ಧಾರವಾಡ : ಕೊರೊನಾ ನಿಯಂತ್ರಣಕ್ಕಾಗಿ ಲಾಕ್ ಡೌನ್ ಘೋಷಿಸಿದ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ, ಮಹಿಳೆಯರ ಜನಧನ ಖಾತೆಗಳಿಗೆ, ತಲಾ 500 ರೂ.ನೇರ ನಗದು ಜಮೆ ಮಾಡುವ ಕಾರ್ಯ ಏ.3 ರಿಂದ ಜಿಲ್ಲೆಯಲ್ಲಿ ಪ್ರಾರಂಭವಾಗಲಿದೆ. ಜಿಲ್ಲೆಯಾದ್ಯಂತ ಸುಮಾರು 5 ಲಕ್ಷಕ್ಕೂ ಅಧಿಕ ಜನರಿಗೆ ಈ ಪ್ರಯೋಜನ ದೊರೆಯಲಿದೆ. ಸಾಮಾಜಿಕ ಅಂತರ ಕಾಯ್ದುಕೊಂಡು ಹಾಗೂ ಬ್ಯಾಂಕ್ ಮಿತ್ರ ಅವರ ಮೂಲಕ ಗ್ರಾಹಕರು ಈ ಸೌಲಭ್ಯ ಸದುಪಯೋಗ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿಂದು ಜಿಲ್ಲಾ ಮಟ್ಟದ ಬ್ಯಾಂಕರುಗಳ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಜನರಿಗೆ ಕಷ್ಟಕಾಲದಲ್ಲಿ ಸಹಾಯವಾಗಲಿ ಎಂಬ ಆಶಯದೊಂದಿಗೆ ರೂಪಗೊಂಡಿರುವ ಈ ಯೋಜನೆಯನ್ನು ಜಿಲ್ಲೆಯ ಬ್ಯಾಂಕಗಳು ಸಮರ್ಪಕವಾಗಿ ಫಲಾನುಭವಿಗಳಿಗೆ ತಲುಪಿಸಬೇಕು.
ಎಲ್ಲ ಬ್ಯಾಂಕ್ಗಳಲ್ಲಿ ಸಾಮಾಜಿಕ ಅಂತರ ಕಾಪಾಡಲು ಒಂದು ಮೀಟರ್ ಅಂತರದಲ್ಲಿ ಗುರುತುಗಳನ್ನು ಹಾಕಿ ಗ್ರಾಹಕರಿಗೆ ಆರೋಗ್ಯದ ಅರಿವು ಕೂಡಾ ಮೂಡಿಸಬೇಕು. ಗ್ರಾಮೀಣ ಪ್ರದೇಶಗಳ ಬ್ಯಾಂಕಗಳು ತಮ್ಮ ಬ್ಯಾಂಕಿಂಗ್ ಕರೆಸ್ಪಾಂಡೆಂಟ್ ಅಥವಾ ಬ್ಯಾಂಕ್ ಮಿತ್ರರ ಮೂಲಕ ಗ್ರಾಹಕರಿಗೆ ನಗದು ವಿಲೇವಾರಿ ಮಾಡಬೇಕು. ಬ್ಯಾಂಕ್ ಮಿತ್ರರಿಗೆ ಅಧಿಕೃತವಾಗಿ ಗುರುತಿನ ಕಾರ್ಡು ನೀಡಿ ಪೊಲೀಸರಿಗೆ ಮಾಹಿತಿ ಒದಗಿಸಬೇಕು. ನಗರ ಪ್ರದೇಶಗಳಲ್ಲಿ ಎಟಿಎಂ ಗಳ ಮೂಲಕ ಫಲಾನುಭವಿಗಳು ತಮ್ಮ ನಗದು ಪಡೆಯಬಹುದು.
