ತಿ.ನರಸೀಪುರ: ಕಬ್ಬು ಹೆಚ್ಚುವರಿ ದರ 150 ರೂ. ಪಾವತಿಯಾಗದಿದ್ದರೆ ಇದೇ ಫೆ. 28ರಂದು ಸಾವಿರಾರು ರೈತರು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕುತ್ತೇವೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.
ಇಂದು (ಫೆ.24) ತಿ.ನರಸೀಪುರದ ಕಬಿನಿ ಅಥಿತಿ ಗೃಹದಲ್ಲಿ ಆಯೋಜಿಸಿದ್ದ ಸುದ್ದಗೋಷ್ಠಿಯಲ್ಲಿ ಮಾತನಾಡಿದ ರೈತರು, ವಿವಿಧ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ಇದೇ 28ರಂದು ಮೈಸೂರಿನ ಗನ್ಹೌಸ್ ವೃತ್ತದ ಬಳಿ ಎಲ್ಲ ರೈತರು ಸಮಾವೇಶಗೊಂಡು ಬೆಳಗ್ಗೆ 11ಗಂಟೆಗೆ ಮೆರವಣಿಗೆ ಹೊರಟು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದರು.
ರಾಜ್ಯ ಸರ್ಕಾರ ಎಪ್ ಆರ್ ಪಿ ಹೆಚ್ಚುವರಿ ದರ 150 ರೂ.ಗಳನ್ನು ಏರಿಕೆ ಮಾಡಿ ಎರಡು ತಿಂಗಳಾದರೂ ಕಾರ್ಖಾನೆ ಮಾಲೀಕರು ರೈತರಿಗೆ ಹಣ ಪಾವತಿ ಮಾಡದೆ ಇರುವ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಆಗಿಲ್ಲ. ಜಿಲ್ಲೆಯಲ್ಲಿ ಕಾಡು ಪ್ರಾಣಿಗಳ ಹಾವಳಿ ಜಾಸ್ತಿಯಾಗುತ್ತಿದೆ ಈ ಬಗ್ಗೆ ಅರಣ್ಯ ಇಲಾಖೆಯವರು ಇನ್ನು ಹೆಚ್ಚಿನ ಕ್ರಮ ಕೈಗೊಳ್ಳಬೇಕು.
ರಸಗೊಬ್ಬರ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ ರೈತರಿಗೆ ಪೂರಕವಾದ ರಸಗೊಬ್ಬರಗಳು ದೊರೆಯುತ್ತಿಲ್ಲ. ಇದೆಲ್ಲ ಗೊತ್ತಿದ್ದರೂ ಸಹ ಕೃಷಿ ಇಲಾಖೆ ಕಣ್ಣು ಮುಚ್ಚಿ ಕುಳಿತಿರುವುದು ರೈತರಿಗೆ ತೊಂದರೆ ಆಗುತ್ತಿದೆ ಎಂದು ಕಿಡಿಕಾರಿದರು.
ರಾಜ್ಯ ಸರ್ಕಾರ ಭತ್ತ ಖರೀದಿ ಕೇಂದ್ರದಲ್ಲಿ ಒಂದು ಕ್ವಿಂಟಲ್ಗೆ, 500ಗ್ರಾಂ ಮಾತ್ರ ಕಡಿತ ಮಾಡಲು ಆದೇಶವಿದೆ. ಆದರೆ 4ರಿಂದ 5 ಕೆಜಿ ಕಡಿತ ಮಾಡುತ್ತಿದ್ದು ಈ ಮೂಲಕ ರೈತರಿಗೆ ವಂಚನೆ ಮಾಡುತ್ತಿದ್ದಾರೆ. ಬೇಸಿಗೆ ಸಮಯ ದನಕರುಗಳಿಗೆ ಕುಡಿಯಲು ಕೆರೆಕಟ್ಟೆ ತುಂಬಿಸಲು ಕಬಿನಿ ಕಾವೇರಿ ನಾಲೆಗಳ ಮೂಲಕ ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡಬೇಕು.
ವಿದ್ಯುತ್ ಸಮಸ್ಯೆ : ರಾತ್ರಿ ಪಾಳಿಯಲ್ಲಿ ಫಸಲಿಗೆ ರೈತರು ನೀರು ಬಿಡಲು ಸಮಸ್ಯೆ ಆಗುತ್ತಿದ್ದು ಹಗಲು ಸಮಯವೇ ವಿದ್ಯುತ್ ನೀಡಬೇಕು, ರೈತರಿಗೆ ತೊಂದರೆ ಆಗುವುದನ್ನು ತಪ್ಪಿಸಬೇಕು. ಅಡುಗೆ ಗ್ಯಾಸ್ ವಿತರಣೆ ವೇಳೆ ಗ್ರಾಮೀಣ ಪ್ರದೇಶದಲ್ಲಿ ಡೆಲಿವರಿ ಕೊಡುವವರು 50 ರಿಂದ ರೂ.100ಗಳನ್ನು ಹೆಚ್ಚಿಗೆ ವಸೂಲಿ ಮಾಡುತ್ತಿದ್ದು ಇದನ್ನು ತಪ್ಪಿಸಬೇಕು ಎಂದು ಆಗ್ರಹಿಸಿದರು.
ಗೋಷ್ಠಿಯಲ್ಲಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ತಾಲೂಕು ಅಧ್ಯಕ್ಷ ಕುರುಬೂರು ಸಿದ್ದೇಶ್, ತಾ. ಉಪಾಧ್ಯಕ್ಷ ನಂಜುಂಡಸ್ವಾಮಿ, ತಾ. ಸಂಘಟನಾ ಕಾರ್ಯದರ್ಶಿ ಕುರುಬೂರು ಪ್ರದೀಪ್, ಮುಖಂಡ ಕಿರಗಸೂರು ಶಂಕರ್ ಇದ್ದರು.