ಅಥಣಿ: ಜಮೀನಿನ ಸಂಬಂಧ ಒಬ್ಬ ವಿಧವೆ ಹಾಗೂ ಆಕೆಯ ಮಗಳನ್ನು ಸಂಬಂಧಿಕರೇ ಅರೆಬೆತ್ತಲೆಗೊಳಿಸಿ ಥಳಿಸಿ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಈ ಕುರಿತು ಹಲ್ಲೆಕೋರರ ವಿರುದ್ದ ದೂರು ನೀಡಿದ್ದರೂ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳದೆ ಹಲ್ಲೆಕೋರರಿಗೆ ಬೆಂಬಲವಾಗಿ ನಿಂತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಘಟನಟ್ಟಿ ಗ್ರಾಮದ ನಿವಾಸಿ ವಿಧವೆ ಶಾಂತವ್ವ ನಾಗಪ್ಪ ಮಾಂಗ ಎಂಬ ಮಹಿಳೆ ಹಾಗೂ ಆಕೆಯ ಪುತ್ರಿ ಹಲ್ಲೆಗೊಳಗಾದವರು.
ಕಳೆದ ಮೂರು ದಿನಗಳ ಹಿಂದೆ ಶಾಂತವ್ವ ನಾಗಪ್ಪ ಮಾಂಗ್ ಅವರ ಜಮೀನು ವಶಪಡಿಸಿಕೊಳ್ಳಲು ಗಂಡನ ಅಣ್ಣತಮ್ಮಂದಿರಾದ ಲಕ್ಕಪ್ಪ ಬಾಬು ಮಾಂಗ, ಭೀಮಪ್ಪ ಲಕ್ಕಪ್ಪ ಮಾಂಗ, ಹಣಮಂತ ಲಕ್ಕಪ್ಪ ಮಾಂಗ ಎಂಬುವವರು ಸಂತ್ರಸ್ತೆ ಶಾಂತವ್ವ ಹಾಗೂ ಅಪ್ರಾಪ್ತ ಮಗಳ ಮೇಲೆ ಹಲ್ಲೆ ಆಂಡಿದ್ದಾರೆ.
ಈ ವೇಳೆ ಎದೆಗೆ ಕೈ ಹಾಕಿ, ಜಡೆ ಹಿಡಿದು ಬಡಿಗೆಯಿಂದು ಬಡಿದು ಹಲ್ಲೆ ಮಾಡಿದ್ದಾರೆ. ಇದರಿಂದ ಕಳೆದ ಮೂರು ದಿನದಿಂದ ಪ್ರಜ್ಞೆ ತಪ್ಪಿದ್ದಾಳೆ. ಈ ಕುರಿತು ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮೂರು ದಿನಗಳು ಕಳೆದಿವೆ. ಆದರೂ ಈವರೆಗೂ ಆರೋಪಿಗಳು ಪೊಲೀಸ್ ಠಾಣೆ ಸುತ್ತಮುತ್ತ ತಿರುಗುತ್ತಿದ್ದರೂ ಸಹ ಅವರನ್ನು ಬಂಧಿಸದೆ ಪರಾರಿಯಾಗಲು ಬಿಟ್ಟಿದ್ದಾರೆ ಎಂದು ಸಂತ್ರಸ್ತ ಮಹಿಳೆ ಅಳಲು ತೋಡಿಕೊಂಡಿದ್ದಾರೆ.
ಇನ್ನು ಹಲ್ಲೆಗೊಳಗಾದ ಅಪ್ರಾಪ್ತ ಪುತ್ರಿ ಹಾಗೂ ಸಂತ್ರಸ್ತೆಯ ಆರೋಗ್ಯ ಸ್ಥಿತಿ ಗಂಭಿರವಾಗಿದ್ದು, ಅಥಣಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಿಜವಾಗಿಯೂ ಪೊಲೀಸ್ ಇಲಾಖೆ ಆರೋಪಿತರನ್ನು ರಕ್ಷಿಸುತ್ತಿದೆಯಾ? ಹಾಗೂ ಮಹಿಳಾ ಆಯೋಗ ಏನ್ಮಾಡ್ತಿದೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಯಾಗುತ್ತಿದ್ದು, ರಕ್ಷಕರೇ ಈ ರೀತಿ ಭಕ್ಷಕರಾದರೆ ನೊಂದವರು ಯಾರ ಬಳಿ ಹೋಗಬೇಕು ಎಂದು ಗ್ರಾಮಸ್ಥರು ಭಯದಲ್ಲೇ ಫ್ರಶ್ನಿಸುತ್ತಿದ್ದಾರೆ.