ಯಾದಗಿರಿ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯಕ್ಕೆ ಈಗಾಗಲೇ ಮಗಳನ್ನು ಕಳೆದುಕೊಂಡಿರುವ ಆ ಬಡ ಕುಟುಂಬ ಕಣ್ಣೀರಲ್ಲೇ ಕೈತೊಳೆಯುತ್ತಿದೆ.
ಇತ್ತ ಅಪಘಾತದಲ್ಲಿ ಮೃತಪಟ್ಟ ಮಗಳ ಪರಿಹಾರದ ಹಣ ಎರಡೂ ವರ್ಷ ಕಳೆದರೂ ಇನ್ನೂ ಸಿಗದೆ ಹೆತ್ತ ತಾಯಿ ಸಾಬಮ್ಮ ತನ್ನ ಮೂವರು ಮಕ್ಕಳೊಂದಿಗೆ ಪರಿಹಾರದ ಹಣಕ್ಕಾಗಿ ಸಾರಿಗೆ ಅಧಿಕಾರಿಗಳ ಬಳಿಗೆ ಅಲೆದ ಅಲೆದು ಚಪ್ಪಲಿ ಸವೆಸಿದ್ದಾರೆ ಆದರೆ ಪರಿಹಾರ ಹಣ ಮಾತ್ರ ಇನ್ನು ಸಿಕ್ಕಿಲ್ಲ.
ಯಾದಗಿರಿ ತಾಲೂಕಿನ ಆಶನಾಳ ಗ್ರಾಮದ ನಿವಾಸಿ ಸಾಬಮ್ಮ ಗ್ರಾಮದ ಸರಕಾರಿ ಶಾಲೆಯಲ್ಲಿ ಅಡುಗೆ ಸಹಾಯಕಿಯಾಗಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದಾರೆ. ಅದರಿಂದ ಬಂದ ವೇತನದಲ್ಲಿ ತನ್ನ ಮೂವರು ಮಕ್ಕಳೊಂದಿಗೆ ಸಂಕಷ್ಟದ ಜೀವನ ನಡೆಸುತ್ತಿದ್ದಾರೆ.
ಇತ್ತ ಇವರು ಮೂವರು ಮಕ್ಕಳಲ್ಲಿ ಇಬ್ಬರು ಮಕ್ಕಳು ಮೂಕರು. ಅತ್ತ 6 ವರ್ಷದ ಹಿಂದೆಯೇ ಸಾಬಮ್ಮ ಅವರ ಪತಿ ಅಂಜನೇಯ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಪತಿಯ ಊರಾದ ರಾಮಸಮುದ್ರ ಗ್ರಾಮ ಬಿಟ್ಟು ಈಗ ತನ್ನ ತವರೂರಾದ ಆಶನಾಳ ಗ್ರಾಮದಲ್ಲಿ 5 ವರ್ಷದಿಂದ ನೆಲೆಸಿದ್ದಾರೆ. ಚಿಕ್ಕದಾದ ಮನೆಯಲ್ಲಿ ಆಶ್ರಯ ಪಡೆದುಕೊಂಡು ತನ್ನ ನಾಲ್ಕು ಮಕ್ಕಳೊಂದಿಗೆ ವಾಸವಾಗಿದ್ದ ಸಾಬಮ್ಮ ಕೂಲಿ ನಾಲಿ ಮಾಡಿ ಜೀವನ ನಡೆಸುದ್ದರು.
ಇನ್ನು ಕೂಲಿ ಮಾಡಿಕೊಂಡು ಮಕ್ಕಳಿಗೆ ಹೊಟ್ಟೆತುಂಬ ಊಟ ಹಾಕುವುದು ಕಷ್ಟವಾದ ಹಿನ್ನೆಲೆ ಸಾಬಮ್ಮ ತನ್ನ ನಾಲ್ಕೂ ಮಕ್ಕಳೊಂದಿಗೆ ಬೆಂಗಳೂರಿಗೆ ವಲಸೆ ಹೋಗಲು ನಿರ್ಧರಿಸಿ ಕಳೆದ 2020 ರ ಡಿಸೆಂಬರ್ 6 ರಂದು ಯಾದಗಿರಿಯಿಂದ ಬೆಂಗಳೂರಿಗೆ ತೆರಳುತ್ತಿದ್ದರು. ಈ ವೇಳೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಇವರು ಪ್ರಯಾಣಿಸುತ್ತಿದ್ದ ಬಸ್ ಪಲ್ಟಿಯಾಗಿದೆ. ಘಟನೆಯಲ್ಲಿ ಸಾಬಮ್ಮರ ಹಿರಿಯ ಪುತ್ರಿ ಐಶ್ವರ್ಯ ಸ್ಥಳದಲ್ಲಿ ಮೃತಪಟ್ಟಿದ್ದಾಳೆ.
