ಬೆಂಗಳೂರು: ಬಿಬಿಎಂಪಿ ಚುನಾವಣೆ ಮುಂದೂಡಲು ಕುತಂತ್ರ ಮಾರ್ಗ ಅನುಸರಿಸುತ್ತಿರುವ ರಾಜ್ಯ ಬಿಜೆಪಿ ಸರ್ಕಾರದ ಪ್ರಜಾಪ್ರಭುತ್ವ ವಿರೋಧಿ ನೀತಿ ಖಂಡಿಸಿ, “ಬಿಬಿಎಂಪಿ ಚುನಾವಣೆ ನಡೆಸಿ, ಬೆಂಗಳೂರು ಉಳಿಸಿ” ಹೆಸರಿನಲ್ಲಿ ಆಮ್ ಆದ್ಮಿ ಪಾರ್ಟಿಯು ಬೆಂಗಳೂರಿನಾದ್ಯಂತ ಬೃಹತ್ ಸಹಿ ಸಂಗ್ರಹ ಹಮ್ಮಿಕೊಂಡಿದೆ.
ನಗರದ ಪ್ರೆಸ್ಕ್ಲಬ್ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಪಕ್ಷದ ಬೆಂಗಳೂರು ಅಧ್ಯಕ್ಷ ಮೋಹನ್ ದಾಸರಿ, “ಡಿಸೆಂಬರ್ 3ರಿಂದ 5ರ ತನಕ ಬೆಂಗಳೂರಿನಾದ್ಯಂತ ಮೂರು ದಿನಗಳ ಬೃಹತ್ ಸಹಿಸಂಗ್ರಹ ಅಭಿಯಾನ ನಡೆಸಲು ಆಮ್ ಆದ್ಮಿ ಪಾರ್ಟಿ ನಿರ್ಧರಿಸಿದೆ. ಸುಮಾರು ಐದು ಲಕ್ಷ ಸಹಿ ಸಂಗ್ರಹಿಸುವ ಗುರಿ ಹೊಂದಿದ್ದೇವೆ ಎಂದು ತಿಳಿಸಿದರು.
ಇನ್ನು ಡಿಸೆಂಬರ್ 6ರ ಮಂಗಳವಾರ ಎಎಪಿ ಮುಖಂಡರು ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಲಿದ್ದು, ಬೆಂಗಳೂರಿನಾದ್ಯಂತ ಸಂಗ್ರಹಿಸಿದ ಸಹಿಗಳನ್ನು ರಾಜ್ಯಪಾಲರಿಗೆ ನೀಡಿ ಸರ್ಕಾರದ ವಿರುದ್ಧ ಕ್ರಮ ಕೈಗೊಳ್ಳಲು ಹಾಗೂ ಶೀಘ್ರ ಚುನಾವಣೆ ನಡೆಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಲು ಆಗ್ರಹಿಸಲಾಗುವುದು ಎಂದು ವಿವರಿಸಿದರು.
2020ರಲ್ಲಿ ನಡೆಯಬೇಕಿದ್ದ ಬಿಬಿಎಂಪಿ ಚುನಾವಣೆಯನ್ನು ರಾಜ್ಯ ಬಿಜೆಪಿ ಸರ್ಕಾರ ಕುಂಟುನೆಪಗಳನ್ನು ಮುಂದಿಟ್ಟುಕೊಂಡು ಮುಂದೂಡುತ್ತಲೇ ಬಂದಿದೆ. ಇದರಿಂದ ಬೆಂಗಳೂರಿನ ಅಭಿವೃದ್ಧಿ ಕುಂಠಿತಗೊಳ್ಳುವುದರ ಜತೆಗೆ ನ್ಯಾಯಾಲಯದ ಅಮೂಲ್ಯ ಸಮಯ ವ್ಯರ್ಥವಾಗಿದೆ. ಚುನಾವಣೆ ನಡೆಯುವುದಕ್ಕೆ ಪದೇಪದೇ ಅಡ್ಡಗಾಲು ಹಾಕುವ ಮೂಲಕ ಬಿಜೆಪಿ ಸರ್ಕಾರವು ಪ್ರಜಾಪ್ರಭುತ್ವ ವ್ಯವಸ್ಥೆಗೆ ದ್ರೋಹ ಎಸಗಿದೆ.
ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿಯಲ್ಲಿನ ದುರಾಡಳಿತದಿಂದಾಗಿ ಚುನಾವಣೆಯಲ್ಲಿ ಹೀನಾಯವಾಗಿ ಸೋಲುವುದು ಶತಸಿದ್ಧ ಎಂದು ಬಿಜೆಪಿಗೆ ಮನವರಿಕೆ ಆಗಿರುವುದರಿಂದ ಬಿಜೆಪಿಯು ಚುನಾವಣೆ ಮುಂದೂಡುವ ಕುತಂತ್ರ ಅನುಸರಿಸುತ್ತಿದೆ. ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಕೂಡ ಈ ವಿಷಯದಲ್ಲಿ ಮೌನ ವಹಿಸಿರುವುದನ್ನು ಗಮನಿಸಿದರೆ, ಅವು ಬಿಜೆಪಿಯೊಂದಿಗೆ ಶಾಮೀಲಾಗಿರುವುದು ಸ್ಪಷ್ಟವಾಗುತ್ತದೆ ಎಂದು ಮೋಹನ್ ದಾಸರಿ ಹೇಳಿದರು.
ಮೇಯರ್ ಹಾಗೂ ಕಾರ್ಪೊರೇಟರ್ಗಳು ಇಲ್ಲದ ಕಾರಣ ಕಳೆದ ಮೂರು ವರ್ಷಗಳಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿನ ಕಾಮಗಾರಿಗಳು ಸಮರ್ಪಕವಾಗಿ ನಡೆದಿಲ್ಲ. 2022-23ನೇ ವಾರ್ಡ್ ಮಟ್ಟದ 2,543 ಕಾಮಗಾರಿಗಳನ್ನು ಗುರುತಿಸಲಾಗಿದ್ದು, ಇದಕ್ಕಾಗಿ 867 ಕೋಟಿ ರೂಪಾಯಿ ಬಿಡುಗಡೆಯಾಗಿದೆ. ಆದರೆ ಎಂಟು ತಿಂಗಳಾದರೂ ಈ ಪೈಕಿ ಕೇವಲ 76 ಕಾಮಗಾರಿಗಳು ಆರಂಭಗೊಂಡಿವೆ.
ಅಧಿಕಾರಿಗಳು ನಾಮ್ ಕೇ ವಾಸ್ತೆಗೆ ವಾರ್ಡ್ ಮಟ್ಟದ ಸಭೆಗಳನ್ನು ನಡೆಸುತ್ತಿದ್ದರೂ ಪ್ರಶ್ನಿಸುವವರು ಇಲ್ಲವಾಗಿದೆ. ಕಸದ ಸಮಸ್ಯೆ, ರಸ್ತೆ ಗುಂಡಿಗಳು, ಅವ್ಯವಸ್ಥಿತ ಒಳಚರಂಡಿ, ಕೆಟ್ಟು ಹೋಗಿರುವ ವಿದ್ಯುತ್ ದೀಪ, ಮಹಿಳಾ ಸುರಕ್ಷತೆಗೆ ಸಂಬಂಧಿಸಿದ ಸಮಸ್ಯೆಗಳು ಬೆಂಗಳೂರಿನಲ್ಲಿ ತಾಂಡವವಾಡುತ್ತಿವೆ. ಇದರಿಂದಾಗಿ ನಾಗರಿಕರು ಬೆಂಗಳೂರನ್ನು ತೊರೆಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಮೋಹನ್ ದಾಸರಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಆಮ್ ಆದ್ಮಿ ಪಾರ್ಟಿ ಮುಖಂಡರಾದ ಸುರೇಶ್ ರಾಥೋಡ್ ಹಾಗೂ ಉಷಾ ಮೋಹನ್ ಭಾಗವಹಿಸಿದ್ದರು.
![](https://vijayapatha.in/wp-content/uploads/2024/02/QR-Code-VP-1-1-300x62.png)