NEWSನಮ್ಮಜಿಲ್ಲೆನಮ್ಮರಾಜ್ಯ

ಶಿರಸಿ: ಸಾರಿಗೆ ನೌಕರರ ಬೇಡಿಕೆ ಈಡೇರಿಸುವಂತೆ ವಿಧಾನಸಭಾಧ್ಯಕ್ಷರಿಗೆ ಮನವಿ ಸಲ್ಲಿಸಿದ ಕೂಟದ ಪದಾಧಿಕಾರಿಗಳು

ವಿಜಯಪಥ ಸಮಗ್ರ ಸುದ್ದಿ

ಶಿರಸಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳ ನೌಕರರಿಗೆ ಸರ್ಕಾರ ಕೊಟ್ಟ ಮಾತಿನಂತೆ ಸರ್ಕಾರಿ ನೌಕರರಂತೆ ಸಮಾನ ವೇತನ, ವೇತನ ಆಯೋಗ ಮಾದರಿಯಲ್ಲಿ ನೀಡುವುದು ಹಾಗೂ ಇತರೆ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹರಿಸುವಂತೆ ವಿಧಾನಸಭಾ ಅಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಮನವಿ ಸಲ್ಲಿಸಲಾಯಿತು.

ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಸಭಾಧ್ಯಕ್ಷರ ಕಚೇರಿಯಲ್ಲಿ ಅವರನ್ನು ಭೇಟಿ ಮಾಡಿದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ಪದಾಧಿಕಾರಿಗಳು ಸಾರಿಗೆ ನೌಕರರ ವಿವಿಧ ಬೇಡಿಕೆಗಳ ಈಡೇರಿಕೆಗೆ ಮನವಿ ಪತ್ರ ಸಲ್ಲಿಸಿದರು.

ಸದಾ ಸಾರ್ವಜನಿಕರ ಸೇವೆ ಮಾಡುವ ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳಲ್ಲಿ ಸುಮಾರು 1.07 ಲಕ್ಷ (ಒಂದು ಲಕ್ಷ ಏಳು ಸಾವಿರ) ನೌಕರರು ಹಗಲು-ರಾತ್ರಿ ಎನ್ನದೆ, ಆತೀ ಒತ್ತಡದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲದೆ ಹಬ್ಬ ಹರಿದಿನಗಳಲ್ಲಿ ನಮ್ಮ ಕುಟುಂಬಗಳ ಜೊತೆ ಇರಲು ಆಗುವುದಿಲ್ಲ. ಬಂಧು ಬಳಗದ ಯಾವುದೇ ಶುಭ ಸಮಾರಂಭಗಳಲ್ಲಿಯೂ ಸಹ ಪಾಲ್ಗೊಳ್ಳಲಾಗದೇ ಹಗಲು ರಾತ್ರಿ ಎನ್ನದೇ ದುಡಿಯುತ್ತಿದ್ದಾರೆ.

ಇನ್ನು ಸರಿಯಾದ ಊಟ ಉಪಚಾರವಿಲ್ಲದೆ, ಸಮಯಕ್ಕೆ ಸರಿಯಾಗಿ ನಿದ್ರೆ, ವಿಶ್ರಾಂತಿ ಇಲ್ಲದೇ, ಮಳೆ, ಗಾಳಿ ಎನ್ನದೆ ರಾಜ್ಯ ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳ ಸಿಬ್ಬಂದಿಗಳು ಕಾಯಾ, ವಾಚಾ, ಮನಸ್ಸಾ ದಿನಕ್ಕೆ ಸುಮಾರು ಒಂದು ಕೋಟಿ ಪ್ರಯಾಣಿಕರಿಗೆ ಸೇವೆ ನೀಡುತ್ತಿದ್ದಾರೆ. ಈ ಕಾರಣದಿಂದಲೇ ನಮ್ಮ ಸಂಸ್ಥೆ ಇಡೀ ದೇಶದಲ್ಲೇ ಅತ್ಯುತ್ತಮ ಸಾರಿಗೆ ಸಂಸ್ಥೆಯೆಂದು ಹೆಸರು ಮಾಡುವ ಮೂಲಕ ಅನೇಕ ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿದೆ.

