ವಿಜಯಪುರ: ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದ ತೋಟದ ಕೊಳವೆ ಬಾವಿಗೆ ಬಿದ್ದಿದ್ದ 2 ವರ್ಷದ ಸಾತ್ವಿಕ್ ಕೊನೆಗೂ ಸಾವಿನ ದವಡೆಯಿಂದ ತಪ್ಪಿಕೊಂಡು ಬಂದಿದ್ದಾನೆ.
ಸತತ 21 ಗಂಟೆಗಳ ಎನ್ಡಿಆರ್ಎಫ್, ಎಸ್ಡಿಆರ್ಎಫ್ ಕಾರ್ಯಾಚರಣೆ ಯಶಸ್ವಿಯಾಗಿದೆ. ತಲೆ ಕೆಳಗೆ ಬಿದ್ದ ಸತೀಶ್-ಪೂಜಾ ದಂಪತಿಯ ಮಗು ಸಾತ್ವಿಕ್ ಬದುಕಿ ಉಳಿಯುತ್ತಾ ಎಂಬ ಪ್ರಶ್ನೆ ಎಲ್ಲರನ್ನು ಕಾಡಿತ್ತು. ಆದರೆ ಪವಾಡ ಎಂಬಂತೆ ಸಾತ್ವಿಕ್ ಬದುಕುಳಿದಿದ್ದಾನೆ.
ಬೆಳಗ್ಗೆ ಮಗು ಅಳುತ್ತಿರುವ ಧ್ವನಿಯನ್ನು ಎನ್ಡಿಆರ್ಎಫ್, ಎಸ್ಡಿಆರ್ಎಫ್ ನೌಕರರು ಕಾರ್ಯಾಚರಣೆ ವೇಳೆ ಕೇಳಿಸಿಕೊಂಡಿದ್ದರು.
ಮಗುವನ್ನು ಜೀವಂತವಾಗಿ ಮೇಲಿತ್ತಿಕೊಂಡ ಕೂಡಲೇ ಎನ್ಡಿಆರ್ಎಫ್, ಎಸ್ಡಿಆರ್ಎಫ್ ನೌಕರರು ಭಾರಿ ಸಂತಸಗೊಂಡಿದ್ದು ಮುಗುವಿನ ಕೆನ್ನೆಯನ್ನು ಮುದ್ದಿಸುವ ಮೂಲಕ ತಮ್ಮ ಕೆಲಸದ ಸಾರ್ಥಕತೆಗೆ ಖುಷಿಪಡುವ ದೃಶ್ಯ ಸ್ಥಳದಲ್ಲೇ ಬೀಡುಬಿಟ್ಟಿದ್ದ ಎಲ್ಲರ ಮೊಗದಲ್ಲೂ ಮಂದಹಾಸ ಮೂಡಿಸಿತು.
ಈ ವೇಳೆ ಸ್ಥಳದಲ್ಲಿದ್ದವರು ಚಿಳ್ಳೆ ಕೂಗು ಹಾಕುವ ಮೂಲಕ ಎನ್ಡಿಆರ್ಎಫ್, ಎಸ್ಡಿಆರ್ಎಫ್ ನೌಕರರ ಕಾರ್ಯವನ್ನು ಶ್ಲಾಘಿಸಿದ್ದಾರೆ. ಎನ್ಡಿಆರ್ಎಫ್, ಎಸ್ಡಿಆರ್ಎಫ್ ಸಿಬ್ಬಂದಿಯ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇನ್ನು ಮಗು 16 ಅಡಿ ಆಳದಲ್ಲಿ ಸಿಲುಕಿಕೊಂಡಿದ್ದು, 20 ಅಡಿ ಆಳದ ವರೆಗೆ ರಂಧ್ರಕೊರೆದು ಎನ್ಡಿಆರ್ಎಫ್, ಎಸ್ಡಿಆರ್ಎಫ್ ನೌಕರರು 16 ಅಡಿ ಆಳದಲ್ಲಿ ಸಿಲುಕಿದ್ದ ಬಾಲಕನ ರಕ್ಷಣೆ ಮಾಡಿದ್ದಾರೆ.
ಇನ್ನು ಕೊಳವೆಬಾವಿ ಪಕ್ಕದಲ್ಲಿ ಸಮಾನಾಂತರವಾಗಿ 2 ಜೆಸಿಬಿ ಬಳಸಿ ಗುಂಡಿಯನ್ನು ತೋಡಲಾಗಿತ್ತು. ಕೊಳವೆ ಬಾವಿಗೆ ಕ್ಯಾಮೆರಾ ಇಳಿಬಿಟ್ಟು ಬಾಲಕನ ಚಲನವಲನವನ್ನು ಕ್ಷಣ ಕ್ಷಣಕ್ಕೂ ಗಮನಿಸಲಾಗುತ್ತಿತ್ತು.
ಜಿಲ್ಲಾಧಿಕಾರಿ ಟಿ.ಭೂಬಾಲನ್, ಎಸ್ಪಿ ಋಷಿಕೇಶ ಸೋನಾವಣೆ, ಉಪ ವಿಭಾಗಾಧಿಕಾರಿ ಅಬೀದ್ ಗದ್ಯಾಳ ಅವರು ಸ್ಥಳದಲ್ಲೇ ಬೀಡು ಬಿಟ್ಟು ಕಾರ್ಯಾಚರಣೆ ಗಮನಿಸಿದ್ದರು.
ಸತೀಶ್-ಪೂಜಾ ದಂಪತಿಗೆ ನಾಲ್ಕು ಎಕರೆ ಜಮೀನಿದ್ದು, ನಿಂಬೆ ಮತ್ತು ಕಬ್ಬಿಗೆ ನೀರಿನ ಕೊರತೆ ಎದುರಾಗಿದ್ದ ಹಿನ್ನೆಲೆಯಲ್ಲಿ ಕೊಳವೆ ಬಾವಿ ಕೊರೆಸಿದ್ದರು. ಆದರೆ ನೀರು ಬಂದಿರಲಿಲ್ಲ. ಹೀಗಾಗಿ ಅದನ್ನು ಮುಚ್ಚದೆ ಹಾಗೆ ಬಿಟ್ಟಿದ್ದರು ಎಂದು ಹೇಳಲಾಗುತ್ತಿದೆ.