ಬೆಂಗಳೂರು: ಖಾಸಗಿ ವಾಹಿನಿಯೊಂದರಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆಯಲಿ ಧಾರಾವಾಹಿ ನಾಯಕ ಮತ್ತು ಖಳ ನಟನ ಪಾತ್ರದಲ್ಲಿ ಮಿಂಚುತ್ತಿದ್ದ ಅನಿರುದ್ಧ ಅವರನ್ನು ಧಾರಾವಾಹಿ ಕೈ ಬಿಡಲಾಗಿದೆ.
ಈ ಕುರಿತು ಅನಿರುದ್ಧ ಅವರಿಗೆ ನಿರ್ಮಾಪಕರಾದ ಆರೂರು ಜಗದೀಶ್ ಮತ್ತು ಸ್ಮಿತಾ ಶೆಟ್ಟಿ ಜಂಟಿಯಾಗಿ ಇ-ಮೇಲ್ ಕಳುಹಿಸಿದ್ದಾರೆ. ಅಲ್ಲದೆ ಅವರನ್ನು ಕೈ ಬಿಟ್ಟಿರುವ ಬಗ್ಗೆ ಸುದ್ದಿಗಾರರಿಗೂ ಆರೂರು ಜಗದೀಶ್ ಖಚಿತ ಪಡಿಸಿದ್ದಾರೆ. ಜತೆಗೆ ಅನಿರುದ್ಧ ವಿರುದ್ಧ ಆರೋಪಗಳ ಸುರಿಮಳೆಯನ್ನೇ ಗೈದಿದ್ದಾರೆ.
ಸೀರಿಯಲ್ ಆಂಭಗೊಂಡ ಎರಡು ತಿಂಗಳ ಬಳಿಕ ಅನಿರುದ್ಧ ಅಸಹಕಾರ ತೋರುತ್ತಾ ಬಂದಿದ್ದಾರೆ. ಆದರೂ ಇಲ್ಲಿಯವರೆ ನಾವು ಸಹಿಸಿಕೊಂಡು ಬಂದ್ದೇವೆ ಇನ್ನು ಮುಂದೆ ಅದು ಆಗದು ಎಂದು ನಿರ್ಮಾಪಕರು ಆರೋಪಿಸಿದ್ದಾರೆ.
ಇನ್ನು ಬೀದಿ ಬದಿ ಕೂತು ತಿನ್ನುತ್ತಿದ್ದ ಅನಿರುದ್ಧ ಅವರು, ಇದೀಗ ಕ್ಯಾರಾವಾನ್ ಇಲ್ಲದೇ ಶೂಟಿಂಗ್ಗೆ ಬರುವುದಿಲ್ಲ ಎನ್ನುವಲ್ಲಿಗೆ ಬೆಳೆದಿದ್ದಾರೆ. ಹಾಗಾಗಿ ಅವರಿಂದ ಸಾಕಷ್ಟು ಹಣವನ್ನು ಕಳೆದುಕೊಂಡಿರುವುದಾಗಿ ಜಗದೀಶ್ ಆರೋಪ ಮಾಡಿದ್ದಾರೆ.
ಅನಿರುದ್ಧ ವಿರುದ್ಧ ಜಗದೀಶ್ ಮಾಡುತ್ತಿರುವ ಆರೋಪಗಳಿವು: ಡೈಲಾಗ್ ಸ್ಕ್ರಿಪ್ ಸಲುವಾಗಿ ಅನೇಕ ಬಾರಿ ಜಗಳ ಮಾಡಿದ್ದಾರೆ. ಸೀನ್ ಪೇಪರ್ ತಡವಾಗಿ ಬಂದರೆ ಶೂಟಿಂಗ್ ಮಾಡುವುದಿಲ್ಲ ಎಂದು ಎದ್ದೇ ಹೋಗುತ್ತಿದ್ದರು.
