ನ್ಯೂಡೆಲ್ಲಿ: ಇದೇ ಫೆಬ್ರವರಿ 13ರಂದು ರೈತರ ದೆಹಲಿ ಚಲೋ ಅಭಿಯಾನಕ್ಕೆ ತೆರಳುತ್ತಿದ್ದ ಕರ್ನಾಟಕ ರೈತರನ್ನು ಮಧ್ಯಪ್ರದೇಶದ ಭೂಪಾಲ್ ಬಳಿ ಬಂಧಿಸುವ ಮೂಲಕ ಪೊಲೀಸರ ರಾಕ್ಷಸಿ ಕೃತ್ಯ ಎಸಗಿದ್ದಾರೆ ಎಂದು ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೇಶಾದ್ಯಂತ ಬೀದಿಗಳಿಯಲು ಸಜ್ಜಾಗಿರುವುದನ್ನು ಗಮನಿಸಿ ರೈತರ ಹೋರಾಟವನ್ನು ಹತ್ತಿಕ್ಕಲು ಕೇಂದ್ರ ಸರ್ಕಾರ ಪೊಲೀಸ್ ಬಲವನ್ನು ಬಳಸಿಕೊಳ್ಳುತಿದೆ. ಇದು ಖಂಡನೀಯ ಕರ್ನಾಟಕದಿಂದ ನೂರಾರು ಸಂಖ್ಯೆಯಲ್ಲಿ ದೆಹಲಿಗೆ ಬರುತ್ತಿದ್ದಾಗ ಮಧ್ಯಪ್ರದೇಶದ ಭೂಪಾಲ್ ರೈಲ್ವೆ ನಿಲ್ದಾಣದಲ್ಲಿ ಮಧ್ಯರಾತ್ರಿ ಎರಡು ಗಂಟೆ ಸಮಯದಲ್ಲಿ ರೈಲಿನ ಒಳಗೆ ನುಗ್ಗಿ ಪೊಲೀಸರು ಬಲವಂತವಾಗಿ ಬೆದರಿಸಿ ದಬ್ಬಾಳಿಕೆ ನಡೆಸಿ ರೈಲಿನಿಂದ ಹೊರೆಗೆ ಎಳೆದು ತಂದಿರುವುದು ಖಂಡನೀಯ ಎಂದು ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದ್ದಾರೆ.
ಇನ್ನು ಪೊಲೀಸರು ಎಳೆದಾಡುವ ಸಂದರ್ಭ ಮಹಿಳೆಯರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಶ್ರೀಮತಿ ಪದ್ಮ ಅವರಿಗೆ ತಲೆಗೆ ಪೆಟ್ಟಾಗಿ ಆಸ್ಪತ್ರೆ ಸೇರಿಸಿದ್ದಾರೆ. ಆಸ್ಪತ್ರೆಯಲ್ಲಿಯೂ ಸರಿಯಾದ ಚಿಕಿತ್ಸೆ ಕೊಡಿಸದೆ ಡಿಸ್ಚಾರ್ಜ್ ಮಾಡಿಸಿ ಬಂಧಿತ ಇತರೆ ರೈತರ ಸ್ಥಳಕ್ಕೆ ಕರೆದು ಬಿಂದಿದ್ದಾರೆ ಇದು ಪೊಲೀಸರ ಗುಂಡಾಗಿರಿ ವರ್ತನೆಯಾಗಿದೆ ಎಂದು ದೆಹಲಿಯಲ್ಲಿ ಸೇರಿರುವ ರೈತರು ಆಕ್ರೋಶ ಹೊರಹಾಕಿದ್ದಾರೆ.
