ಏ.27ರಂದು ಪಿಎಫ್ ಕಚೇರಿ ಮುಂದೆ ಇಪಿಎಸ್ ಪಿಂಚಣಿದಾರರ ಪ್ರತಿಭಟನೆ : ನಂಜುಂಡೇಗೌಡ
ಬಹುಶಃ ಫ್ರೀಡಂ ಪಾರ್ಕ್ ನಿರ್ಮಿಸಿರುವುದೇ ಸಾರಿಗೆ ಸಂಸ್ಥೆ ನೌಕರರ ಪ್ರತಿಭಟನೆಗಾಗಿಯೇ ಎಂದು ಅರ್ಥೈಸಬೇಕಾಗಿದೆ

ಬೆಂಗಳೂರು: “ನಿಧಿ ಆಪ್ಕೆ ನಿಕಟ್” ಇಪಿಎಸ್ ಪಿಂಚಣಿದಾರರ 40ನೇ ಪ್ರತಿಭಟನೆ ನಗರದ ರಿಚ್ಮಂಡ್ ವೃತ್ತದಲ್ಲಿರುವ ಪಿಎಫ್ ಕಚೇರಿ ಆವರಣದಲ್ಲಿ ಏ.27ರಂದು ನಡೆಯಲಿದೆ ಎಂದು ಬಿಎಂಟಿಸಿ ಹಾಗೂ ಕೆಎಸ್ಆರ್ಟಿಸಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ನಂಜುಂಡೇಗೌಡ ತಿಳಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಭವ್ಯ ಭಾರತದ ಭವಿಷ್ಯವನ್ನು ರೂಪಿಸಿದವರು 82 ಲಕ್ಷ ಇಪಿಎಸ್ ನಿವೃತ್ತರು ಎಂದರೆ ತಪ್ಪಾಗಲಾರದು. ಹಡಗಲಿರುಳೆನ್ನದೆ ಬೆವರು ಸುರಿಸಿ, ದೇಶ ಕಟ್ಟಿದವರನ್ನು ಇಂದು ಕೇಂದ್ರ ಸರ್ಕಾರ ನಿರ್ಲಕ್ಷಿಸಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.
ಇನ್ನು ಪಾರ್ಲಿಮೆಂಟ್ ಬಜೆಟ್ ಅಧಿವೇಶನ ಹಾಗೂ ವಿಶೇಷ ಅಧಿವೇಶನ ಇವೆಲ್ಲವೂ ಕೇವಲ ಡಂಬಾಚಾರ, ಇಪಿಎಸ್ ನಿವೃತ್ತರಿಗೆ ಸರಿಯಾದ ಮಾರ್ಗಸೂಚಿಯನ್ನು ರಚಿಸಲು ವಿಫಲರಾಗಿರುವುದು ಇಡೀ ವ್ಯವಸ್ಥೆಯ ದೋಷವಲ್ಲದೆ ಮತ್ತೇನು?. ಪರಿಸ್ಥಿತಿ ಕೈಮೀರುವ ಮುನ್ನ ವಾಸ್ತವ ಸಂಗತಿಗಳನ್ನು ಸರ್ಕಾರ ಅರ್ಥಮಾಡಿಕೊಂಡು, ನಮ್ಮ ಬೇಡಿಕೆಗಳನ್ನು ಈಡೇರಿಸಿ ಎಂದುಇಪಿಎಸ್ ನಿವೃತ್ತರು ಕೇಂದ್ರ ಸರ್ಕಾರಕ್ಕೆ ಆಗ್ರಹಿಸುತ್ತಿದ್ದೇವೆ ಎಂದರು.