ಅವರು ಧಾರಾವಾಹಿ ಪಾತ್ರ ಒಪ್ಪಿಕೊಂಡಾಗ ಆರ್ಯವರ್ಧನ್ ಪಾತ್ರ ನೆಗಟಿವ್ ಆಗಿತ್ತು. ಇವರು ಜನಪ್ರಿಯತೆ ಜಾಸ್ತಿ ಆಗುತ್ತಿದ್ದಂತೆಯೇ ಆ ಪಾತ್ರವನ್ನು ಬದಲಿಸಲು ಪಟ್ಟು ಹಿಡಿದರು. ಪಾತ್ರವನ್ನು ಪಾಸಿಟಿವ್ ರೀತಿಯಲ್ಲಿ ಕಥೆ ಮಾಡಿಸಿದರು. ಕಥೆಯೇ ಬಿದ್ದು ಹೋಯಿತು.
ಧಾರಾವಾಹಿ ನಡೆಯುತ್ತಿರುವುದೇ ನನ್ನಿಂದ ಎನ್ನುವಂತೆ ದುರಹಂಕಾರ ತೋರಿಸಿದರು. ಧಾರಾವಾಹಿ ಬಗ್ಗೆ ನೆಗೆಟಿವ್ ಪ್ರಚಾರ ಮಾಡುತ್ತಾ ಬಂದರು. ಸಾಮಾನ್ಯವಾಗಿ ಧಾರಾವಾಹಿಗಳಲ್ಲಿ ಕ್ಯಾರವಾನ್ ಬಳಸುವುದಿಲ್ಲ. ಇವರಿಗಾಗಿ ಕ್ಯಾರವಾನ್ ತರಿಸಲಾಗುತ್ತಿತ್ತು. ಕ್ಯಾರವಾನ್ ಗಾಗಿ ಗಲಾಟೆ ಮಾಡಿದ್ದರು.
ಬೆನ್ಜ್ ಕಾರು, ಹೆಲಿಕಾಪ್ಟರ್ ಹೀಗೆ ದುಬಾರಿ ಖರ್ಚು ಮಾಡಿ ಧಾರಾವಾಹಿ ಮಾಡುತ್ತಿದ್ದರೂ, ಅವರು ಅದಕ್ಕೆ ಕ್ಯಾರೆ ಅನ್ನುತ್ತಿರಲಿಲ್ಲ. ಹಾಗಾಗಿ ಇವರಿಂದಾಗಿಯೇ ಸಾಕಷ್ಟು ಲಾಸ್ ಆಗಿದೆ.
ಸಣ್ಣದೊಂದು ತಪ್ಪಾದರೂ, ಸೆಟ್ ನಲ್ಲಿ ಜೋರಾಗಿ ಕೂಗುತ್ತಿದ್ದರು. ಬೈಯುತ್ತಿದ್ದರು. ಇವರ ಸಲುವಾಗಿ ಅನೇಕರು ಕೆಲಸ ಬಿಟ್ಟು ಹೋದರು. ಕೆಲವರನ್ನು ನಾವೇ ಕಳುಹಿಸಿ ಕೊಡಬೇಕಾಯಿತು. ಪ್ರತಿ ಶಾಟ್ ತೆಗೆದಾಗಲೂ ಮಾನೆಟರ್ ಹತ್ತಿರ ಬಂದು ನೋಡುತ್ತಿದ್ದರು. ಮತ್ತೊಂದು ಸಲ ನಟಿಸ್ತೀನಿ ಅನ್ನುತ್ತಿದ್ದರು. ಹೀಗಾಗಿ ಕಾಲಹರಣವಾಗುತ್ತಿತ್ತು.