ಆದರೆ, ಸರ್ಕಾರ ಮಾತ್ರ ತಮ್ಮ ಅಧೀನದಲ್ಲಿರುವ ಬೇರೆ ನಿಗಮ, ಇಲಾಖೆ ಹಾಗೂ ಸರ್ಕಾರಿ ನೌಕರರಿಗೆ ಕಾಲಕಾಲಕ್ಕೆ ಕೊಡಬೇಕಾದ ಎಲ್ಲ ಸೌಲಭ್ಯಗಳನ್ನು ನೀಡುತ್ತಿದೆ. ಸರ್ಕಾರದ ಅಣತೆಯಂತೆ ನಡೆಯುತ್ತಿರುವ ಸಾರಿಗೆ ನೌಕರರಿಗೆ ಮಾತ್ರ ತಾರತಮ್ಯ ಧೋರಣೆ ಮಾಡುತ್ತಾ ಸಾರಿಗೆ ನೌಕರರ ಬಾಳನ್ನು ಅತ್ಯಂತ ಹೀನಾಯ ಸ್ಥಿತಿಗೆ ತಲುಪಿಸಿದೆ. ಸರ್ಕಾರಿ ನೌಕರರ ವೇತನಕ್ಕೆ ನಮ್ಮ ವೇತನ ಹೋಲಿಸಿದ್ದರೆ ನಮ್ಮ ವೇತನ ಅತ್ಯಲ್ಪ (13% ರಿಂದ 65% ಕಡಿಮೆ ವೇತನ ) ಊರೂರು ಸುತ್ತುವ ಹಾಗೂ ಅತೀ ಒತ್ತಡದಲ್ಲಿ ಕಾರ್ಯನಿರ್ವಹಿಸುವ ನಾವು ಅತೀ ಬೇಗ ರೋಗಗಳಿಗೆ ತುತ್ತಾಗುತ್ತಿದ್ದೇವೆ.

ಇನ್ನು ಸಾರಿಗೆ ನೌಕರರಿಗೆ ಸರ್ಕಾರಿ ನೌಕರರಂತೆ ಆರೋಗ್ಯ ಭಾಗ್ಯ ಸೌಲಭ್ಯ ಇಲ್ಲ. ನಿವೃತ್ತಿ ನಂತರ ನಿವೃತ್ತಿ ವೇತನ 1500 ರಿಂದ 3500 ರೂಪಾಯಿಗಳು. ಇದಿಷ್ಟೇ ಅಲ್ಲದೇ ಇನ್ನೂ ಹಲವು ಸೌಲಭ್ಯಗಳಿಂದ ಸಾರಿಗೆ ನೌಕರರು ವಂಚಿತರಾಗಿದ್ದಾರೆ. ಇದನ್ನೆಲ್ಲ ಮನಗಂಡ ಸಾರಿಗೆ ನೌಕರರು, ನೂರಾರು ಬಾರಿ ಶಾಸಕರಿಗೆ, ಮಂತ್ರಿಗಳಿಗೆ ಹಾಗೂ ಸರ್ಕಾರದ ಅಧಿಕಾರಿಗಳಿಗೆ ಮನವಿ ಪತ್ರಗಳನ್ನು ನೀಡಿ ಅನೇಕ ರೀತಿಯ ಸಾರ್ವಜನಿಕರಿಗೆ ತೊಂದರೆಯಾಗದ ಶಾಂತಿಯುತ ಹೋರಾಟಗಳನ್ನು ಮಾಡಿದರು ಸರ್ಕಾರ ನಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಿಲ್ಲ.

ಆ ಕಾರಣ ಅನಿರ್ವಾಯವಾಗಿ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕೆಂದು ಡಿಸೆಂಬರ್-2020 ರಲ್ಲಿ ಮುಷ್ಕರ ಮಾಡಿದ ಸಂದರ್ಭದಲ್ಲಿ ಸರ್ಕಾರ ಲಿಖಿತ ಭರವಸೆ ಹಾಗೂ 3 ತಿಂಗಳ ಕಲಾವಕಾಶವನ್ನು ಕೇಳಿದ್ದರಿಂದ ಮುಷ್ಕರವನ್ನು ಹಿಂಪಡೆಯಲಾಯಿತು. ತೆಗೆದುಕೊಂಡ ಕಾಲಾವಧಿಯಲ್ಲಿ ನೀಡಿರುವ ಭರವಸೆಗಳನ್ನು ಈಡೇರಿಸದ ಕಾರಣ ಏಪ್ರಿಲ್-2021 ರಲ್ಲಿ ಸಾರಿಗೆ ಮುಷ್ಕರ ಮಾಡಿದ ಸಂದರ್ಭದಲ್ಲಿ ಬೇಡಿಕೆಗಳನ್ನು ಈಡೇರಿಸುವ ಬದಲು ಸಾವಿರಾರು ನೌಕರರನ್ನು ವಜಾ, ವರ್ಗಾವಣೆ ಮತ್ತು ಆಮಾನತಿ ಮಾಡಲಾಯಿತು.

