ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಕೊರೊನಾ ತಡೆಗಟ್ಟಲು ರಾಜ್ಯ ಸರ್ಕಾರವು ವಾರಾಂತ್ಯದ ಲಾಕ್ ಡೌನ್ ವಿಧಿಸಿ ಬಡಜನತೆಗೆ ಆಹಾರದ ವಿಚಾರದಲ್ಲಿ ತಾತ್ಸಾರವನ್ನು ಮಾಡುತ್ತಿದೆ. ಅದನ್ನು ಬಿಟ್ಟು ನಗರದಲ್ಲಿ ಮುಚ್ಚಿರುವ ಇಂದಿರಾ ಕ್ಯಾಂಟೀನ್ ಗಳನ್ನು ಕೂಡಲೇ ತೆರೆದು ಬಡ ಜನತೆಗೆ ಗುಣಮಟ್ಟದ ಆಹಾರ ಒದಗಿಸಿ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ. ಸದಂ ಒತ್ತಾಯಿಸಿದ್ದಾರೆ.
ಇಂದು ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಾದ್ಯಂತ ಇರುವ ಇಂದಿರಾ ಕ್ಯಾಂಟೀನ್ ಗಳನ್ನು ಸಂಪೂರ್ಣ ಮುಚ್ಚಿ ಪ್ರತಿದಿವಸವೂ ಊಟಕ್ಕಾಗಿ ಅದನ್ನೇ ಅವಲಂಬಿಸಿದ್ದ ಬಡಜನತೆಯ ಹೊಟ್ಟೆಪಾಡಿಗೆ ಸಂಚಕಾರವನ್ನು ತರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಸರ್ಕಾರವು ಮೊದಲಿನಿಂದಲೂ ವ್ಯವಸ್ಥಿತವಾಗಿ ಇಂದಿರಾ ಕ್ಯಾಂಟೀನ್ ಗಳನ್ನು ಮುಚ್ಚಲು ಹಲವಾರು ಹುನ್ನಾರಗಳನ್ನು ನಡೆಸಿರುವುದು ಜನತೆಗೆ ಗೊತ್ತಿರುವ ವಿಷಯವೇ ಆಗಿದೆ. ಲಾಕ್ ಡೌನ್ ನಂತಹ ಕಠಿಣ ಪರಿಸ್ಥಿತಿಯಲ್ಲಿ ಬಡಜನತೆಯು ಒಪ್ಪೊತ್ತಿನ ಊಟಕ್ಕೆ ಅಲೆದಾಡುವ ಪರಿಸ್ಥಿತಿ ಸೃಷ್ಟಿಯಾಗಿದೆ. ರಾಜ್ಯ ಸರ್ಕಾರಕ್ಕೆ ಅದರಲ್ಲೂ ಬಿಬಿಎಂಪಿಗೆ ಕಿಂಚಿತ್ತಾದರೂ ಮಾನವೀಯ ದೃಷ್ಟಿ ಇದ್ದಲ್ಲಿ ನಾಳೆಯಿಂದಲೇ ಎಲ್ಲಾ ಇಂದಿರಾ ಕ್ಯಾಂಟೀನ್ ಗಳನ್ನು ತೆಗೆದು ಬಡ ಜನತೆಗೆ ಉತ್ತಮ ಗುಣಮಟ್ಟದ ಆಹಾರ ವಿತರಿಸಲು ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು.
ಈ ಕುರಿತು ಆಮ್ ಆದ್ಮಿ ಪಕ್ಷದ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ಅವರು ಸಹ ತಮ್ಮ ಸಾಮಾಜಿಕ ಜಾಲತಾಣದ ಪುಟದಲ್ಲಿ ಕಾಳಜಿ ವ್ಯಕ್ತಪಡಿಸಿದ್ದಾರೆ.