ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಉಗ್ರಾಣ ಅಧೀಕ್ಷಕ (ದರ್ಜೆ-3)ರಾಗಿ ಕರ್ತವ್ಯ ನಿರ್ವಹಿಸುತ್ತಿರುವ 3 ಮಂದಿಯನ್ನು ಸಹಾಯಕ ಉಗ್ರಾಣಾಧಿಕಾರಿಗಳ (ದರ್ಜೆ-2) ಹುದ್ದೆಗೆ ಬಡ್ತಿ ನೀಡಿ ಸಂಸ್ಥೆಯ ಸಿಬ್ಬಂದಿ ವ್ಯವಸ್ಥಾಪಕರು ಆದೇಶ ಹೊರಡಿಸಿದ್ದಾರೆ.

ಇದೇ ಜೂನ್24ರಂದು ನಡೆದ ಇಲಾಖಾ ಮುಂಬಡ್ತಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಂಡಿದ್ದು, ಅದರಂತೆ ಸೂಕ್ತಾಧಿಕಾರಿಗಳ ಆದೇಶ ಮೇರೆಗೆ ಜೂನ್25ರಂದು ಉಗ್ರಾಣ ಅಧೀಕ್ಷಕ (ದರ್ಜೆ-3)ರಾಗಿ ಕರ್ತವ್ಯ ನಿರ್ವಹಿಸುತ್ತಿರುವ 3 ಮಂದಿಯನ್ನು ಸಹಾಯಕ ಉಗ್ರಾಣಾಧಿಕಾರಿಗಳ (ದರ್ಜೆ-2) ಹುದ್ದೆಗೆ ಬಡ್ತಿ ಎಂದು ತಿಳಿಸಿದ್ದಾರೆ.
ಬಡ್ತಿಯೊಂದಿಗೆ ವರ್ಗಾವಣೆಗೊಂಡವರ ವಿವರ: ಹುಬ್ಬಳ್ಳಿ ಕೇಂದ್ರ ಕಚೇರಿಯಲ್ಲಿ ಉಗ್ರಾಣ ಅಧೀಕ್ಷಕರಾಗಿದ್ದ ಗದಿಗೆಪ್ಪ ರು ಕವಳಿ ಅವರನ್ನು ಕೇಂದ್ರ ಕಚೇರಿಯಲ್ಲೇ ಸಹಾಯಕ ಉಗ್ರಾಣಾಧಿಕಾರಿಯಾಗಿ ಮುಂಬಡ್ತಿಯೊಂದಿಗೆ ನಿಯೋಜನೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಚಿಕ್ಕೋಡಿ ವಿಭಾಗದಲ್ಲಿ ಉಗ್ರಾಣ ಅಧೀಕ್ಷಕರಾಗಿದ್ದ ಶಿವಲಿಂಗಮ್ಮ ನೀಲಪ್ಪನವರ ಅವರನ್ನು ಚಿಕ್ಕೋಡಿ ವಿಭಾಗದಲ್ಲೇ ಸಹಾಯಕ ಉಗ್ರಾಣಾಧಿಕಾರಿಯಾಗಿ ಮತ್ತು ಉತ್ತರ ಕನ್ನಡ ವಿಭಾಗದಲ್ಲಿ ಉಗ್ರಾಣ ಅಧೀಕ್ಷಕರಾಗಿದ್ದ ರವೀಂದ್ರ ಭಟ್ ಅವರನ್ನು ಸಹಾಯಕ ಉಗ್ರಾಣಾಧಿಕಾರಿಯಾಗಿ ಬಡ್ತಿನೀಡಿ ಹುಬ್ಬಳ್ಳಿ ಕೇಂದ್ರ ಕಚೇರಿಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.