ಕರ್ನಾಟಕದಿಂದ ಮಹಿಳೆಯರು ಸೇರಿ ನೂರಾರು ರೈತರು ರೈಲಿನ ಮೂಲಕ ಹೋಗುತ್ತಿದ್ದ ಸಂದರ್ಭದಲ್ಲಿ ಮಧ್ಯಪ್ರದೇಶದ ಭೂಪಾಲ್ ರೈಲ್ವೆ ನಿಲ್ದಾಣದಲ್ಲಿ ನೂರಾರು ಪೊಲೀಸರು ನಿದ್ರೆಯಲ್ಲಿದ್ದ ರೈತರನ್ನು ಬಂಧಿಸಲು ಮುಂದಾದರು. ನಾವು ವಿರೋಧ ವ್ಯಕ್ತಪಡಿಸಿದಾಗ ಪೊಲೀಸರು ಎಲ್ಲ ಭೋಗಿಗಳಿಗೂ ಬಂದು ಮಹಿಳೆಯರು ಎನ್ನದೆ ನಮ್ಮನ್ನು ದನಗಳಂತೆ ಎಳೆದುಕೊಂಡು ಬಂದಿಸಿದ್ದಾರೆ ಎಂದು ರೈತ ಮಹಿಳೆಯರು ಕೇಂದ್ರದ ಈ ನಡೆಯನ್ನು ತೀವ್ರವಾಗಿ ಖಂಡಿದ್ದಾರೆ.
ಇನ್ನು ಕೇಂದ್ರ ಸರ್ಕಾರದ ಈ ರೈತ ವಿರೋಧಿ ನೀತಿಯನ್ನು ಖಂಡಿಸಿ ಕರ್ನಾಟಕದ ರೈತರು ರೈಲ್ವೆ ನಿಲ್ದಾಣದಲ್ಲಿ ಪ್ರತಿಭಟನೆ ಮಾಡುವುದರ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಅಲ್ಲದೆ ಈ ಮೂಲಕ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡಿದರು.
ಕೇಂದ್ರ ಸರ್ಕಾರ ಕಳೆದ ವರ್ಷ ಈ ಹಿಂದೆ ಒಂದು ವರ್ಷಗಳ ಕಾಲ ದಿಲ್ಲಿಯಲ್ಲಿ ನಡೆದ ಚಳವಳಿ ಬಗ್ಗೆ ಪ್ರಧಾನಿ ಮೋದಿಯವರು ಮಧ್ಯಪ್ರವೇಶ ಮಾಡಿ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಸ್ವಾಮಿನಾಥನ್ ವರದಿ ಜಾರಿ ಮಾಡುವುದಾಗಿ ಭರವಸೆ ಕೊಟ್ಟಿದ್ದರು. ಆದರೆ ಆ ಕೊಟ್ಟ ಭರವಸೆಯನ್ನು ಕೇಂದ್ರ ಸರ್ಕಾರ ಇಲ್ಲಿಯವರೆಗೂ ಈಡೇರಿಸಿಲ್ಲ ಎಂದು ಕಿಡಿಕಾರಿದರು.
ಸ್ವಾಮಿನಾಥನ್ ವರದಿ ಜಾರಿ ಹಾಗೂ ದೇಶದ ರೈತರ ಸಂಪೂರ್ಣ ಸಾಲಮನ್ನಾ ಇನ್ನು ಹಲವು ಬೇಡಿಕೆಗಳನ್ನು ಇಟ್ಟು ಇದೇ ಫೆಬ್ರವರಿ 13ರಿಂದ ರೈತರ ದೆಹಲಿ ಚಲೋ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ದೇಶದ ಎಲ್ಲ ರಾಜ್ಯಗಳ ಲಕ್ಷಾಂತರ ಮಂದಿ ರೈತರು ಭಾಗವಹಿಸುವ ನಿರೀಕ್ಷೆ ಇತ್ತು.
ಅದನ್ನು ಅರಿತ ಕೇಂದ್ರ ಸರ್ಕಾರ ದಿಲ್ಲಿ ಚಲೋ ಕಾರ್ಯಕ್ರಮವನ್ನು ಹತ್ತಿಕಲು ಹಲವಾರು ಕಡೆ ಕರ್ನಾಟಕದ ನಮ್ಮ ರೈತರನ್ನು ಸೇರಿ ಬಂಧಿಸಿರುವುದು ರೈತ ವಿರೋಧಿ ನೀತಿ ಆಗಿದೆ. ರೈತರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ದೇಶದ ಬಂಡವಾಳಶಾಹಿಗಳ 12 ಲಕ್ಷ ಕೋಟಿ ರೂಪಾಯಿ ಸಾಲ ಮನ್ನಾ ಮಾಡಿದೆ. ಅದೇ ರೀತಿ ಸಂಕಷ್ಟದಲ್ಲಿರುವ ರೈತರ ಸಾಲಮನ್ನಾ ಮಾಡಲು ನಿರ್ಲಕ್ಷ್ಯ ವಹಿಸಿ ಇಬ್ಬಗೆ ನೀತಿ ಅನುಸರಿಸುತ್ತಿದೆ ಎಂದು ಕಿಡಿಕಾರಿದರು.