ಬ್ಯಾಂಕ್ಗಳಲ್ಲಿ 500 ಕ್ಕಿಂತ ಹೆಚ್ಚು ಪಿಎಮ್ಜೆಡಿವಾಯ್ ಖಾತೆಗಳನ್ನು ಹೊಂದಿದ್ದರೆ ಅಂತಹ ಬ್ಯಾಂಕಗಳ ವ್ಯವಸ್ಥಾಪಕರು ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಿ, ಪೊಲೀಸ್ ಸಿಬ್ಬಂದಿಯ ನೆರವು ಪಡೆಯಬಹುದು. ಕೊರೊನಾ ಸೋಂಕು ತಡೆಯಲು ಅಗತ್ಯವಿರುವ ಸ್ಯಾನಿಟೈಸ್ರ್ ಉಪಯೋಗಿಸಬೇಕು ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಕೆ ಎಮ್ ಈಶ್ವರ ಮಾತನಾಡಿ, ಧಾರವಾಡ ಜಿಲ್ಲೆಯಲ್ಲಿ 5 ಲಕ್ಷಕ್ಕೂ ಅಧಿಕ ಮಹಿಳೆಯರು ಪಿಎಮ್ಜೆಡಿವಾಯ್ ಖಾತೆ ಹೊಂದಿದ್ದಾರೆ. ಈ ಗ್ರಾಹಕರಿಗೆ ವಿವಿಧ ಬ್ಯಾಂಕಗಳ 348 ಶಾಖೆಗಳು ಹಾಗೂ 450 ಎಟಿಎಮ್ ಗಳ ಮೂಲಕ ಈ ಸೇವೆಗಳನ್ನು ಒದಗಿಸಲಾಗುವುದು ಎಂದರು.
ಯಾವ ಖಾತೆಯವರು ಯಾವ ದಿನ ಹಣ ಪಡೆಯಬಹುದು : ಗ್ರಾಹಕರು ತಾವು ಹೊಂದಿರುವ ಪಿಎಮ್ಜೆಡಿವಾಯ್ ಖಾತೆಯ ಸಂಖ್ಯೆಯು ಸೊನ್ನೆ(0) ಅಥವಾ ಒಂದು ಅಂಕಿಯಿಂದ ಕೊನೆಗೊಳ್ಳುವ ಫಲಾನುಭವಿಗಳು ಏಪ್ರಿಲ್ 3 ರಂದು ಮತ್ತು 2 ಅಥವಾ 3 ಅಂಕಿಯಿಂದ ಕೊನೆಗೊಳ್ಳುವ ಖಾತೆ ಸಂಖ್ಯೆಗಳ ಫಲಾನುಭವಿಗಳು ಏಪ್ರಿಲ್ 4 ರಂದು, 4 ಅಥವಾ 5 ಅಂಕಿಯಿಂದ ಕೊನೆಗೊಳ್ಳುವ ಖಾತೆ ಸಂಖ್ಯೆಗಳ ಫಲಾನುಭವಿಗಳು ಏಪ್ರಿಲ್ 7 ರಂದು, 6 ಅಥವಾ 7 ಅಂಕಿಯಿಂದ ಕೊನೆಗೊಳ್ಳುವ ಖಾತೆ ಸಂಖ್ಯೆಗಳ ಫಲಾನುಭವಿಗಳು ಏಪ್ರಿಲ್ 8 ರಂದು ಮತ್ತು 8 ಅಥವಾ 9 ಅಂಕಿಯಿಂದ ಕೊನೆಗೊಳ್ಳುವ ಖಾತೆ ಸಂಖ್ಯೆಗಳ ಫಲಾನುಭವಿಗಳು ಏಪ್ರಿಲ್ 9 ರಂದು ತಾವು ಪಿಎಮ್ಜೆಡಿವಾಯ್ ಖಾತೆ ಹೊಂದಿರುವ ಬ್ಯಾಂಕಿಗೆ ಭೇಟಿನೀಡಿ ಹಣ ಪಡೆಯಬಹುದು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ಬಿ.ಸಿ.ಸತೀಶ ಸೇರಿದಂತೆ ಜಿಲ್ಲೆಯ ವಿವಿಧ ಬ್ಯಾಂಕ್ಗಳ ಅಧಿಕಾರಿಗಳು ಭಾಗವಹಿಸಿದ್ದರು.
![](https://vijayapatha.in/wp-content/uploads/2024/02/QR-Code-VP-1-1-300x62.png)