಿಂತನೆ : ಸಚಿವ ಎಚ್.ಕೆ. ಪಾಟೀಲ ಹಸಿರು ಪಟಾಕಿ ಬಳಸಿ ದೀಪಾವಳಿ ಹಬ್ಬ ಆಚರಿಸಿ- ನಿಷೇಧಿತ ಪಟಾಕಿ ಮಾರಾಟ, ಬಳಕೆ ನಿಷೇಧ: ಜಿಲ್ಲಾಧಿಕಾರಿ ಡಾ.ಶಿವಶಂಕರ ಕೆಂಗೇರಿ ಕೆರೆಯಲ್ಲಿ ಮೃತಪಟ್ಟ ಇಬ್ಬರು ಮಕ್ಕಳ ಕುಟುಂಬಕ್ಕೆ ₹5 ಲಕ್ಷ ಪರಿಹಾರ APSRTC ನೌಕರರು ಸಂತೋಷವಾಗಿದ್ದಾರೆ, ಕರ್ನಾಟಕದ ಸಾರಿಗೆ ನೌಕರರು ತೊಂದರೆಗೆ ಒಳಗಾಗಿದ್ದಾರೆ ಇದಕ್ಕೆ ಕಾರಣರಾರು? APSRTC ನೌಕರರಿಗೆ ಸರ್ಕಾರದಿಂದಲೇ ವೇತನ ಪಾವತಿ, 5 ತಿಂಗಳ ಫ್ಯಾಮಿಲಿ ಪಾಸ್‌, ಇನ್ನಷ್ಟು ಸೌಲಭ್ಯಗಳು ಸೇರ್ಪಡೆ BBMP: ನಗರದಲ್ಲಿ ವಿಪತ್ತು ನಿರ್ವಹಣೆಯ ನಿವಾರಣೆಗೆ ತುರ್ತು ಕ್ರಮ: ತುಷಾರ್ ಗಿರಿನಾಥ್ ಕೆಎಸ್‌ಆರ್‌ಟಿಸಿ ರಾಮನಗರ: ಹೊಸ ETM ಮಷಿನ್ ಅವಾಂತರ- ಪಾಸ್ ನಮೂದಿಸಿದರೂ ಟಿಕೆಟ್ ಬರುತ್ತದೆ ! KSRTC: ಇದು ನಿನ್ನ ಮಗುವಲ್ಲ, ಪ್ಯಾಸೆಂಜರ್‌, ಫ್ಯಾಮಿಲಿ ಎದುರೆ ಸಹೋದ್ಯೋಗಿಯ ಅವಮಾನಿಸಿದ ಕಂಡಕ್ಟರ್‌!!?