ಈ ಬಗ್ಗೆ ಹಿರಿಯೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ. ಘಟನೆ ನಡೆದು ಎರಡೂ ವರ್ಷ ಕಳೆಯುತ್ತಾ ಬಂದರು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ನಿಗಮದ ಅಧಿಕಾರಿಗಳು ಮೃತ ಬಾಲಕಿಯ ಪರಿಹಾರದ ಹಣ ನೀಡುವ ಕೆಲಸ ಮಾಡಿಲ್ಲ. ಸಾಬಮ್ಮ ತನ್ನ ಪುತ್ರಿಯ ಪರಿಹಾರದ ಹಣಕ್ಕಾಗಿ ಎರಡು ವರ್ಷದಿಂದ ಅಲೆದಾಡುತ್ತಿದ್ದಾಳೆ. ಆದರೆ ಯಾದಗಿರಿ ವಿಭಾಗೀಯ ನಿಯಂತ್ರಣಾಧಿಕಾರಿ ಎಂ.ಪಿ.ಶ್ರೀಹರಿಬಾಬು ಸೇರಿ ಎಲ್ಲ ಅಧಿಕಾರಿಗಳು ಪರಿಹಾರದ ಹಣ ವಿತರಣೆ ಮಾಡದೇ ನಿಷ್ಕಾಳಜಿ ತೋರುತ್ತಿದ್ದಾರೆ.
ಈ ಬಗ್ಗೆ ಸಾಬಮ್ಮ ತನ್ನ ಮೂವರು ಮಕ್ಕಳೊಂದಿಗೆ ಸಾಕಷ್ಟು ಬಾರಿ ಯಾದಗಿರಿ ವಿಭಾಗೀಯ ನಿಯಂತ್ರಣಾಧಿಕಾರಿ ಕಚೇರಿಗೆ ಅಲೆದಾಡಿದರು ಅಧಿಕಾರಿಗಳು ಹಾರಿಕೆ ಉತ್ತರ ನೀಡುವ ಕೆಲಸ ಮಾಡಿದ್ದಾರೆ. ಪರಿಹಾರದ ಹಣ ಬಂದರೆ ಆರ್ಥಿಕ ಸಹಾಯವಾಗಲಿದೆ. ಈ ಬಗ್ಗೆ ವಿಭಾಗೀಯ ನಿಯಂತ್ರಣಾಧಿಕಾರಿ ಎಂ.ಪಿ.ಶ್ರೀಹರಿಬಾಬು ಮಾತನಾಡಲು ನಿರಾಕರಣೆ ಮಾಡಿದ್ದಾರೆ.
ಗ್ರಾಮಸ್ಥ ಜಗದೀಶ ಪಾಟೀಲ ಮಾತನಾಡಿ, ಪರಿಹಾರದ ಹಣಕ್ಕಾಗಿ ಎರಡು ವರ್ಷದಿಂದ ಅಲೆದಾಡುತ್ತಿದ್ದು ಇನ್ನೂ ಪರಿಹಾರದ ಹಣ ನೀಡಿಲ್ಲ. ಕೂಡಲೇ ಹೆಚ್ಚಿನ ಪರಿಹಾರದ ಹಣ ವಿತರಣೆ ಮಾಡಬೇಕು ಅದೆ ರೀತಿ ನಿಷ್ಕಾಳಜಿ ವಹಿಸಿದವರ ಮೇಲೆ ಕ್ರಮಕೈಗೊಳ್ಳಬೇಕೆಂದು ಒತ್ತಾಯ ಮಾಡಿದ್ದಾರೆ. ಇನ್ನು ಈಗಲಾದರೂ ಅಧಿಕಾರಿಗಳು ಪರಿಹಾರದ ಹಣ ನೀಡಿ ಅನುಕೂಲ ಮಾಡಬೇಕಿದೆ.
![](https://vijayapatha.in/wp-content/uploads/2024/02/QR-Code-VP-1-1-300x62.png)