ಸಾರಿಗೆ ಸಂಸ್ಥೆಯ ನೌಕರರು ಸೇವೆಯಲ್ಲಿರಲಿ ಅಥವಾ ನಿವೃತ್ತರಾಗಿರಲಿ ಸಂಕಷ್ಟ ತಪ್ಪಿದ್ದಲ್ಲ. ಬಹುಶಃ ಫ್ರೀಡಂ ಪಾರ್ಕ್ ನಿರ್ಮಿಸಿರುವುದು ಸಂಸ್ಥೆಯ ನೌಕರರ ಪ್ರತಿಭಟನೆಗಾಗಿಯೇ ಎಂದು ಅರ್ಥೈಸಬೇಕಾಗಿದೆ. ಸರ್ಕಾರಿ ಸಾರಿಗೆ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿರುವ ಚಾಲನಾ ಸಿಬ್ಬಂದಿಯ ಬದುಕು ಅತಂತ್ರದಿಂದ ಕೂಡಿದ್ದು, ಚಳಿ, ಮಳೆ, ಬಿಸಿಲೆನ್ನದೆ ತನ್ನ ಜೀವವನ್ನೇ ಪಣಕ್ಕಿಟ್ಟು, “ಜನಸೇವೆಯೇ ಜನಾರ್ದನ ಸೇವೆ” ಎಂಬ ನಾಣ್ನುಡಿಯಂತೆ ಸೇವೆ ಸಲ್ಲಿಸುತ್ತಿದ್ದು, ತನ್ನ ಸೇವಾ ನಿವೃತ್ತಿಯ ನಂತರ ರಾಜ್ಯ ಸರ್ಕಾರ ತನಗೂ ನೌಕರರಿಗೂ ಯಾವುದೇ ಸಂಬಂಧ ಇಲ್ಲ ಎಂದು, ಮತ್ತೊಂದು ಕಡೆ ಕೇಂದ್ರ ಸರ್ಕಾರ ತನ್ನ ಕಪಿಮುಷ್ಟಿಯಿಂದಾಗಿ ನಿವೃತ್ತರು ಹೈರಾಣಾಗಿದ್ದಾರೆ. ಬದುಕಿನ ಬೆಳಕನ್ನು ಕಾಣದೆ ಅದೆಷ್ಟೋ ಜೀವಗಳು ಕಮರಿ ಹೋಗಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇಪಿಎಸ್ ಪಿಂಚಣಿದಾರರ ಕನಿಷ್ಠ ಪಿಂಚಣಿ ಮೊತ್ತವನ್ನು ಈಗಿರುವ 1,000 ರೂ.ಗಳಿಂದ 7,500 ರೂ.ಗಳಿಗೆ ಹೆಚ್ಚಳ ಮಾಡುವುದರಿಂದ ಸರಕಾರಕ್ಕೆ ಹೆಚ್ಚಿನ ಹೊರೆ ಬೀಳುವುದಿಲ್ಲ. ಇನ್ನೂ 82 ಲಕ್ಷ ಇಪಿಎಸ್ ನಿವೃತ್ತರಿಂದ ಸಂಗ್ರಹಿಸಿದ ಹಣದಲ್ಲಿ, ಅನ್ ಕ್ಲೇಮ್ಡ್ ಕಾರ್ಪಸ್ ಮೊತ್ತ ಸುಮಾರು 95 ಸಾವಿರ ಕೋಟಿ ರೂ.ಗಳಿದ್ದು, ಇದನ್ನು ವಿನಿಯೋಗಿಸಿದರೆ ಯಾವುದೇ ಹಣಕಾಸಿನ ಕೊರತೆ ಉಂಟಾಗುವುದಿಲ್ಲ.
ಆದರೆ ಜನ ಪ್ರತಿನಿಧಿಗಳಿಗೆ ಇಪಿಎಸ್ ನಿವೃತ್ತರ ಬಗ್ಗೆ ಯಾವುದೇ ಕಾಳಜಿ ಇಲ್ಲ. ಇವರಿಗೆ ಸ್ವಹಿತಾಸಕ್ತಿಯೇ ಮುಖ್ಯವಾಗಿದೆಯೇ ಹೊರತು ನಿವೃತ್ತರ ಬಗ್ಗೆ ಕಿಂಚಿತ್ತು ಅಭಿಮಾನವಿಲ್ಲ. ಆದರೆ, ಜೀವನ ಪಯಣದಲ್ಲಿ ನಮಗೆ ಸೋಲಾಯಿತು ಎಂದು ಚಿಂತಿಸುವುದು ಬೇಡ. ನಿವೃತ್ತರ ಆಕ್ರೋಶದ ಕಟ್ಟೆ ಯಾವಾಗ ಒಡೆಯುತ್ತದೆ ಎಂದು ಹೇಳಲು ಬರುವುದಿಲ್ಲ. “ಕಾಲಾಯೇ ತಸ್ಮೈಯ್ ನಮಃ”. ಸಮಯವೇ ಎಲ್ಲವನ್ನು ಕಲಿಸುತ್ತದೆ. ತಾಳ್ಮೆಯೇ ಪ್ರಬಲ ಅಸ್ತ್ರ ಎಂದು ಹೇಳಿದ್ದಾರೆ.