ಕೇಂದ್ರ ಸರ್ಕಾರ ಇಂದು ಚಂಡಿಘಡದಲ್ಲಿ ರೈತ ಮುಖಂಡರ ಮಾತುಕತೆಗೆ ಆಹ್ವಾನಿಸಿ ನಾಟಕವಾಡುತ್ತಿದೆ ಮತ್ತೊಂದು ಕಡೆ ಪೊಲೀಸರ ಮೂಲಕ ಚಳವಳಿ ಅತ್ತಿಕಲು ಯತ್ನಿಸುತ್ತಿದೆ. ಇದು ರೈತರ ಸ್ವಾಭಿಮಾನದ ಬದುಕಿನ ಪ್ರಶ್ನೆಯಾಗಿದೆ, ನಮ್ಮ ಒತ್ತಾಯ ಈಡೇರವರೆಗೂ ಹೋರಾಟ ಮುಂದುವರಿಯುವುದು ಶತಸಿದ್ಧ ಎಂದು ಹೇಳಿದ್ದಾರೆ.
ದೆಹಲಿ ಚಲೋ ರ್ಯಾಲಿಗೆ ಹೊರಟರು ಭೂಪಾಲ್ನಲ್ಲಿ ಬಂಧನ:
ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಯ ರೈತ ಮುಖಂಡರು ಶನಿವಾರ ರೈಲ್ವೆ ಮೂಲಕ ದೆಹಲಿಗೆ ಪ್ರಯಾಣ ಬೆಳೆಸಿದ್ದರು. ಈ ನಮ್ಮ ರಾಜ್ಯದ ರೈತರು ಭೂಪಾಲ್ ರೈಲ್ವೆ ನಿಲ್ದಾಣ ತಲುಪುತ್ತಿದ್ದಂತೆ ಅವರನ್ನು ತಡ ರಾತ್ರಿ 2 ಗಂಟೆ ಸುಮಾರಿಗೆ ಬಂಧಿಸಿ ಕೇಂದ್ರ ಸರ್ಕಾರ ಹೋರಾಟವನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಇದು ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಬಂಧನಕ್ಕೊಳಗಾಗಿರುವ ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇನ್ನು ರಾಜ್ಯದಿಂದ ಹೊರಟ ಬೆಳಗಾವಿ ಜಿಲ್ಲೆಯ ಗುರುಸಿದ್ದಪ್ಪ, ಧಾರವಾಡ ಜಿಲ್ಲೆಯ ಪರಶುರಾಮ್, ಚಾಮರಾಜನಗರ ಜಿಲ್ಲೆಯ ಪಟೇಲ್ ಶಿವಮೂರ್ತಿ, ಮೂಕಳ್ಳಿ ಮಾದೇವಸ್ವಾಮಿ, ಹಾಸನ ಜಿಲ್ಲೆಯ ಧರ್ಮರಾಜ್, ಮೈಸೂರು ಜಿಲ್ಲೆಯ ಬರಡನಪುರ ನಾಗರಾಜ್, ಮಹೇಶ್, ಉಡಿಗಾಲ ರೇವಣ್ಣ, ಕುರುಬೂರು ಸಿದ್ದೇಶ್, ಗುರುಸ್ವಾಮಿ, ಗೌರಿಶಂಕರ್, ಕಮಲಮ್ಮ, ಪ್ರೇಮ, ಮಮತಾ, ಶ್ವೇತಾ, ನಾಗವೇಣಿ, ಪ್ರದೀಪ್ ಕುರುಬೂರು, ಮಂಜೇಶ್ ಹಲವು ರೈತ ಮಹಿಳೆಯರು ಮತ್ತು ರೈತ ಮುಖಂಡರು ಬಂಧನಕ್ಕೊಳಗಾಗಿದ್ದಾರೆ.