ಇನ್ನು ಸುಳ್ಳು ಪೊಲೀಸ್‌ ಕೇಸುಗಳನ್ನು ನೌಕರರ ಮತ್ತು ಕುಟುಂಬ ಸದಸ್ಯರ ಮೇಲೆ ದಾಖಲಿಸಲಾಯಿತು. ಬಿ.ಎಂ.ಟಿ.ಸಿ ನಿಗಮವನ್ನು ಹೊರತು ಪಡಿಸಿ 3 ನಿಗಮಗಳಲ್ಲಿ ಸಮಸ್ಯೆಗಳನ್ನು ಒಂದು ಹಂತಕ್ಕೆ ನಿವಾರಣೆ ಮಾಡಲಾಗಿದ್ದು, ಕಳೆದ ಹದಿನೇಳು ತಿಂಗಳುಗಳಿಂದ, ಬಿಎಂಟಿಸಿ ಸಂಸ್ಥೆಯಲ್ಲಿ ವಜಾಗೊಂಡ ನೌಕರರನ್ನು ಮರು ನೇಮಕ ಮಾಡಿಕೊಳ್ಳುವ ವಿಚಾರದಲ್ಲಿ ಆಡಳಿತ ಮಂಡಳಿಯ ಅಧಿಕಾರಿಗಳು ಮನಸೊ ಇಚ್ಛೆ ನೌಕರರ ಮೇಲೆ ದ್ವೇಷ ಸಾಧಿಸುತ್ತಿದ್ದು ಕರ್ತವ್ಯ ನಿರ್ವಹಿಸುತ್ತಿರುವ ನೌಕರರಿಗೂ ನಾನಾ ರೀತಿಯ ಮಾನಸಿಕ ಕಿರುಕುಳ ನೀಡುವ ಮೂಲಕ ನೌಕರರು ಆತ್ಮಹತ್ಯೆಗೆ ಶರಣಾಗುವಂತೆ ಮಾಡುತ್ತಿದ್ದಾರೆ.

ಹಗಲಿರುಳು ಸದಾ ಒತ್ತಡದಲ್ಲಿ ದುಡಿಯುವ ನಾವು ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಲು, ಕಾನೂನು ತೊಡಕುಗಳು ಎಂದು ಹೇಳುವ ಮತ್ತು ಸರಿ ಸಮಾನ ವೇತನ ಕೇಳಿದರೆ ಆರ್ಥಿಕ ನಷ್ಟ ಎಂದು ಹೇಳುವ ಸರ್ಕಾರ, ಸರ್ಕಾರದ ಇಲಾಖೆ ಮತ್ತು ನಿಗಮ ಮಂಡಳಿಗಳ ನೌಕರರಿಗೆ ಕೇಂದ್ರ ಸರ್ಕಾರಿ ಸರಿ ಸಮಾನ ವೇತನ, ದೇವಸ್ಥಾನದ ಆರ್ಚಕರಿಗೆ 6 ನೇ ವೇತನ ಆಯೋಗ, ಸ್ಮಶಾನ ಕಾಯುವ ನೌಕರರಿಗೆ ಸರಿಸಮಾನ ವೇತನ ಹಾಗೂ ಪೌರ ಕಾರ್ಮಿಕರು ಸರ್ಕಾರಿ ನೌಕರರು, ಇವರಿಗೆಲ್ಲ ನೀಡಿರುವುದಕ್ಕೆ ನಮ್ಮ ಹೊಟ್ಟೆ ಕಿಚ್ಚು ಇಲ್ಲ. ಆದರೆ ನಮ್ಮ ಜೀವನಗಳಿವೆ, ನಮ್ಮನು ನಂಬಿ ಕುಟುಂಬಗಳು ಇವೆ, ನಾವು ಸಹ ಈ ರಾಜ್ಯದ ಪ್ರಜೆಗಳೇ ನಮ್ಮ ಮೇಲೆಯೂ ಸಹ ಕರುಣೆ ತೋರಿಸಿ.