ಈ ಎಲ್ಲ ಸಿಬ್ಬಂದಿಯವರ ಕಾರ್ಯ ಕ್ಷೇತ್ರದಲ್ಲಿ ಬದಲಾವಣೆ ಇರುವ ಸಿಬ್ಬಂದಿಗಳು ಮಾತ್ರ ನಿಯಮಾನುಸಾರ ನಿಯೋಜನಾ ಸೌಲಭ್ಯಗಳಿಗೆ ಅರ್ಹರಿರುತ್ತಾರೆ. ಮುಂದುವರಿದಂತೆ, ಈ ಬಡ್ತಿಯು ವರಿಷ್ಠತಾ ಪಟ್ಟಿಯ ಪರಿಷ್ಕರಣೆಯಿಂದ ಹಾಗೂ ಜೇಷ್ಠತೆಯಲ್ಲಿ ಹಿರಿಯರಿರುವ ಯಾರಾದರೂ ಪೂರ್ವಾನ್ವಯ ಬಡ್ತಿಗೆ ಅರ್ಹತೆ ಪಡೆದುಕೊಂಡಲ್ಲಿ, ಜೇಷ್ಠತಾ ಪಟ್ಟಿಯಲ್ಲಿ ಕಿರಿಯರಿರುವ ಅಧಿಕಾರಿಗಳನ್ನು ಹಿಂಬಡ್ತಿಗೊಳಿಸುವ ಷರತ್ತಿಗೊಳಪಟ್ಟಿದೆ.
ಈ ಸಿಬ್ಬಂದಿಯವರು ಪದೋನ್ನತಿ ಮೇರೆಗೆ ನಿಯೋಜನೆಗೊಂಡ ಸ್ಥಳದಲ್ಲಿ ಕೂಡಲೇ ವರದಿ ಮಾಡಿಕೊಳ್ಳತಕ್ಕದ್ದು. ಒಂದು ವೇಳೆ ಬಡ್ತಿಯನ್ನು ಒಪ್ಪಿಕೊಳ್ಳದೇ ಇದ್ದಲ್ಲಿ ಬಡ್ತಿ ನಿರಾಕರಣೆಯ ಮನವಿಯನ್ನು ಏಳು(7) ದಿನಗಳೊಳಗಾಗಿ ಕೇಂದ್ರ ಕಚೇರಿಗೆ ಸಲ್ಲಿಸತಕ್ಕದ್ದು. ಇಂತಹ ಪ್ರಕರಣಗಳನ್ನು ಸುತ್ತೋಲೆ ಸಂಖ್ಯೆ: 1344, 17-05-2006ರ ಅನ್ವಯ ಕ್ರಮ ಕೈಗೊಳ್ಳಲಾಗುವುದು.
ಮುಂದುವರಿದಂತೆ, ಬಡ್ತಿ ಆದೇಶ ಹೊರಡಿಸಿದ ದಿನಾಂಕದಂದು, ಸಿಬ್ಬಂದಿಗಳ ವಿರುದ್ದ ಪ್ರಸ್ತುತ ಅಪರಾಧ ಪ್ರಕರಣಗಳು ಬಾಕಿ ಇದ್ದಲ್ಲಿ, ದಂಡನೆ ಚಾಲ್ತಿ ಇದ್ದಲ್ಲಿ ಅಥವಾ ಅಮಾನತಿನಲ್ಲಿದ್ದಲ್ಲಿ ಯಾವುದೇ ಕಾರಣಕ್ಕೂ ಬಡ್ತಿಯ ಆದೇಶವನ್ನು ಜಾರಿಗೊಳಿಸತಕ್ಕದ್ದಲ್ಲ. ಇಂತಹ ಪ್ರಕರಣಗಳು ಕಂಡುಬಂದಲ್ಲಿ ಕೂಡಲೇ ಕೇಂದ್ರ ಕಚೇರಿಗೆ ಮಾಹಿತಿಯನ್ನು ನೀಡಬೇಕು ಎಂದು ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು ಆದೇಶದಲ್ಲಿ ತಿಳಿಸಿದ್ದಾರೆ.
Related












