ಕಬ್ಬಿನ ಹಣ ಪಾವತಿಗಾಗಿ ಡಿಸಿ ಕಚೇರಿ ಮುಂದೆ ಏ.21ರಿಂದ ನಿರಂತರ ಪ್ರತಿಭಟನಾ ಧರಣಿ: ಕುರುಬೂರ್ ಶಾಂತಕುಮಾರ್

ಮೈಸೂರು: ಕಬ್ಬಿನ ಹಣ ಪಾವತಿಗಾಗಿ ಮೈಸೂರು ಜಿಲ್ಲಾಧಿಕಾರಿ ಕಚೇರಿ ಮುಂದೆ ಏ.21ರಿಂದ ನಿರಂತರ ಪ್ರತಿಭಟನಾ ಧರಣಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರ್ ಶಾಂತಕುಮಾರ್ ತಿಳಿಸಿದ್ದಾರೆ.

ಇಂದು ನಗರದಲ್ಲಿ ಹಮ್ಮಿಕೊಂಡಿದ್ದ ರಾಜ್ಯ ರೈತ ಸಂಘಟನೆಗಳ ಒಕ್ಕೂಟ. ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ರೈತರ ಸಮಸ್ಯೆಗಳ ಕುರಿತು ಚರ್ಚಿಸಲು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ರಾಜ್ಯಾಧ್ಯಕ್ಷರು, ರಾಜ್ಯ ಸರ್ಕಾರದ ಆದೇಶಗಳಿಗೆ ಗೌರವ ನೀಡದ ನಿರ್ಲಕ್ಷತನ ತೋರುವ ಬಣ್ಣಾರಿ ಸಕ್ಕರೆ ಕಾರ್ಖಾನೆ ಮುಖ್ಯಮಂತ್ರಿಗಳ ಕ್ಷೇತ್ರದಲ್ಲಿ ಆದೇಶವನ್ನು ನಿರ್ಲಕ್ಷಿಸಿದೆ.
ಕಬ್ಬು ಬೆಳೆಗಾರ ರೈತರ ಖಾತೆಗಳಿಗೆ ಹಣ ಜಮಾ ವಾಗುವ ತನಕ ಹೋರಾಟ ನಿಲ್ಲಿಸುವುದಿಲ್ಲ. ರೈತರ ಹಣ ಬಾಕಿ ವಿಚಾರದಲ್ಲಿ ಜಿಲ್ಲಾಧಿಕಾರಿಗಳು ತಮ್ಮ ಅಧಿಕಾರ ಬಳಸಿ ರಿಕವರಿ ಸರ್ಟಿಫಿಕೇಟ್ ಜಾರಿಮಾಡಿ ಸಕ್ಕರೆ ದಾಸ್ತಾನು ಜಪ್ತಿ ಮಾಡಬೇಕು ಎಂದು ಜಿಲ್ಲಾಧಿಕಾರಿಗೆ ಒತ್ತಾಯಿಸಿದರು.
ರಾಜ್ಯ ಸರ್ಕಾರ ನಿಗದಿ ಮಾಡಿದ ಹೆಚ್ಚುವರಿ ಕಬ್ಬಿನ ಹಣ ಪ್ರತಿ ಟನ್ಗೆ 100 ರೂಪಾಯಿ ಬಣ್ಣಾರಿ ಕಾರ್ಖಾನೆ ಮತ್ತು ಮಹದೇಶ್ವರ ಕಾರ್ಖಾನೆಯಿಂದ ತಕ್ಷಣವೇ ರೈತರಿಗೆ ಕೊಡಿಸಬೇಕು.
ಕರ್ನಾಟಕ ಗ್ರಾಮೀಣ ಬ್ಯಾಂಕ್ ರೈತರ ಸಾಲ ತೀರುವಳಿ OTS ಮಾಡುವಂತೆ ಒತ್ತಾಯಿಸಿ ಬ್ಯಾಂಕುಗಳಲ್ಲಿ ರೈತರು ತುರ್ತು ಕಾರ್ಯಗಳಿಗೆ ಉಪಯೋಗಿಸುವ ಚಿನ್ನದ ಗಿರವಿ ಸಾಲಕ್ಕೆ ಸಿಬಿಲ್ ಸ್ಕೋರ್ ನೋಡಿ ಸಾಲ ನೀಡುವ ಪದ್ಧತಿ ರದ್ದುಗೊಳಿಸುವಂತೆ ಹಾಗೂ ಚಿನ್ನದ ಸಾಲ ನವೀಕರಣಕ್ಕೆ ಪ್ರತಿ ವರ್ಷ ಬಡ್ಡಿ ಕಟ್ಟಿಸಿಕೊಂಡು ಹಳೆಯ ಪದ್ಧತಿಯಂತೆ ನವೀಕರಿಸಲು ಒತ್ತಾಯಿಸಿದರು.
ಕೃಷಿ ಪಂಪ್ಸೆಟ್ಟುಗಳ ಅಕ್ರಮ ಸಕ್ರಮ ಹಳೆ ಪದ್ದತಿಯಂತೆ ಮುಂದುವರಿಸಬೇಕು. ಸರ್ಕಾರವೇ ಎಲ್ಲ ವೆಚ್ಚ ಬರಿಸಬೇಕು. ಐವತ್ತು ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ರೈತರಿಗೆ ಸಾಗುವಳಿ ಚೀಟಿ ಕೊಡುವಂತೆ ಹಾಗೂ ಸಾಗುವಳಿ ಜಮೀನುಗಳ ದುರಸ್ತಿ ಕಾರ್ಯ ಹಾಗೂ ಪೋಡಿ ಸರಳೀಕರಣ ಗೊಳಿಸಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಇದೆ 21 ರಿಂದ ನಿರಂತರ ಪ್ರತಿಭಟನೆ ಧರಣಿ ನಡೆಸಲು ತೀರ್ಮಾನ ಮಾಡಲಾಗಿದೆ ಎಂದರು.
ಈ ಸಭೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬರಡನಪುರ ನಾಗರಾಜ್, ಕಾರ್ಯಾಧ್ಯಕ್ಷ ಕಿರಗಸೂರು ಶಂಕರ್, ಮಾರ್ಬಳ್ಳಿ ನೀಲಕಂಠಪ್ಪ, ಲಕ್ಷ್ಮೀಪುರ ವೆಂಕಟೇಶ್, ವರಕೋಡು ನಾಗೇಶ್, ಕುರುಬೂರು ಸಿದ್ದೇಶ್, ಕೆಂಡಗಣಪ್ಪ, B.P.ಪರಶಿವಮೂರ್ತಿ, ಪ್ರಸಾದ್ ನಾಯಕ, ಬಸವರಾಜ, ನಂಜುಂಡಸ್ವಾಮಿ, ಅಂಬಳೆ ಮಂಜುನಾಥ್, ರಂಗರಾಜು, ನಾಗೇಂದ್ರ, ರವಿಕುಮಾರ್, ಜಯರಾಮು, ಮಹಾದೇವು, ಪ್ರಭಾಕರ್, ರಾಜು, ಬಾಲು, ಸತೀಶ್, ಶಿವಣ್ಣ, ಬಸವರಾಜ, ಮಹೇಶ್, ಕಮಲಮ್ಮ ಇದ್ದರು.
Related









