ವಿದೇಶದಲ್ಲಿ ಕನ್ನಡ ಕಲಿಕೆ: ‘ಕರ್ನಾಟಕ ಸಂಘ ಕತಾರ್’ನ ಅಧ್ಯಕ್ಷ ಸುಬ್ರಮಣ್ಯ ಅಭಯ
ಕತಾರ್ನ ಸ್ಥಳೀಯ ಸಮುದಾಯದಲ್ಲಿ ಭಾರತೀಯ ಸಂಸ್ಕೃತಿ ಪ್ರಚಾರಕ್ಕೆ ಆದ್ಯತೆ ನೀಡಲು ಭಾರತದ ರಾಯಭಾರಿ ವಿಪುಲ್ ಕರೆ ನೀಡಿದರು

ದೋಹಾ: ಕತಾರ್ನ ಭಾರತೀಯ ಸಾಂಸ್ಕೃತಿಕ ಕೇಂದ್ರದ (ಐಸಿಸಿ) ಅಂಗಸಂಸ್ಥೆಯಾದ ‘ಕರ್ನಾಟಕ ಸಂಘ ಕತಾರ್’ (ಕೆಎಸ್ಕ್ಯು) ಸಂಸ್ಥೆಯ 2026-28ನೇ ಸಾಲಿನ ನೂತನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಸುಬ್ರಮಣ್ಯ ಹೆಬ್ಬಾಗಿಲು ಅವರ ನೇತೃತ್ವದಲ್ಲಿ ಇತ್ತೀಚೆಗೆ ಭಾರತದ ರಾಯಭಾರಿ ವಿಪುಲ್ ಅವರನ್ನು ರಾಯಭಾರ ಕಚೇರಿಯಲ್ಲಿ ಭೇಟಿ ಮಾಡಿತ್ತು.
ಈ ವೇಳೆ ಸಮಿತಿಯ ನೂತನ ಪದಾಧಿಕಾರಿಗಳು ಭೇಟಿ ನೀಡಿದ್ದು, ಈ ಉನ್ನತ ಮಟ್ಟದ ಭೇಟಿ ವೇಳೆ ನಡೆದ ಸಭೆಯು ಎರಡೂ ಕಡೆಯಿಂದ ಅತ್ಯಂತ ಸಕಾರಾತ್ಮಕ ಸ್ಪಂದನೆಯೊಂದಿಗೆ ಪೂರ್ಣಗೊಂದೆ. ಇದು ಭಾರಿ ಖುಷಿ ತಂದಿದೆ ಎಂದು ಭಾರತದ ರಾಯಭಾರಿ ವಿಪುಲ್ ಹೇಳಿದ್ದಾರೆ.
ನಿಯೋಗವನ್ನು ಅತ್ಯಂತ ಆತ್ಮೀಯವಾಗಿ ಸ್ವಾಗತಿಸಿದ ರಾಯಭಾರಿ ವಿಪುಲ್ ಅವರು, ಸಾಂಸ್ಕೃತಿಕ ಬೇರುಗಳನ್ನು ಗಟ್ಟಿಗೊಳಿಸುವ ವಿಷಯಕ್ಕೆ ಒತ್ತು ನೀಡಿದರು, ಕತಾರ್ನಲ್ಲಿ ವಾಸಿಸುತ್ತಿರುವ ಅನಿವಾಸಿ ಕನ್ನಡಿಗರಲ್ಲಿ ಕನ್ನಡ ಭಾಷೆಯ ಬೆಳವಣಿಗೆ ಹಾಗೂ ಪ್ರಚಾರಕ್ಕಾಗಿ ಸಮಿತಿಯು ಸಕ್ರಿಯವಾಗಿ ಮತ್ತು ಮುಂಚೂಣಿಯಲ್ಲಿ ನಿಂತು ಶ್ರಮಿಸಬೇಕು ಎಂದು ಸಲಹೆ ನೀಡಿದರು.
ಇನ್ನು ಕತಾರ್ನಲ್ಲಿ ಬೆಳೆಯುತ್ತಿರುವ ಮುಂದಿನ ಪೀಳಿಗೆಯ ಮಕ್ಕಳಿಗೆ ಕನ್ನಡ ಕಲಿಕೆಯನ್ನು ಉತ್ತೇಜಿಸುವುದು ಇಂದಿನ ಅಗತ್ಯವಾಗಿದೆ ಎಂದ ಅವರು, ಇದಕ್ಕಾಗಿ ಅಗತ್ಯವಿರುವ ವಿಶೇಷ ನೆರವು, ಶೈಕ್ಷಣಿಕ ಪ್ರೋತ್ಸಾಹ ಹಾಗೂ ಸಾಂಸ್ಥಿಕ ಬೆಂಬಲವನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರದ ಗಮನ ಸೆಳೆದು, ಅಲ್ಲಿಂದ ಸೂಕ್ತ ಪ್ರೋತ್ಸಾಹ ಹಾಗೂ ವಿಶೇಷ ಪರಿಗಣನೆಯನ್ನು ಪಡೆದುಕೊಳ್ಳುವಂತೆ ವಿಪುಲ್ ಸಮಿತಿಗೆ ಮಾರ್ಗದರ್ಶನ ನೀಡಿದರು.
ಇದರೊಂದಿಗೆ ಅತ್ಯಂತ ಪ್ರಮುಖವಾಗಿ, ಸ್ಥಳೀಯ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಬೇಕಿದೆ. ಕತಾರ್ನ ಸ್ಥಳೀಯ ಸಮುದಾಯದ ನಡುವೆ ಭಾರತೀಯ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆಯನ್ನು ಸಕ್ರಿಯವಾಗಿ ಪರಿಚಯಿಸಲು ಹಾಗೂ ಪ್ರಚಾರ ಪಡಿಸಲು ಶ್ರಮಿಸಬೇಕು ಎಂದರು.
ಇಂತಹ ಸಾಂಸ್ಕೃತಿಕ ವಿನಿಮಯಗಳು ಉಭಯ ದೇಶಗಳ ನಡುವಿನ ಪರಸ್ಪರ ಗೌರವ ಹಾಗೂ ಸುದೀರ್ಘ ಸ್ನೇಹ ಸಂಬಂಧವನ್ನು ಮತ್ತಷ್ಟು ಆಳವಾಗಿಸಲು ಸಹಕಾರಿಯಾಗಲಿವೆ ಎಂಬ ಆಶಯ ವ್ಯಕ್ತಪಡಿಸಿದರು.
ತಮಗೆ ಅಮೂಲ್ಯವಾದ ಸಲಹೆ ನೀಡಿದ್ದಕ್ಕೆ ಕರ್ನಾಟಕ ಸಂಘದ ಪದಾಧಿಕಾರಿಗಳು ವಿಪುಲ್ ಅವರಿಗೆ ಧನ್ಯವಾದ ಅರ್ಪಿಸಿದರು. ಇದೇ ಸಂದರ್ಭದಲ್ಲಿ ಅಧ್ಯಕ್ಷ ಸುಬ್ರಮಣ್ಯ ಹೆಬ್ಬಾಗಿಲು ಹಾಗೂ ಸಮಿತಿಯ ಸದಸ್ಯರು ರಾಯಭಾರಿ ಅವರಿಗೆ ಸಾಂಪ್ರದಾಯಿಕ ಶಲ್ಯ ಹೊದಿಸಿ, ನೆನಪಿನ ಕಾಣಿಕೆ ನೀಡಿ ಗೌರವಿಸಿದರು.
Related









