ಇಂಧನ, ಗ್ಯಾಸ್ ಬೆಲೆಯೇರಿಕೆ, ವಿದ್ಯುತ್ ಖಾಸಗೀಕರಣ ವಿರೋಧಿಸಿ ರಾರೈಸಂ ಪ್ರತಿಭಟನೆ -ಸರ್ಕಾರಗಳ ವಿರುದ್ಧ ಘೋಷಣೆ
ಕೃಷಿ ಚಟುವಟಿಕೆ ಪ್ರಾರಂಭವಾಗಿದ್ದು ರೈತರಿಗೆ ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ಸಾಲ ನೀಡುವಾಗ ಸಿಬಿಲ್ ಸ್ಕೋರ್ ಅನ್ನು ಮಾನದಂಡವಾಗಿ ಪರಿಗಣಿಸಬಾರದು. ಇದರಿಂದ ರೈತರು ಸಾಲ ಪಡೆಯಲು ಸಾಧ್ಯವಾಗದೆ ಕೃಷಿ ಉತ್ಪನ್ನ ಕುಂಠಿತವಾಗುತ್ತದೆ

ತಿ.ನರಸೀಪುರ: ಪೆಟ್ರೋಲ್, ಡೀಸೆಲ್ ಹಾಗೂ ಗ್ಯಾಸ್ ಸಿಲಿಂಡರ್ಗಳ ಬೆಲೆಯೇರಿಕೆ ಮತ್ತು ವಿದ್ಯುತ್ ಖಾಸಗೀಕರಣ ವಿರೋಧಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳು ಹಾಗೂ ರೈತರು ಪಟ್ಟದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡಿ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದರು.
ಇಂದು ಬೆಳಗ್ಗೆ ಪಟ್ಟಣದ ರಾಷ್ಟ್ರೀಯ ಹೆದ್ದಾರಿ 212ರ ಬಿಂದಿಗೆ ಕಾರ್ಖಾನೆ ಬಳಿ ಜಮಾವಣೆಗೊಂಡ ಕಬ್ಬು ಬೆಳೆಗಾರರ ಸಂಘದ ಸದಸ್ಯರು, ರೈತರು ಮತ್ತು ಮುಖಂಡರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ ವಿರೋಧಿ ನೀತಿಯನ್ನು ವಿರೋಧಿಸಿ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ರೈತರು ಬಹಳ ಸಂಕಷ್ಟದಲ್ಲಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರ ರೈತರ ಜತೆ ಚೆಲ್ಲಾಟ ಆಡುತ್ತಿವೆ, ಇದು ಸರಿಯಾದ ನೀತಿಯಲ್ಲ ಎಂದು ಕಿಡಿ ಕಾರಿದರು.

ಬೆಳೆಗಳಿಗೆ ಎಂಎಸ್ಪಿ ಗ್ಯಾರಂಟಿ ಬೆಲೆ ನಿಗದಿ ಮಾಡದೆ ರೈತರು ಅತ್ಯಂತ ಕೆಳಸ್ಥಿತಿಗೆ ತಲುಪುತ್ತಿದ್ದಾರೆ. ಇನ್ನು ಅಗತ್ಯ ಮೂಲ ಸೌಕರ್ಯವಾದ ವಿದ್ಯುತ್ ಸರಬರಾಜನ್ನು ಖಾಸಗೀಕರಣ ಮಾಡಲು ಹೊರಟಿರುವುದು ವಿಷಾದಕರ ಸಂಗತಿ. ಇದರಿಂದ ರೈತರ ಬಾಳು ಅತಂತ್ರವಾಗಲಿದೆ ಎಂದು ಅಸಮಾಧಾನ ಹೊರಹಾಕಿದರು.
ಕೃಷಿ ಚಟುವಟಿಕೆ ಪ್ರಾರಂಭವಾಗಿದ್ದು ರೈತರಿಗೆ ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ಸಾಲ ನೀಡುವಾಗ ಸಿಬಿಲ್ ಸ್ಕೋರ್ ಅನ್ನು ಮಾನದಂಡವಾಗಿ ಪರಿಗಣಿಸಬಾರದು. ಇದರಿಂದ ರೈತರು ಸಾಲ ಪಡೆಯಲು ಸಾಧ್ಯವಾಗದೆ ಕೃಷಿ ಉತ್ಪನ್ನ ಕುಂಠಿತವಾಗುತ್ತದೆ ಎಂದು ಆರೋಪಿಸಿದರು.