ಸ್ಟಾರ್ ಹೋಟೆಲ್ ನಿಂದ ಊಟ ಬರಬೇಕು ಎಂದು ಗಲಾಟೆ ಮಾಡಿದರು. ಸ್ಟಾರ್ ಹೋಟೆಲ್ ನಲ್ಲಿ ಅವರ ಬಿಲ್ ಎರಡು ಲಕ್ಷ ಆಗಿತ್ತು. ಇನ್ನು ಟೀಮ್ ನಲ್ಲಿ ಅವರ ಬಗ್ಗೆ ಗಾಸಿಪ್ ಮಾಡ್ತಾರೆ ಅಂತ ಕೆಲ ದಿನಗಳ ಕಾಲ ಶೂಟಿಂಗ್ಗೆ ಬರಲೇ ಇಲ್ಲ. ಮನೆಗೆ ಹೋಗಿ ಮನವಿ ಮಾಡಿಕೊಂಡು ಕರೆದುಕೊಂಡು ಬಂದೆವು. ಒಂಬತ್ತು ಗಂಟೆಗೆ ಫಸ್ಟ್ ಶಾಟ್ ಅಂದರೆ, ಬರುತ್ತಿರಲಿಲ್ಲ. ತಿಂಡಿ ತಿನ್ನುತ್ತಾ, ಸಹ ಕಲಾವಿದರನ್ನೂ ಕೂರಿಸಿಕೊಂಡು ಬೇಕು ಅಂತನೇ ತಡ ಮಾಡುತ್ತಿದ್ದರು.
ಜೊತೆ ಜೊತೆಯಲಿ ಧಾರಾವಾಹಿಯಿಂದ ನಟ ಅನಿರುದ್ದ ಅವರನ್ನು ಆಚೆ ಹಾಕುತ್ತಿದ್ದಂತೆಯೇ ನಿರ್ಮಾಪಕ ಆರೂರು ಜಗದೀಶ್, ನಟನ ಮೇಲೆ ಸಾಕಷ್ಟು ಆರೋಪಗಳನ್ನು ಮಾಡಿದ್ದಾರೆ. ಈ ಎಲ್ಲ ಆರೋಪಗಳಿಗೆ ಉತ್ತರ ಕೊಟ್ಟಿರುವ ಅನಿರುದ್ಧ, ನಿರ್ಮಾಪಕರು ಮಾಡಿರುವ ಎಲ್ಲ ಆರೋಪಗಳು ನಿಜ ಎಂದು ಅವರು ಮಕ್ಕಳ ಮೇಲೆ ಪ್ರಮಾಣ ಮಾಡಿ ಹೇಳಲಿ, ನಾನೂ ಮಾಡುತ್ತೇನೆ ಎಂದಿದ್ದಾರೆ.
ಈ ಕುರಿತು ಮಾತನಾಡಿರುವ ಅನಿರುದ್ಧ, ಅವರ ಎಲ್ಲ ಆರೋಪಗಳೂ ನಿರಾಧಾರ ಎಂದು ಸಾರಾ ಸಗಟಾಗಿ ತಳ್ಳಿ ಹಾಕಿದ್ದಾರೆ. ಜೊತೆ ಜೊತೆಯಲ್ಲಿ ಧಾರಾವಾಹಿಯಿಂದ ನಾನು ಬಹಳಷ್ಟು ಪಡೆದುಕೊಂಡಿದ್ದೇನೆ. ನಾನು ಪ್ರಶಸ್ತಿಗಳನ್ನು ಪಡೆಯುವಾಗಲೂ ಈ ಮಾತು ಹೇಳಿದ್ದಾನೆ. ಯಾವತ್ತೂ ನಾನು ನನ್ನಿಂದ ಧಾರಾವಾಹಿ ಎಂದು ಹೇಳಿಲ್ಲ ಎಂದು ತಿಳಿಸಿದರು.
ನನಗೆ ಬಹಳಷ್ಟು ದುರಹಂಕಾರ ಬಂದಿದೆ ಅನ್ನೊದು ಸುಳ್ಳು. ನಾನು ಯಾವತ್ತೂ ಹಾಗೆ ನಡೆದುಕೊಂಡಿಲ್ಲ. ಧಾರಾವಾಹಿಗಾಗಿ ನಾನು 12 ಕೆಜಿ ತೂಕ ಕಡಿಮೆ ಮಾಡಿದ್ದೇನೆ. ಬಹಳಷ್ಟು ಶ್ರಮ ಹಾಕಿದ್ದೀನಿ. ಅಲ್ಲದೇ, ಕ್ಯಾರವ್ಯಾನ್ ಕೇಳಿಲ್ಲ. ನಾನು ರಂಗಭೂಮಿ ಕಲಾವಿದ. ಹಾಗೆ ಕೇಳುವುದಕ್ಕೆ ಸಾಧ್ಯವೇ ಇಲ್ಲ ಎಂದಿದ್ದಾರೆ.
