ಕಾರ್ಮಿಕರ ಕನಿಷ್ಠ ವೇತನ ತಿಂಗಳಿಗೆ 36 ಸಾವಿರ ರೂ. ಹೆಚ್ಚಿಸಲು ಆಗ್ರಹಿಸಿ ಮೇ 30ರಂದು ಸಿಐಟಿಯು ಪ್ರತಿಭಟನೆ
ಬೆಂಗಳೂರಿನಲ್ಲಿರುವ ಇದೇ ಸಿಐಟಿಯು ಸಂಘಟನೆಯ ಮುಖಂಡರು ಸಾರಿಗೆ ನೌಕರರಿಗೆ ಕೇವಲ ಶೇ.25ರಷ್ಟು ವೇತನ ಹೆಚ್ಚಳ ಮಾಡಿ ಎಂದು ಹೋರಾಟ ಮಾಡುತ್ತಿದ್ದಾರೆ. ಈಗ ಅದರಲ್ಲೂ ಶೇ.20ರಷ್ಟು ವೇತನ ಹೆಚ್ಚಳ ಮಾಡಿ ಎಂದು ನಾವು ಐದು ಪರ್ಸೆಂಟ್ ಬಿಟ್ಟುಕೊಡುವುದಾಗಿ ಹೇಳಿಕೆ ನೀಡುತ್ತಿದ್ದಾರೆ. ಆದರೆ, ಇಲ್ಲಿ ಅಸಂಘಟಿತ ಮತ್ತು ಖಾಸಗಿ ವಲಯಗಳಲ್ಲಿ ಕೆಲಸ ಮಾಡುತ್ತಿರುವ ನೌಕರರಿಗೆ 36 ಸಾವಿರ ರೂ. ನಿಗದಿ ಮಾಡಬೇಕು ಎಂದು ಆಗ್ರಹಿಸುತ್ತಿದೆ.

ಹಾಸನ: ಕಾರ್ಮಿಕರ ಕನಿಷ್ಠ ವೇತನವನ್ನು ತಿಂಗಳಿಗೆ 36 ಸಾವಿರ ರೂಪಾಯಿಗೆ ಹೆಚ್ಚಿಸಬೇಕು ಹಾಗೂ ಕಾರ್ಮಿಕ ವಿರೋಧಿ ನೀತಿಗಳನ್ನು ಕೈಬಿಡಬೇಕು ಎಂದು ಆಗ್ರಹಿಸಿ ಇದೇ ಮೇ 30ರಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಸಿಐಟಿಯು ಜಿಲ್ಲಾ ಅಧ್ಯಕ್ಷ ಧರ್ಮೇಶ್ ತಿಳಿಸಿದ್ದಾರೆ.
ನಗರದಲ್ಲಿ ಮೊನ್ನೆ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶವು ತೀವ್ರ ಸಾಮಾಜಿಕ ಮತ್ತು ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದು, ಕೇಂದ್ರ ಸರ್ಕಾರದ ತಪ್ಪು ಆರ್ಥಿಕ ನೀತಿಗಳಿಂದ ಉತ್ಪಾದನಾ ವಲಯ ಕುಸಿತ ಕಂಡಿದೆ ಎಂದು ಆರೋಪಿಸಿದರು.
ಇನ್ನು ನಿರುದ್ಯೋಗ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ದೇಶದ ಆರ್ಥಿಕತೆ ಅಭಿವೃದ್ಧಿಯ ಹಾದಿಯಲ್ಲಿದೆ ಎಂಬ ಸರ್ಕಾರದ ವಾದ ವಾಸ್ತವಕ್ಕೆ ದೂರವಾಗಿದೆ ಎಂದು ಕಟುವಾಗಿ ಟೀಕಿಸಿದರು.