ಸಾರಿಗೆ ನೌಕರರ ಸಮಸ್ಯೆಗಳ ನಿವಾರಣೆಗೆ ಹಾಗೂ ಸರ್ಕಾರ ನೀಡಿರುವ ಲಿಖಿತ ಭರವಸೆಗಳ ಜತೆಗೆ ಬೇಡಿಕೆಗಳನ್ನು ಕೂಡಲೆ ಈಡೇರಿಸುವಂತೆ ಒತ್ತಾಯಿಸಿ ಇದೇ

ಸರ್ಕಾರ ನೀಡಿರುವ ಲಿಖಿತ ಭರವಸೆಗಳನ್ನು ಈ ಕೆಳಕಂಡ ಬೇಡಿಕೆಗಳನ್ನು ಕೂಡಲೆ ಈಡೇರಿಸುವಂತೆ ಒತ್ತಾಯಿಸಿ ಕಳೆದ ಎರಡು ತಿಂಗಳುಗಳಿಂದ ಅಂದರೆ ದಿನಾಂಕ: 10/10/2022 ರಂದು ಬಳ್ಳಾರಿಯಿಂದ ಪ್ರಾರಂಭ ಮಾಡಿ ಸುಮಾರು 46 ದಿನಗಳ ಕಾಲ, ಸುಮಾರು 1938 ಕಿಮೀ, ನಾವು ಸೈಕಲ್ ಜಾಥಾ ಮೂಲಕ ಪ್ರಯಾಣ ಮಾಡಿ ರಾಜ್ಯದ 18 – ಜಿಲ್ಲೆಗಳ ಜಿಲ್ಲಾಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಮನವಿ ಪತ್ರ ರವಾನೆ ಕಾರ್ಯಕ್ರಮವನ್ನು ಮಾಡಿದ್ದೆವು. ಆದರೂ ಸರ್ಕಾರ ನಮ್ಮ ಕಡೆ ತಿರುಗಿ ನೋಡುತ್ತಿಲ್ಲ. ಆದ್ದರಿಂದ ಇದೇ ನ.19 ರಿಂದ ಬೆಳಗಾವಿಯಲ್ಲಿ ನಡೆಯಲ್ಲಿರುವ ಚಳಿಗಾಲದ ಅಧಿವೇಶನದ ಸಮಯದಲ್ಲಿ ಬೆಳಗಾವಿಯ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಸಾರಿಗೆ ನೌಕರರು ಮತ್ತು ಅವರ ಕುಟುಂಬದ ಸದ್ಯಸರಿಂದ ನೌಕರರ ಬೇಡಿಕೆ ಈಡೇರಿಸುವವರೆಗೂ ಅನಿರ್ದಿಷ್ಠಾವಧಿ ಉಪವಾಸ ಸತ್ಯಾಗ್ರಹವನ್ನು ಮಾಡಲು ನಿರ್ಧಾರ ಮಾಡಲಾಗಿದೆ.

ಬೇಡಿಕೆಗಳು: 1) ಸಾರಿಗೆ ಮುಷ್ಕರದ ಸಮಯದಲ್ಲಿ ಮಾಡಿರುವ ವಜಾ ಪ್ರಕರಣಗಳನ್ನು ಯಾವುದೇ ನಿಬಂಧನೆಗಳನ್ನು ವಿಧಿಸದೇ ಈ ಕೂಡಲೇ ಮರು ನೇಮಕ ಮಾಡಿಕೊಳ್ಳವುದು, ಮುಷ್ಕರದ ಸಮಯದಲ್ಲಿ ಮಾಡಿರುವ ವರ್ಗಾವಣೆ ಹಾಗೂ ಇತರೆ ಶಿಕ್ಷೆಗಳನ್ನು ಯಾವುದೆ ನಿಬಂಧನೆಗಳನ್ನು ವಿಧಿಸದೆ ರದ್ದು ಮಾಡಿ, ದಿನಾಂಕ: 06/04/2021ರ ಪೂರ್ವದ ಯಥಾಸ್ಥಿತಿಯನ್ನು ಕಾಪಾಡುವುದು.

2) ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳ ನೌಕರರಿಗೆ, ಸರ್ಕಾರಿ ನೌಕರರಂತೆ ಸಮಾನ ವೇತನವನ್ನು ನೀಡುವುದು. ಸಂಸ್ಥೆಯಲ್ಲಿ ಚಾಲ್ತಿಯಲ್ಲಿರುವ ನಾಲ್ಕು ವರ್ಷಕ್ಕೊಮ್ಮೆ ಮಾಡುವ ಅವೈಜ್ಞಾನಿಕ ಚೌಕಾಸಿ ವೇತನ ಪರಿಷ್ಕರಣಾ ಪದ್ಧತಿ ಕೈಬಿಟ್ಟು, ಸರ್ಕಾರದ ಇಲಾಖೆ ಹಾಗೂ ನಿಗಮ ಮಂಡಳಿಗಳಲ್ಲಿ ಚಾಲ್ತಿಯಲ್ಲಿರುವ ವೇತನ ಆಯೋಗದ ಮಾದರಿಯನ್ನು ಅಳವಡಿಸಿಕೊಳ್ಳುವುದು.

3) ಮುಷ್ಕರದ ಸಮಯದಲ್ಲಿ ನಾಲ್ಕು ನಿಗಮಗಳ ಸಾರಿಗೆ ನೌಕರರ ಮತ್ತು ಅವರ ಕುಟುಂಬ ಸದಸ್ಯರ ಮೇಲೆ ದಾಖಲಿಸಿರುವ ಪೊಲೀಸ್‌ ಪ್ರಕರಣಗಳನ್ನು ಹಿಂಪಡೆಯುವುದು.

4) ಸಾರಿಗೆ ನಿಗಮಗಳಲ್ಲಿ ಕೂಡಲೆ ಕಾರ್ಮಿಕ ಸಂಘಗಳ ಚುನಾವಣೆ ನಡೆಸುವುದು, (1992 ನಂತರ ಸಾರಿಗೆ ಸಂಸ್ಥೆಯಲ್ಲಿ ಕಾರ್ಮಿಕ ಸಂಘಟನೆಗಳ ಚುನಾವಣೆಗಳು ನಡೆದಿರುವುದಿಲ್ಲ)

5) ಸಾರಿಗೆ ಸಂಸ್ಥೆಗಳಲ್ಲಿ ವಿದ್ಯುತ್‌ ಚಾಲಿತ ವಾಹನಗಳಿಗೆ ಖಾಸಗಿ ಚಾಲಕರನ್ನು ಮತ್ತು ನಿರ್ವಾಹಣೆಯನ್ನು ಖಾಸಗಿಯವರಿಗೆ ವಹಿಸಿರುವುದು, ಇತರ ವಾಹನಗಳಿಗೆ ಹೊರಗುತ್ತಿಗೆ ಆಧಾರದ ಮೇಲೆ ಚಾಲನಾ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳುವುದು ಮತ್ತು ಕೆಲವು ಮಾರ್ಗಗಳನ್ನು ಖಾಸಗಿ ವಾಹನಗಳ ಚಾಲನೆಗೆ ಅನುಮತಿ ನೀಡಿ ಪರೋಕ್ಷವಾಗಿ ಮುಂದಿನ ದಿನಗಳಲ್ಲಿ ಸಾರಿಗೆ ಸಂಸ್ಥೆಯನ್ನು ಖಾಸಗೀಕರಣದ ಮೂಲಕ ರಾಜ್ಯದ ಯುವಕರಿಗೆ ಮತ್ತಷ್ಟು ನಿರುದ್ಯೋಗ ಸಮಸ್ಯೆಯನ್ನು ಸೃಷ್ಟಿ ಮಾಡುವ ಯೋಜನೆಯನ್ನು ಈ ಕೂಡಲೆ ಕೈ ಬಿಡುವಂತೆ ನೌಕರರ ಕೂಟದ ರಾಜ್ಯಾಧ್ಯಕ್ಷ ಮತ್ತು ಪದಾಧಿಕಾರಿಗಳು ಮನವಿ ಮಾಡಿದ್ದಾರೆ.

