ಮೈಸೂರು: ರಥಯಾತ್ರೆಯ ಹಿಂದೆ ಯಾವ ಉದ್ದೇಶವೂ ಇಲ್ಲ. ಸಾವರ್ಕರ್ ಬಗ್ಗೆ ಜನರಿಗೆ ತಿಳಿವಳಿಕೆ ಮೂಡಿಸಲು ಯಾತ್ರೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿಕೆ ನೀಡಿದ್ದಾರೆ.
ನಗರದಲ್ಲಿ ಇಂದು ಸಾವರ್ಕರ್ ಪ್ರತಿಷ್ಠಾನದ ವತಿಯಿಂದ ಆಯೋಜಿಸಿದ್ದ ವೀರ ಸಾವರ್ಕರ್ ರಥಯಾತ್ರೆಗೆ ಚಾಲನೆ ನೀಡುವ ಕಾರ್ಯಕ್ರಮಕ್ಕೆ ಆಗಮಿಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು.
ನಮ್ಮಲ್ಲಿ ಆಸ್ತಿಕರು ಹಾಗೂ ನಾಸ್ತಿಕರು ಎಲ್ಲ ತರಹದ ಜನರಿದ್ದಾರೆ. ಸಾರ್ವಜನಿಕವಾಗಿ ಗುಡಿಗೆ ಹೋಗಬೇಕಾದ್ರೆ ಶಿಷ್ಟಾಚಾರ ಇರುತ್ತದೆ. ಆ ಶಿಷ್ಟಾಚಾರ ಪಾಲನೆ ಮಾಡಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಸಲಹೆ ನೀಡಿದರು.
ನೀವು ನಿಮ್ಮ ಮನೆಯಲ್ಲಿ ಯಾವ ಆಹಾರವನ್ನಾದರೂ ತಿನ್ನಿ. ಆದ್ರೆ, ದೇವಸ್ಥಾನ ಪವಿತ್ರ ಸ್ಥಳ, ಅಲ್ಲಿ ಪ್ರಾಣ ಪ್ರತಿಷ್ಠಾಪನೆ ಮಾಡಿರುತ್ತಾರೆ. ಅಲ್ಲಿಗೆ ಹೋಗುವವರು ಮಡಿ-ಮೈಲಿಗೆಯಿಂದ ಹೋಗುತ್ತಾರೆ. ಮೊದಲು ಅದನ್ನು ತಿಳಿದುಕೊಳ್ಳಿ ಎಂದು ಹೇಳಿದರು.
ಇನ್ನು ಮೈಸೂರಿನ ಮೂಲೆ ಮೂಲೆಯಲ್ಲಿ ಚಾಮುಂಡಿ ಹಬ್ಬವನ್ನ ಆಚರಿಸುತ್ತಾರೆ. ಬಹಳ ಮಡಿಯಿಂದ ಮೊಸರನ್ನವನ್ನು ನೈವೇದ್ಯವಾಗಿ ಅರ್ಪಿಸುತ್ತಾರೆ. ನಂತರ ಮರಿ ಹೊಡೆದುಕೊಂಡು ತಿನ್ನುತ್ತಾರೆ. ಮರಿ ಹೊಡೆದು ತಿನ್ನುವ ಮೈಸೂರಿಗರೇ ಬೆಟ್ಟಕ್ಕೆ ಮಡಿಯಿಂದ ಹೋಗ್ತಾರೆ ಎಂದು ಹೇಳಿದರು.