ಅಲ್ಲದೆ ದೇಶದ ಒಟ್ಟು ಸಂಪತ್ತಿನ ಶೇ.90ರಷ್ಟು ಭಾಗ ಕೇವಲ ಶೇ.10ರಷ್ಟು ಶ್ರೀಮಂತರ ಕೈಯಲ್ಲಿ ಕೇಂದ್ರೀಕೃತವಾಗಿದೆ ಎಂದು ಆರೋಪಿಸಿದ ಅವರು, ಉದ್ಯಮಿಗಳ ಆಸ್ತಿ ಅಪಾರವಾಗಿ ಏರಿಕೆಯಾಗುತ್ತಿರುವ ಸಂದರ್ಭದಲ್ಲಿ ಉನ್ನತ ಶಿಕ್ಷಣ ಪಡೆದ ಯುವಕರಿಗೂ ಸಮರ್ಪಕ ಸಂಬಳ ದೊರೆಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜನರ ಗಮನವನ್ನು ನೈಜ ಆರ್ಥಿಕ ಸಮಸ್ಯೆಗಳಿಂದ ಬೇರೆಡೆಗೆ ತಿರುಗಿಸಲು ಧರ್ಮ, ಜಾತಿ ಹಾಗೂ ಕೋಮು ಅಧಾರಿತ ರಾಜಕಾರಣವನ್ನು ಬಳಸಲಾಗುತ್ತಿದೆ ಎಂದು ಆರೋಪಿಸಿದ ಧರ್ಮೇಶ್, ಕನಿಷ್ಠ ವೇತನ ಹೆಚ್ಚಳಕ್ಕೆ ಆಗ್ರಹಿಸಿ ಜಿಲ್ಲೆಯಾದ್ಯಂತ ಸಾರ್ವಜನಿಕರಿಂದ ಸಹಿ ಸಂಗ್ರಹ ನಡೆಸಲಾಗಿದೆ ಎಂದರು.
ಈ ಹಿನ್ನೆಲೆಯಲ್ಲಿ ಮೇ 30ರ ಪ್ರತಿಭಟನೆಯಲ್ಲಿ ಜಿಲ್ಲೆಯ ವಿವಿಧ ಕ್ಷೇತ್ರಗಳ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಬಿ. ಪುಷ್ಪ, ಖಜಾಂಚಿ ಅರವಿಂದ್, ಸೌಮ್ಯ ಸೇರಿದಂತೆ ಇತರರು ಇದ್ದರು.
ಬೆಂಗಳೂರಿನಲ್ಲಿರುವ ಇದೇ ಸಿಐಟಿಯು ಸಂಘಟನೆಯ ಮುಖಂಡರು ಸಾರಿಗೆ ನೌಕರರಿಗೆ ಕೇವಲ ಶೇ.25ರಷ್ಟು ವೇತನ ಹೆಚ್ಚಳ ಮಾಡಿ ಎಂದು ಹೋರಾಟ ಮಾಡುತ್ತಿದ್ದಾರೆ. ಈಗ ಅದರಲ್ಲೂ ಶೇ.20ರಷ್ಟು ವೇತನ ಹೆಚ್ಚಳ ಮಾಡಿ ಎಂದು ನಾವು ಐದು ಪರ್ಸೆಂಟ್ ಬಿಟ್ಟುಕೊಡುವುದಾಗಿ ಹೇಳಿಕೆ ನೀಡುತ್ತಿದ್ದಾರೆ. ಆದರೆ, ಇಲ್ಲಿ ಅಸಂಘಟಿತ ಮತ್ತು ಖಾಸಗಿ ವಲಯಗಳಲ್ಲಿ ಕೆಲಸ ಮಾಡುತ್ತಿರುವ ನೌಕರರಿಗೆ 36 ಸಾವಿರ ರೂ. ನಿಗದಿ ಮಾಡಬೇಕು ಎಂದು ಆಗ್ರಹಿಸುತ್ತಿದೆ.
ಅಂದರೆ, ಸಿಐಟಿಯು ಸಂಘಟನೆ ಒಂದೊಂದು ಭಾಗಕ್ಕೆ ಒಂದೊಂದು ಇದೆಯೋ ಇಲ್ಲ ರಾಜ್ಯದಲ್ಲಿ ಇದೊಂದೆ ಸಂಘಟನೆ ಇದೆಯೋ ಎಂಬುವುದು ಈಗ ಎದ್ದಿರುವ ಪ್ರಶ್ನೆ. ಕಾರಣ ಸಾರಿಗೆ ನೌಕರರಿಗೆ ಈಗಾಗಲೇ ಸರ್ಕಾರಿ ನೌಕರರಿಗಿಂತ ಶೇ.40ರಿಂದ 50 ರಷ್ಟು ಕಡಿಮೆ ಇದೆ. ಅದನ್ನು ಕೊಡಿ ಎಂದು ಕೇಳುವ ಬದಲಿಗೆ ಕೇವಲ ಶೇ.20ರಷ್ಟು ಕೊಡಿ ಸಾಕು ಎಂದು ಹೇಳುವ ಬೆಂಗಳೂರು ನಾಯಕರ ಮನಸ್ಥಿತಿಗೆ ಏನು ಹೇಳಬೇಕೋ ಗೊತ್ತಾಗುತ್ತಿಲ್ಲ.
Related