ಇನ್ನು ನಾಲ್ಕೂ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಜತೆ ನಮ್ಮ ಸಂಘಟನೆಯೂ ಸಹ ಒಡಂಬಡಿಕೆ ಮಾಡಿಕೊಂಡಿದ್ದು, ಮುಂದಿನ ದಿನಗಳಲ್ಲಿ ಇಪಿಎಸ್ ನಿವೃತ್ತರ ಪಿಂಚಣಿ ಬೇಡಿಕೆಗಳು ಸೇರಿದಂತೆ, ರಾಜ್ಯ ಸರ್ಕಾರದಿಂದ ಸಂಸ್ಥೆಯ ನೌಕರರಿಗೆ ಬರಬೇಕಾದ ಬಾಕಿ ವೇತನ ಮೊತ್ತ, ವೇತನ ಪರಿಷ್ಕರಣೆ ಸಂಬಂಧಿತ (01/01/2024 ರಿಂದ ಕೈಗಾರಿಕಾ ಒಪ್ಪಂದ) ಹೋರಾಟವನ್ನು ಜಂಟಿಯಾಗಿ ನಡೆಸಲು ನಿರ್ಧರಿಸಲಾಗಿದೆ. ನಿವೃತ್ತ ನೌಕರರು ಹಾಗೂ ಹಾಲಿ ಸೇವೆಯಲ್ಲಿರುವ ನೌಕರರು, ನಮ್ಮೆಲ್ಲರ ನೋವು ಒಂದೇ ಆಗಿದೆ. ಬದುಕಿನಲ್ಲಿ ಇಂದು ಕೆಟ್ಟ ದಿನಗಳು ಇರಬಹುದು, ಆದರೆ ಮುಂದೊಂದು ದಿನ ಒಳ್ಳೆಯ ದಿನಗಳು ಬರುತ್ತವೆ ಎಂಬ ಆಶಾ ಭಾವನೆಯೊಂದಿಗೆ ಹೋರಾಟವನ್ನು ಮುಂದುವರಿಸೋಣ.
ಬಿಎಂಟಿಸಿ & ಕೆಎಸ್ಆರ್ಟಿಸಿ ಹಾಗೂ ಕೆಎಸ್ಆರ್ಟಿಸಿ ಕ್ಷೇಮಾಭಿವೃದ್ಧಿ ಟ್ರಸ್ಟ್, ಚಿಕ್ಕಬಳ್ಳಾಪುರ ವತಿಯಿಂದ ಆಯೋಜಿಸಿರುವ, ಇಪಿಎಸ್ ನಿವೃತ್ತರ ಪ್ರತಿಭಟನೆಯಲ್ಲಿ ಕಾರ್ಮಿಕ ಮುಖಂಡರು, ನಮ್ಮ ಸಂಘದ ಎಲ್ಲ ಪದಾಧಿಕಾರಿಗಳು, ಚಿಕ್ಕಬಳ್ಳಾಪುರ ಕೆಎಸ್ಆರ್ಟಿಸಿ ಕ್ಷೇಮಾಭಿವೃದ್ಧಿ ಟ್ರಸ್ಟ್ ನ ಪದಾಧಿಕಾರಿಗಳು, ಸದಸ್ಯರು, ವಿವಿಧ ಸಂಘಟನೆಗಳ ಎಲ್ಲ ಇಪಿಎಸ್ ನಿವೃತ್ತರು, ಕಂಪನಿ ಹಾಗೂ ಕಾರ್ಖಾನೆಗಳ ನಿವೃತ್ತರು ಆಗಮಿಸಲಿದ್ದು, ಅಧಿಕಾರಿಗಳು ಮುಖಂಡರಿಗೆ ಲಿಖಿತ ರೂಪದಲ್ಲಿ ಕೊಟ್ಟ ಭರವಸೆಯನ್ನು ಕೇಂದ್ರ ಸರ್ಕಾರ ಈಡೇರಿಸಲೇಬೇಕು?. ತಪ್ಪಿದಲ್ಲಿ ಮುಂದಿನ ಆಗು ಹೋಗುಗಳಿಗೆ ಕೇಂದ್ರ ಸರ್ಕಾರವೇ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಸುವುದಾಗಿ ತಿಳಿಸಿದ್ದಾರೆ.
ಇಪಿಎಸ್ ನಿವೃತ್ತರ ಈ ಎಲ್ಲ ಬೇಡಿಕೆಗಳಿಗೆ ಸಂಬಂಧಿಸಿದಂತೆ ಏ.27ರ ಸೋಮವಾರ ಬೆಳಗ್ಗೆ 10:30ಕ್ಕೆ ಪ್ರತಿಭಟನೆ ಪ್ರಾರಂಭಿಸಲಾಗುವುದು. ನಗರದ ರಿಚ್ಮಂಡ್ ವೃತ್ತದಲ್ಲಿರುವ ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿ ಆವರಣದಲ್ಲಿ ಜರುಗುವ ಈ ಪ್ರತಿಭಟನೆ ಹಾಗೂ ಅಧಿಕಾರಿಗಳ ಮೂಲಕ ಕೇಂದ್ರ ಸರ್ಕಾರದ ಸಚಿವರುಗಳಿಗೆ ಮನವಿ ಪತ್ರವನ್ನು ಸಲ್ಲಿಸುವುದಕ್ಕೆ ಎಲ್ಲ ಇಪಿಎಸ್ ನಿವೃತ್ತರು ಭಾಗವಹಿಸಬೇಕೆಂದು ಕಾರ್ಯಕಾರಿ ಸಮಿತಿ ಪರವಾಗಿ ವಿನಂತಿಸಿಕೊಂಡಿದ್ದಾರೆ.
Related









