ಬೆಂಗಳೂರು: ಜಾತಿ ವ್ಯವಸ್ಥೆ ಕಾರಣಕ್ಕೆ ಅಸಮಾನ ಸಮಾಜ ನಿರ್ಮಾಣವಾಗಿ ಅವಕಾಶಗಳು ಎಲ್ಲರಿಗೂ ಸಿಗುತ್ತಿಲ್ಲ. ಶೂದ್ರರ ಜತೆಗೆ ಮಹಿಳೆಯರನ್ನೂ ಶಿಕ್ಷಣದಿಂದ ಹೊರಗಿಡಲಾಗಿತ್ತು. ಆದರೆ ಈಗ ಶಿಕ್ಷಣದ ಹಕ್ಕಿನ ಕಾರಣಕ್ಕೆ ಅವಕಾಶ ಪಡೆದು ಹೆಚ್ಚೆಚ್ಚು ರ್ಯಾಂಕ್ ಪಡೆಯುತ್ತಿರುವವರಲ್ಲಿ ಹೆಣ್ಣು ಮಕ್ಕಳೇ ಹೆಚ್ಚಾಗಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಇಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕರಿಗೆ ಪ್ರಶಸ್ತಿ ನೀಡಿ ಅಭಿನಂದಿಸಿ ಮಾತನಾಡಿದರು.
ಡಾ.ಸರ್ವೆಪಲ್ಲಿ ರಾಧಾಕೃಷ್ಣ ಅವರು ಅತ್ಯಂತ ನೈತಿಕ ಮೌಲ್ಯಗಳುಳ್ಳ ಶಿಕ್ಷಕರೂ, ರಾಷ್ಟ್ರಪತಿಗಳೂ ಆಗಿದ್ದರು. ಇವರ ಆದರ್ಶಗಳನ್ನು ಪಾಲಿಸುವುದೇ ಅವರಿಗೆ ಸಲ್ಲಿಸುವ ಅತ್ಯುನ್ನತ ಗೌರವ ಎಂದರು.
ಮಧು ಬಂಗಾರಪ್ಪ ಮತ್ತು ಎಂ.ಸಿ.ಸುಧಾಕರ್ ಇಬ್ಬರೂ ನಮ್ಮ ಸರ್ಕಾರದ ಅತ್ಯಂತ ಕ್ರಿಯಾಶೀಲ ಯುವ ಸಚಿವರು. ಇವರು ತಮ್ಮ ಜವಬ್ದಾರಿಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಿರ್ವಹಿಸುತ್ತಾರೆ ಎನ್ನುವ ಭರವಸೆ ನನಗಿದೆ ಎಂದು ಹೇಳಿದರು.
ಇನ್ನು ಮೊಬೈಲ್ ಗೀಳು ಈಗ ಮಕ್ಕಳಲ್ಲಿ ಹೆಚ್ಚಾಗಿದೆ. ಈ ಗೀಳಿನಿಂದ ಮಕ್ಕಳನ್ನು ಹೊರಗೆ ತರುವ ಕೆಲಸವನ್ನು ಶಿಕ್ಷಕರು ಪರಿಣಾಮಕಾರಿಯಾಗಿ ಮಾಡಬೇಕಿದೆ. ಆದ್ದರಿಂದ, “ಮೊಬೈಲ್ ಬಿಡಿ-ಪುಸ್ತಕ ಹಿಡಿ” ಎನ್ನುವ ಮೌಲ್ಯವನ್ನು ಪ್ರತೀ ಶಾಲೆ ಮತ್ತು ಮನೆಗಳಲ್ಲೂ ಜಾರಿ ಆಗಲಿ ಎಂದರು.
ಸಾವಿತ್ರಿ ಫುಲೆ ಮತ್ತು ಫಾತಿಮಾ ಶೇಕ್ ಇಬ್ಬರೂ ದಮನಿತ ಮಹಿಳೆಯರಿಗೆ ಶಿಕ್ಷಣ ಕೊಟ್ಟ ಮೊದಲ ಶಿಕ್ಷಕಿಯರು. ಇವರಿಗೆ ಸಗಣಿಯನ್ನೆಲ್ಲಾ ಎಸೆದು ಅವಮಾನಿಸಲಾಗಿತ್ತು. ಈ ಎಲ್ಲ ಅವಮಾನ ಸಹಿಸಿಕೊಂಡೂ ಶಿಕ್ಷಣ ನೀಡಿದರು ಅವರು ಎಂದು ಹೇಳಿದರು.

Related









