ಬೆಂಗಳೂರು: ಸರ್ಕಾರ ಹಠಮಾರಿ ಧೋರಣೆ ಬಿಟ್ಟು ಸಾರಿಗೆ ನೌಕರರ ಬೇಡಿಕೆಗಳು ನ್ಯಾಯಯುತವಾಗಿದ್ದು ಅವುಗಳನ್ನು ಈಡೇರಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಇಂದು ಮೈಸೂರಿನಲ್ಲಿ ಸಾರಿಗೆ ನೌಕರರು ಇದೇ ಏಪ್ರಿಲ್ 7ರಿಂದ ನಡೆಸಲು ಹೊರಟಿರುವ ಮುಷ್ಕರ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರಿಗೆ ನೌಕರರು ವೇತನವನ್ನು ಇತರ ನೌಕರರಿಗಿಂತ ಹೆಚ್ಚಾಗಿ ಮಾಡಿ ಎಂದು ಹೇಳುತ್ತಿಲ್ಲ. ಅವರಿಗೆ ಸರಿ ಸಮಾನವಾದ ವೇತನ ಕೊಡಿ ಎಂದು ಕೇಳುತ್ತಿದ್ದಾರೆ. ಆ ಬೇಡಿಯನ್ನು ಈಡೇರಿಸಲು ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.
ಇನ್ನು ಮುಷ್ಕರ ಹತ್ತಿಕ್ಕುವ ನಿಟ್ಟಿನಲ್ಲಿ ಎಸ್ಮಾ ಜಾರಿ ಮಾಡುವ ಎಚ್ಚರಿಕೆ ನೀಡಿದರೆ ಅದು ಬಹಳ ನಡೆಯುವುದಿಲ್ಲ. ಇಂಥ ಧೋರಣೆಗಳನ್ನು ಬಿಟ್ಟು ಆ ಸಂಘಟನೆಗಳೊಂದಿಗೆ ಮಾತನಾಡಿ ಅವರ ಬೇಡಿಕೆ ಈಡೇರಿಸಿ ಎಂದು ತಿಳಿಸಿದರು.
ರಾಜ್ಯದಲ್ಲಿ ಬಿಟಿಷ್ ತೊಘಲಕ್ ಸರ್ಕಾರವಿದೆಯೋ ಅಥವಾ ಬಿಜೆಪಿ ಸರ್ಕಾರ ಇದೆಯೋ ಎಂದು ಸರ್ಕಾರದ ನಡೆಯನ್ನು ಖಂಡಿಸಿದ ಕುಮಾರಸ್ವಾಮಿ ಅವರು, ಡೀಸೆಲ್ ಬೆಲೆ ಏರಿಕೆ ಎಂದು ಪ್ರಯಾಣಿಕರ ಮೇಲೆ ಬಸ್ ಟಿಕೆಟ್ ದರ ಹೆಚ್ಚಿಸುತ್ತೀರಿ ಡೀಸೆಲ್ ಬೆಲೆ ಇಳಿದಾಗ ಕಡಿಮೆ ಮಾಡಿದ್ದೀರಾ ಎಂದು ಪ್ರಶ್ನಿಸಿದ್ದು, ಮೊದಲು ಸಾರಿಗೆ ನಿಗಮದಲ್ಲಿ ಸೋರಿಕೆಯನ್ನು ತಡೆಗಟ್ಟಿ ನೌಕರರ ಬೇಡಿಕೆ ಈಡೇರಿಸುವತ್ತ ಗಮನ ಹರಿಸಿ ಎಂದು ಸಲಹೆ ನೀಡಿದರು.
ಸಾರಿಗೆ ನೌಕರರನ್ನು 6ನೇ ವೇತನ ಆಯೋಗದಡಿ ತರಬೇಕು ಎನ್ನುವುದು ಪ್ರಮುಖ ಬೇಡಿಕೆ ಆಗಿದೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ. ಸಾರಿಗೆ ಸಚಿವರು ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಯಾವುದೇ ತೀರ್ಮಾನ ಮಾಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಏ.1ರಂದು ನಮ್ಮ ಎಲ್ಲಾ ಸಾರಿಗೆ ನೌಕರರ ತೋಳಿಗೆ ಕಪ್ಪುಪಟ್ಟಿ ಧರಿಸಿ ಸೇವೆ ಹಾಜರಾಗಿದ್ದರು.
ಅದರಂತೆ ಏ.2 ರಸ್ತೆ ಮತ್ತು ಕೆಲವು ಬಸ್ ನಿಲ್ದಾಣಗಳಲ್ಲಿ ವಡೆ, ಬೋಂಡ ಮಾಡುವ ಮೂಲಕ ಎರಡನೇ ದಿನವೂ ಪ್ರತಿಭಟನಾ ಎಚ್ಚರಿಕೆ ನೀಡಿದ್ದಾರೆ.
ಏ.3ರಂದು ಸಾರ್ವಜನಿಕರಿಗೆ ಮುಷ್ಕರದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಭಿತ್ತಿಪತ್ರ ವಿತರಿಸಿದ್ದಾರೆ. ಇನ್ನು ಇಂದು (ಏ.4) ಸಾಮಾಜಿಕ ಜಾಲತಾಣಗಲ್ಲಿ ಪ್ರತಿಭಟನಾ ಹೋರಾಟ ಮಾಡುತ್ತಿದ್ದಾರೆ.
ಹಾಗೆಯೇ ಏ.7ರಿಂದ ಬಸ್ಬಂದ್ ಮಾಡಿ ಸತ್ಯಾಗ್ರಹ ಮಾಡುವ ಮೂಲಕ ನಮ್ಮ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ನೌಕರರು ಹೇಳಿದ್ದಾರೆ.