ಈ ವೇಳೆ ನೌಕರರ ಕೂಟದ ಗೌರವ ಅದಕ್ಷ ಡಾ. ವೆಂಕಟೇಶ್ವರ ಹೆಗಡೆ, ರಾಜ್ಯ ಜಂಟಿ ಕಾರ್ಯದರ್ಶಿಗಳಾದ ಸಂತೋಷ, ತಿಪ್ಪೇಸ್ವಾಮಿ, ಜಯಂತ ಮರ್ಗಿ, ಪದಾಧಿಕಾರಿಗಳಾದ ನಾಗರಾಜ್ ನಿಟ್ಟೂರ, ಈರಪ್ಪ ಹಠವಾದಿ ಮತ್ತಿತರರು ಇದ್ದರು.

Leave a Reply

error: Content is protected !!
LATEST
ಚಾಮುಂಡಿ ಹುಟ್ಟುಹಬ್ಬ: ಬೆಳ್ಳಿ ಪಲ್ಲಕ್ಕಿ ಉತ್ಸವಕ್ಕೆ ರಾಜವಂಶಸ್ಥ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಚಾಲನೆ ನಾಡ ಅಧಿದೇವತೆ ಚಾಮುಂಡಿ ತಾಯಿಯ ವರ್ಧಂತಿ ಸಂಭ್ರಮ: ಬೆಟ್ಟಕ್ಕೆ ಹರಿದು ಬರುತ್ತಿದೆ ಭಕ್ತ ಸಾಗರ KRSನಿಂದ ಕಾವೇರಿ ನದಿಗೆ 1.30 ಲಕ್ಷ ಕ್ಯುಸೆಕ್ ನೀರು ಬಿಡುಗಡೆ ಪತ್ನಿ ಜೊತೆ 40 ವರ್ಷಗಳ ಹಿಂದೆ ಕೋಪ ಮಾಡಿಕೊಂಡಿದ್ದ ಪತಿ- ಸಾಯುವ ವೇಳೆಯೂ ಮಾತಾಡಲಿಲ್ಲ ! ಬೆಳಗಾವಿ: ಸವದತ್ತಿ ಯಲ್ಲಮ್ಮ ದೇವಿಯ ಹುಂಡಿಯಲ್ಲಿ 2 ತಿಂಗಳಲ್ಲೇ₹ 1.96 ಕೋಟಿ ಕಾಣಿಕೆ ಸಂಗ್ರಹ ಕಡ್ಡಾಯವಾಗಿ ಮಣ್ಣಿನ ಪರೀಕ್ಷೆ ಮಾಡಿಸಿ: ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಸಾದ್ ಕೆ.ಆರ್‌.ಪೇಟೆ: ಚೌಡೇಶ್ವರಿ ಅಮ್ಮನವರ ದೇಗುಲದಲ್ಲಿ ಆಷಾಢ ಶುಕ್ರವಾರ ಸಂಭ್ರಮ ಸಂಸತ್‌ನಲ್ಲಿ ಕನ್ನಡಿಗರ ಪರ ಧ್ವನಿ ಎತ್ತಿ: ರಾಜ್ಯದ ಎನ್‌ಡಿಎ ಸಂಸದರಿಗೆ ಎಎಪಿಯ ಡಾ. ಮುಖ್ಯಮಂತ್ರಿ ಚಂದ್ರು ಆಗ್ರಹ “ಶಕ್ತಿ" ಯೋಜನೆಯಿಂದ ಸಾರಿಗೆ ನಿಗಮಗಳ ಆದಾಯ ಹೆಚ್ಚಾಗಿದೆ- ಆದರೆ ನೌಕರರಿಗೆ ವೇತನಕೊಡಲು ಹಣವಿಲ್ಲ- ಎಂಥಾ ಹೇಳಿಕೆ ಇದು ಸಾ... KRS ಭರ್ತಿ: ಅಣೆಕಟ್ಟೆಯಿಂದ ಒಂದು ಲಕ್ಷ ಕ್ಯುಸೆಕ್‌ಗೂ ಅಧಿಕ ಪ್ರಮಾಣದ ನೀರು ಬಿಡುಗಡೆ- ಕಾವೇರಿ ಕೊಳ್ಳದ ಜನರಿಗೆ ಎಚ್ಚರಿ...