ರಸ ಗೊಬ್ಬರಗಳ ಖರೀದಿಗೆ FID ಕಡ್ಡಾಯ ಕೈ ಬಿಡಬೇಕು, ಹಾಗೂ ಮೈಕ್ರೋ ಫುಡ್ ಲಿಂಕ್ ಮಾಡಿ ಖರೀದಿ ಮಾಡುವಂತೆ ಒತ್ತಾಯ ಮಾಡಬಾರದು, ರಸ ಗೊಬ್ಬರಗಳ ಬೆಲೆ ಏರಿಕೆ ಮಾಡಿರುವುದು ಕೃಷಿ ಚಟುವಟಿಕೆಗೆ ಮಾರಕವಾಗಿದ್ದು ಕೃಷಿ ಉತ್ಪನ್ನಗಳು ಕುಂಠಿತವಾಗಿ ಆಹಾರಕ್ಕೆ ಹಾಹಾಕಾರ ಉಂಟಾಗುತ್ತದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಜಿಲ್ಲಾ ಕಾರ್ಯಾಧ್ಯಕ್ಷ ಕಿರಗನೂರು ಶಂಕರ್ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತ ಹಾಗೂ ಸಾಮಾನ್ಯ ನಾಗರೀಕರನ್ನು ಕಡೆಗಣಿಸಿ ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆಗಳನ್ನು ಏರಿಕೆ ಮಾಡಿವೆ. ಆದರೆ, ರೈತರ ಸಮಸ್ಯೆಗಳಿಗೆ ಪರಿಹಾರ ನೀಡುತ್ತಿಲ್ಲ ಎಂದು ಕಿಡಿಕಾರಿದರು.
ತಾಲೂಕು ಅಧ್ಯಕ್ಷ ಕುರುಬೂರು ಸಿದ್ದೇಶ್ ಮಾತನಾಡಿ, ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಎಲ್ಲ ಪಕ್ಷಗಳು ತಮ್ಮ ಅಧಿಕಾರದ ಪಿಪಾಸೆಗೆ ರೈತರ ಹಿತವನ್ನು ಕಾಯದೆ ತಮ್ಮ ಗಳಿಕೆಗೆ ಮಾತ್ರ ಆದ್ಯತೆ ನೀಡುತ್ತಿದ್ದಾರೆ. ಹಾಗಾಗಿ ಸಂಕಷ್ಟದಲ್ಲಿರುವ ರೈತರನ್ನು ಮೇಲೆತ್ತಲು ಪರಿಣಾಮಕಾರಿ ಯೋಜನೆಗಳನ್ನು ಜಾರಿಗೆ ತರಬೇಕು. ಬೆಲೆಯೇರಿಕೆಯನ್ನು ತಡೆಗಟ್ಟಬೇಕು ಎಂದು ಅಗ್ರಹಿಸಿದರು.
ಪ್ರತಿಭಟನೆಯಲ್ಲಿ ತಾಲೂಕು ಪ್ರಧಾನ ಕಾರ್ಯದರ್ಶಿ ಕಿರಗಸೂರು ಪ್ರಸಾದ್ ನಾಯಕ್, ಸಂಘಟನಾ ಕಾರ್ಯದರ್ಶಿ ಕುರುಬೂರು ಪ್ರದೀಪ್, ಕುರುಬೂರು ಗೌರಿ ಶಂಕರ, ಬಿ.ಪಿ.ಪರಶಿವ ಮೂರ್ತಿ, ಟೌನ್ ಅಧ್ಯಕ್ಷ ಅಪ್ಪಣ್ಣ, ಕರುವಟಿ ಉಮೇಶ್, ವಾಚ್ ಕುಮಾರ್, ತರಕಾರಿ ನಿಂಗರಾಜು, ರಾಜೇಂದ್ರ, ರವಿಕುಮಾರ್, ಗುರುಸ್ವಾಮಿ ಉಮೇಶ್, ನಂದೀಶ್, ಸಿದ್ದರರಾಜು, ನೀಲಸೋಗೆ ಉಮೇಶ್, ಮಹೇಶ್, ವೀರೇಶ್ ಮುಂತಾದವರು ಇದ್ದರು.
Related









