ಚಂಡೀಗಢ: ಪಂಜಾಬ್ ರಾಜ್ಯ ಉಗ್ರಾಣ ನಿಗಮದ ಎಂಡಿ ಗಗನ್ದೀಪ್ ಸಿಂಗ್ ರಾಂಧವ ಆತ್ಮಹತ್ಯೆ ಪ್ರಕರಣ ರಾಜಕೀಯ ವಿವಾದ ಪಡೆದುಕೊಂಡಿದ್ದು, ಈ ನಡುವೆ ಇಂದು ಅಂದರೆ ಮಾ. 21ರಂದು ಸಿಎಂ ಭಗವಂತ್ ಮಾನ್ ನಿರ್ದೇಶನ ಮೇರೆಗೆ ಪಂಜಾಬ್ ರಾಜ್ಯದ ಸಾರಿಗೆ ಸಚಿವ ಲಾಲ್ಜಿತ್ ಸಿಂಗ್ ಭುಲ್ಲರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಭುಲ್ಲರ್ ಅಧಿಕಾರಿ ರಾಂಧವ ಮೇಲೆ ತಮ್ಮ ರಾಜಕೀಯ ಕಾರ್ಯಕರ್ತರಿಗೆ ಗೋದಾಮು ಟೆಂಡರ್ ನೀಡುವಂತೆ ಒತ್ತಡ ಹೇರಿದ್ದರು ಎನ್ನಲಾಗಿದೆ. ಅದನ್ನು ನಿರಾಕರಿಸಿದಾಗ ಅವರನ್ನು ಮನೆಗೆ ಕರೆಸಿ ತಮ್ಮ ಬೆಂಬಲಿಗರಿಂದ ಹಲ್ಲೆ ಮಾಡಿಸಿ, ಬ್ಲಾಕ್ಮೇಲ್ ಮಾಡಲು 10 ಲಕ್ಷ ರೂ. ಲಂಚ ಸ್ವೀಕರಿಸಿದ್ದಾರೆ ಕ್ಯಾಮರಾ ಮುಂದೆ ತಪ್ಪೊಪ್ಪಿಕೊಳ್ಳಲು ಒತ್ತಾಯಿಸಲಾಗಿತ್ತು ಎಂದು ಆರೋಪಿಸಲಾಗಿದೆ.
ಗುರುವಾರ(ಮಾ.18) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಗಗನದೀಪ್ ಸಿಂಗ್ ರಾಂಧವ, ಸಾವಿಗೂ ಮುನ್ನ ವಿಡಿಯೋ ಮಾಡಿದ್ದು, ಅದರಲ್ಲಿ ಸಚಿವ ಲಾಲ್ಜಿತ್ ಸಿಂಗ್ ಭುಲ್ಲರ್ ಅವರ ಭಯದಿಂದ ವಿಷ ಸೇವಿಸಿದ್ದೇನೆ. ಈಗ ನಾನು ಬದುಕುಳಿಯುವುದಿಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ. ಘಟನೆ ಬಳಿಕ ವಿಪಕ್ಷಗಳಾದ ಕಾಂಗ್ರೆಸ್ ಮತ್ತು ಶಿರೋಮಣಿ ಅಕಾಲಿದಳ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದವು.
ಘಟನೆಯ ಬಳಿಕ ಸಿಎಂ ಭಗವಂತ್ ಸಿಂಗ್ ಮಾನ್, ಘಟನೆಯನ್ನು ದುರದೃಷ್ಟಕರ ಎಂದು ಕರೆದು, ಜಿಲ್ಲಾ ವ್ಯವಸ್ಥಾಪಕ ಮಟ್ಟದ ಅಧಿಕಾರಿಯ ಆತ್ಮಹತ್ಯೆ ಗಂಭೀರ ವಿಷಯವಾಗಿದೆ. ಈ ಬಗ್ಗೆ ಸೂಕ್ತ ಮತ್ತು ವಿವರವಾದ ತನಿಖೆ ನಡೆಸುವಂತೆ ಪಂಜಾಬ್ ಸಿಎಸ್ಗೆ ಸೂಚಿಸಿದ್ದು, ಅದೇ ವೇಳೆ ಭುಲ್ಲರ್ ಅವರಿಗೆ ರಾಜೀನಾಮೆ ನೀಡುವಂತೆ ನಿರ್ದೇಶನ ನೀಡಿದ್ದರು ಎನ್ನಲಾಗಿದೆ.
ಇನ್ನೂ ಈ ಕುರಿತು ಮಾತನಾಡಿರುವ ಸಿಎಂ ಭಗವಂತ್ ಸಿಂಗ್ ಮಾನ್, ನಾನು ತಕ್ಷಣ ಸಚಿವರ ರಾಜೀನಾಮೆಯನ್ನು ಕೋರಿದೆ. ಮತ್ತು ಅವರ ಇಲಾಖೆಯ ಜವಾಬ್ದಾರಿಯನ್ನು ಬೇರೆ ಸಚಿವರಿಗೆ ನೀಡುತ್ತೇವೆ. ಆತ್ಮಹತ್ಯೆಯ ತನಿಖೆಗೆ ಧಕ್ಕೆಯಾಗದಂತೆ ನೋಡಿಕೊಳ್ಳಲು, ರಾಜೀನಾಮೆ ಪಡೆದಿದ್ದೇವೆ.
ಈ ಕಷ್ಟದ ಸಮಯದಲ್ಲಿ ನಾವು ಕುಟುಂಬದೊಂದಿಗೆ ನಿಲ್ಲುತ್ತೇವೆ. ತನಿಖೆಯ ನಂತರ ಹೊಣೆಗಾರಿಕೆಯನ್ನು ನಿಗದಿಪಡಿಸಲಾಗುವುದು. ಕಿರುಕುಳ ಅಥವಾ ಅಧಿಕಾರದ ದುರುಪಯೋಗಕ್ಕೆ ಯಾರಾದರೂ ಕಾರಣರೆಂದು ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ರಾಜೀನಾಮೆ ಬಳಿಕ ಪ್ರತಿಕ್ರಿಯಿಸಿರುವ ಭುಲ್ಲರ್, ತಮ್ಮ ವಿರುದ್ಧ ಕೇಳಿ ಬಂದಿರುವ ಆರೋಪಗಳನ್ನು ತಳ್ಳಿ ಹಾಕಿದ್ದು, ನಮ್ಮ ಪಕ್ಷ ಯಾವಾಗಲೂ ಸತ್ಯದ ಪರವಾಗಿ ನಿಂತಿದೆ. ನ್ಯಾಯಯುತ ತನಿಖೆಯನ್ನು ಖಚಿತಪಡಿಸಿಕೊಳ್ಳುವಲ್ಲಿ ನನ್ನ ಸ್ಥಾನವು ಅಡ್ಡಿಯಾಗದಂತೆ ನನ್ನ ಪಕ್ಷ ಮತ್ತು ಮುಖ್ಯಮಂತ್ರಿಗಳು ನನ್ನ ರಾಜೀನಾಮೆಯನ್ನು ಅಂಗೀಕರಿಸಬೇಕೆಂದು ವಿನಂತಿಸುತ್ತೇನೆ. ಸತ್ಯ ಹೊರಬರಬೇಕೆಂದು ನಾನು ಬಯಸುತ್ತೇನೆ ಎಂದು ಹೇಳಿದ್ದಾರೆ.
Related










