ವಿಜಯಪಥ ಸಮಗ್ರ ಸುದ್ದಿ
ನ್ಯೂಡೆಲ್ಲಿ: ಕರ್ನಾಟಕದವರಾದ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಮೋಹನ್ ಎಂ. ಶಾಂತನಗೌಡರ್ (61) ಶನಿವಾರ ರಾತ್ರಿ ನಿಧನ ಹೊಂದಿದ್ದಾರೆ.
ಕೆಲವು ದಿನಗಳಿಂದ ಕ್ಯಾನ್ಸರ್ನಿಂದ ಬಳಲುತ್ತಿದ್ದ ಮೋಹನ್ ಮಲ್ಲಿಕಾರ್ಜುನಗೌಡ ಶಾಂತನಗೌಡರ್ ಅವರನ್ನು ಗುರುಗ್ರಾಮದ ಮೇದಾಂತ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಶನಿವಾರ ರಾತ್ರಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. 2023ರ ಮೇ 4ರ ತನಕ ಅವರ ಸೇವಾವಧಿ ಇತ್ತು.
ನ್ಯಾಯಮೂರ್ತಿ ಮೋಹನ್ ಎಂ. ಶಾಂತನಗೌಡರ್ ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಚಿಕ್ಕೇರೂರು ಗ್ರಾಮದವರು. ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದಿದ್ದರು.
ಮೇ 5- 1958ರಂದು ಜನಿಸಿದ್ದ ನ್ಯಾ. ಮೋಹನ್ ಎಂ. ಶಾಂತನಗೌಡರ್ ಸೆಪ್ಟೆಂಬರ್ 1980ರಲ್ಲಿ ವಕೀಲರಾಗಿ ಕಾರ್ಯ ಆರಂಭಿಸಿದ್ದರು. ಬೆಂಗಳೂರಿಗೆ ಆಗಮಿಸುವ ಮೊದಲು ಒಂದು ವರ್ಷ ಧಾರವಾಡದಲ್ಲಿ ಅಭ್ಯಾಸ ಮಾಡಿದ್ದರು.
2003ರಲ್ಲಿ ರಾಜ್ಯ ಹೈಕೋರ್ಟ್ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದರು. 2004ರಲ್ಲಿ ನ್ಯಾಯಮೂರ್ತಿಯಾಗಿ ಸೇವೆ ಆರಂಭಿಸಿದ್ದರು. 2016ರಿಂದ ಒಂದು ವರ್ಷ ಕೇರಳ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದರು.
2017ರಲ್ಲಿ ನ್ಯಾ. ಮೋಹನ್ ಎಂ. ಶಾಂತನಗೌಡರ್ ಅವರು ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದರು.
ನ್ಯಾ. ಮೋಹನ್ ಎಂ. ಶಾಂತನಗೌಡರ್ ಅವರ ನಿಧನಕ್ಕೆ ರಾಜ್ಯದ ಹಲವು ಗಣ್ಯರು ಮತ್ತು ಅವರು ಹುಟ್ಟಿ ಬೆಳೆದ ಗ್ರಾಮದ ಜನರು ಸಂತಾಪ ಸೂಚಿಸಿದ್ದಾರೆ. ಅವರ ಕುಟುಂಬಕ್ಕೆ ಅಗಲಿಕೆಯ ಶಕ್ತಿಯನ್ನು ದೇವರು ನೀಡಲಿ ಎಂದು ಪ್ರಾರ್ಥಿಸಿದ್ದಾರೆ.