ಬೆಂಗಳೂರು: 74ನೇ ಇಪಿಎಸ್ ಪಿಂಚಿಣಿದಾರರ ಮಾಸಿಕ ಸಭೆ ಲಾಲ್ ಬಾಗ್ ಆವರಣದಲ್ಲಿ ಮಾರ್ಚ್ 3ರಂದು ಅಂದರೆ ನಾಳೆ ಭಾನುವಾರ ಜರುಗಲಿದೆ ಎಂದು ಬಿಎಂಟಿಸಿ & ಕೆಎಸ್ ಆರ್ ಟಿಸಿ ನಿವೃತ್ತ ನೌಕರ ಸಂಘಟನೆ ಕಾರ್ಯಧಕ್ಷ ನಂಜುಂಡೇಗೌಡ ತಿಳಿಸಿದ್ದಾರೆ.
ಇನ್ನು ದೆಹಲಿಯಲ್ಲಿ, ಕೊರೆಯುವ ಚಳಿಯಲ್ಲಿ ತಮ್ಮ ಬದುಕನ್ನು ಲೆಕ್ಕಿಸದೆ ಕಳೆದೆರಡು ತಿಂಗಳಿನಿಂದ ರಾಷ್ಟ್ರೀಯ ಸಂಘರ್ಷ ಸಮಿತಿ ಅಧ್ಯ ಕಮಾಂಡರ್ ಅಶೋಕ್ ರಾವತ್ ಹಾಗೂ ಇತರೆ ಮುಖಂಡರು ಇಪಿಎಸ್ ನಿವೃತ್ತರ ಕನಿಷ್ಠ ಹೆಚ್ಚುವರಿ ಪಿಂಚಣಿಗೆ ಆಗ್ರಹಿಸಿ, ಕೇಂದ್ರ ಸರ್ಕಾರದ ಉನ್ನತ ಸಚಿವರು ಹಾಗೂ ಅಧಿಕಾರಿಗಳೊಂದಿಗೆ ನಡೆಸಿದ ಮಾತುಕತೆ ವಿಫಲವಾಗಿದೆ.
ಹೀಗಾಗಿ ಈವರವಿಗೂ ಇಪಿಎಸ್ ಪಿಂಚಿಣಿದಾರರ ಪರವಾಗಿ ನಡೆಸಿದ ಹೋರಾಟ ವ್ಯರ್ಥವಾಯಿತು. ಕಳೆದ ಡಿಸೆಂಬರ್ 7ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಸಾವಿರಾರು ಇಪಿಎಸ್ ನಿವೃತ್ತರು ಘರ್ಜಿಸಿದ ಕೂಗು ಕೇಂದ್ರ ಸರ್ಕಾರಕ್ಕೆ ಕೇಳಲಿಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರ ಇಪಿಎಸ್ ನಿವೃತ್ತರನ್ನು ನಡೆಸಿಕೊಳ್ಳುವ ರೀತಿ ಸರಿಯೇ?. ಕೊಟ್ಟ ಮಾತನ್ನು ಕೊನೆಗೂ ಉಳಿಸಿಕೊಳ್ಳಲಿಲ್ಲ. ಬದುಕಿನ ಅಂತಿಮ ಘಟ್ಟದಲ್ಲಿರುವ ನಿವೃತ್ತರ ಸಂಕಷ್ಟಗಳು ನಿಮಗೆ ಕಾಣುವುದಿಲ್ಲವೇ? ಕೇಂದ್ರ ಸರ್ಕಾರ ವಚನಭ್ರಷ್ಟವಾಯಿತು ಎಂದು ಕಿಡಿಕಾರಿದ್ದಾರೆ.
ಇನ್ನು ಏನೇ ಆಗಲಿ ನಾವು ಧೃತಿಗೆಡುವುದು ಬೇಡ, ಒಳ್ಳೆಯ ದಿನಗಳು ಇಂದಲ್ಲ ನಾಳೆ ಬಂದೇ ಬರುತ್ತವೆ. ನ್ಯಾಯದ ಬಾಗಿಲು ಇನ್ನೂ ಮುಚ್ಚಿಲ್ಲ. ಸರ್ವೋಚ್ಚ ನ್ಯಾಯಾಲಯದಲ್ಲಿ ಬಾಕಿ ಇರುವ ಆರ್.ಸಿ.ಗುಪ್ತ, ನ್ಯಾಯಾಲಯ ನಿಂದನಾ ಪ್ರಕರಣ ಇದೇ ಮಾರ್ಚ್ 5 ರಂದು ವಿಚಾರಣೆಗೆ ಬರಲಿದೆ.
ಜತೆಗೆ ಕನಿಷ್ಠ ಹೆಚ್ಚುವರಿ ಪಿಂಚಣಿ ಬೇಡಿಕೆಗೆ ಸಂಬಂಧಿಸಿದಂತೆ ನಮ್ಮ ಮುಖಂಡರು ನೀಡುವ ಹೋರಾಟದ ರೂಪರೇಷೆಯನ್ನು ನಿರೀಕ್ಷಿಸುತ್ತಿದ್ದು, ಅದಕ್ಕೆ ನಾವು ಬದ್ಧರಾಗಿರುತ್ತೇವೆ. ಪಾರ್ಲಿಮೆಂಟ್ ಚುನಾವಣೆ ದಿನಾಂಕ ಘೋಷಣೆಯಾಗುವ ಮುನ್ನ ನಡೆಯವ ಈ ಮಾಸಿಕ ಸಭೆ ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದರು.
ಇನ್ನು ತಾವೆಲ್ಲರೂ ವಿಶ್ವ ಪಾರಂಪರಿಕ ಲಾಲ್ಬಾಗ್ ಹೂತೋಟದಲ್ಲಿ ವಾಯುವಿಹಾರ ನಡೆಸಿ, ತಮ್ಮ ಹಳೆಯ ಸ್ನೇಹಿತರ ಭೇಟಿ, ವಿಚಾರ ವಿನಿಮಯ ಹಾಗೂ ಈ ಎಲ್ಲ ಅಂಶಗಳ ಬಗ್ಗೆ ಚರ್ಚಿಸೋಣ. ಎಲ್ಲ ನಿವೃತ್ತ ನೌಕರರು ಮಾರ್ಚ್ 3 ರಂದು ಬೆಳಗ್ಗೆ 8 ಗಂಟೆಗೆ ಹಾಜರಾಗಿ ಎಂದು ನಂಜುಂಡೇಗೌಡ ಮನವಿ ಮಾಡಿದ್ದಾರೆ.