ಸೀರಿಯಲ್ ಒಪ್ಪಿಕೊಳ್ಳುವ ಮೊದಲ ದಿನವೇ ಸೀನ್ ಪೇಪರ್ ಬಗ್ಗೆ ಮಾತನಾಡಿದ್ದಿನಿ. ಹಿಂದಿನ ದಿನ ಸೀನ್ ಪೇಪರ್ ಕೊಡ್ತಿನಿ ಅಂತ ಅವರು ಒಪ್ಪಿಕೊಂಡಿದ್ದರು. ಅದನ್ನು ಕೇಳಿದ್ದೇನೆ. ಅದನ್ನೇ ಮನಸ್ತಾಪ ಅಂದುಕೊಂಡರೆ ಹೇಗೆ ಎನ್ನುತ್ತಾರೆ ಅನಿರುದ್ಧ.
ನಾನು ಅಪ್ಪಾಜಿ (ಡಾ.ವಿಷ್ಣುವರ್ಧನ್) ದಾರಿಯಲ್ಲಿಯೇ ಹೋಗ್ತಿದ್ದೀನಿ. ಕರ್ನಾಟಕ ಟೆಲಿವಿಷನ್ ಅಧ್ಯಕ್ಷರ ಜೊತೆ ಮಾತನಾಡಿದ್ದೀನಿ. ಅವರು ಕೈ ಕುಲುಕುವ ಕೆಲಸ ಮಾಡುತ್ತೇವೆ ಅಂದರು. ನಾನೂ ಕೂಡ ಅದನ್ನೇ ಬಯಸಿ ನಿರ್ಮಾಪಕ ಜಗದೀಶ್ ಹಾಗೂ ಚಾನೆಲ್ ಅವರಿಗೆ ಒಂದಷ್ಟು ಮೆಸೇಜ್ ಮಾಡಿದ್ದೀನಿ. ಅವರ ಕಡೆಯಿಂದ ರಿಪ್ಲೈ ಇಲ್ಲ.
ಆದರೂ ಅವರು ನಾಳೆ ಬನ್ನಿ ಅಂದ್ರೆ ಹೋಗ್ತೀನಿ. ಆದ್ರೆ ಸೀನ್ ಪೇಪರ್ ನಲ್ಲಿ ಡೈಲಾಗ್ ಸಂಭಾಷಣೆ ಸರಿಯಿಲ್ಲ ಅಂದ್ರೆ ನಾನು ಮತ್ತೆ ಪ್ರಶ್ನೆ ಕೇಳುತ್ತೇನೆ ಎಂದೂ ಅನಿರುದ್ಧ ತಿಳಿಸಿದ್ದಾರೆ.
ಇನ್ನು ದೇವಸ್ಥಾನದ ಸೀನ್ ಶೂಟಿಂಗ್ ನಲ್ಲಿ ಎರಡು ದಿನ ಕೆಲಸ ಮಾಡಿದ್ದೀನಿ. ಸುತ್ತ ಮುತ್ತ ಮನೆಗಳಿರಲಿಲ್ಲ ಹಾಗಾಗಿ ಕ್ಯಾರವ್ಯಾನ್ ಕೇಳಿದೆ. ಬಯಲಿನಲ್ಲಿ ಬಟ್ಟೆ ಬದಲಾಯಿಸಲು ಸಾಧ್ಯವಿಲ್ಲ. ನನಗೆ ಓಕೆ ಆದ್ರೆ ಹೆಂಗಸರು ಏನು ಮಾಡ್ಬೇಕು. ಅಭಿಮಾನಿಗಳ ಮನೆಯಲ್ಲಿ ಬಾತ್ ರೂಮ್ ಉಪಯೋಗಿಸಲು ಕಷ್ಟ ಆಗುತ್ತೆ. ಹಾಗಾಗಿ ಕ್ಯಾರವ್ಯಾನ್ ಕೇಳಿದ್ದೆ. ದಿನವೂ ಕೇಳಲಿಲ್ಲ ಎಂದು ಹೇಳಿದರು.