NEWSನಮ್ಮಜಿಲ್ಲೆನಮ್ಮರಾಜ್ಯ

KKSRTC: ಕರ್ತವ್ಯದ ಮೇಲೆ ಸಿಬ್ಬಂದಿ ಗಾಯಗೊಂಡಲ್ಲಿ ಸುಸಜ್ಜಿತ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ: ಡಿಸಿ ಆದೇಶ

ವಿಜಯಪಥ ಸಮಗ್ರ ಸುದ್ದಿ

ಕಲಬುರಗಿ: ಕರ್ತವ್ಯದ ಅವಧಿಯಲ್ಲಿ ಸಾರಿಗೆ ಸಿಬ್ಬಂದಿಗಳು ಗಾಯಗೊಂಡಲ್ಲಿ ಕೂಡಲೇ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ಕೊಡಿಸಬೇಕು ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಕಲಬುರಗಿ ವಿಭಾಗ-2ರ ವಿಭಾಗೀಯ ನಿಯಂತ್ರಣಾಧಿಕಾರಿಗಳು ಆದೇಶ ಮಾಡಿದ್ದಾರೆ.

ಘಟಕ ವ್ಯವಸ್ಥಾಪಕರು ಕಲಬುರಗಿ ಘಟಕ-2, 3 ಆಳಂದ, ಜೇವರ್ಗಿ, ಅಫಜಲಪೂರ ವಿಭಾಗೀಯ ಕಾರ್ಯಧೀಕ್ಷಕರು ಈ ವಿಷಯಕ್ಕೆ ಸಂಬಂಧಿಸಿದಂತೆ, ವಿಭಾಗದ ಎಲ್ಲ ಘಟಕಗಳ ಮತ್ತು ವಿಭಾಗೀಯ ಕಾರ್ಯಗಾರದಲ್ಲಿ ಕರ್ತವ್ಯ ನಿರ್ವಹಿಸುವಾಗ ಸಿಬ್ಬಂದಿಗಳು ಅಪಘಾತಗಳಲ್ಲಿ ಮತ್ತು ಅವಘಡಗಳಲ್ಲಿ ಗಾಯಗೊಂಡಾಗ ತಕ್ಷಣ ಈ ನಿರ್ದೇಶನಗಳನ್ನು ಪಾಲಿಸಬೇಕು ಎಂದು ಸೂಚಿಸಿದ್ದಾರೆ.

1) ನಮ್ಮ ಸಂಸ್ಥೆಯ ವಾಹನಗಳು ಅಪಘಾತವಾದ ತಕ್ಷಣ ಮಾಹಿತಿಯನ್ನು ವಾಟ್ಸಾಪ್ ಮೂಲಕ ಅಥವಾ ಕರೆ ಮಾಡುವುದರ ಮೂಲಕ ತಿಳಿಸಿ, 24 ಗಂಟೆಯೊಳಗೆ ಸಂಪೂರ್ಣ ವರದಿಯನ್ನು ಕಾರ್ಮಿಕ ಶಾಖೆಗೆ ನೀಡಬೇಕು.

2) ಗಾಯಗೊಂಡ ಸಿಬ್ಬಂದಿಗಳಿಗೆ ಕೂಡಲೇ ಹತ್ತಿರದ ಸುಸಜ್ಜಿತ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆಗೆ ಕ್ರಮಹಿಸಬೇಕು.

3) ಸಂಬಂಧಿಸಿದ ಘಟಕ ವ್ಯವಸ್ಥಾಪಕರು, ಸಿಬ್ಬಂದಿ ಮೇಲ್ವಿಚಾರಕರು, ಲೆಕ್ಕ ಪತ್ರ ಮೇಲ್ವಿಚಾರಕರು, ಸಂಚಾರ ನಿರೀಕ್ಷಕರು, ಪಾರುಪತ್ತೆಗಾರರು ಅಥವಾ ಘಟಕ ವ್ಯವಸ್ಥಾಪಕರು ಘಟಕದಲ್ಲಿನ ಇತರೆ ಸಿಬ್ಬಂದಿಗಳನ್ನು ನಿಯೋಜಿಸಿದ್ದಲ್ಲಿ ಸದರಿಯವರು ಗಾಯಾಳು ಸಿಬ್ಬಂದಿಗಳು ಚಿಕೆತ್ಸೆ ಪಡೆಯುತ್ತಿರುವ ಆಸ್ಪತ್ರೆಗೆ ಭೇಟಿ ನೀಡಿ ತುರ್ತು ಚಿಕಿತ್ಸಾ ನಿಧಿಯಾಗಿ 10 ಸಾವಿರ ರೂ.ಗಳನ್ನು ನೀಡುವುದು ಮತ್ತು ಹೆಚ್ಚಿನ ವೆಚ್ಚಕ್ಕಾಗಿ ಆಸ್ಪತ್ರೆಯಿಂದ ಅಂದಾಜು ಪಟ್ಟಿಯನ್ನು ಪಡೆದು ಕಾರ್ಮಿಕ ಶಾಖೆಗೆ ಕಳುಹಿಸಬೇಕು.

4) ಕಲಬುರಗಿ ಕೇಂದ್ರ ಭಾಗದಲ್ಲಿ ವಿಭಾಗ-02 ಮತ್ತು ಸಂಸ್ಥೆಯ ಯಾವುದೇ ವಿಭಾಗದ ಸಿಬ್ಬಂದಿಗಳು ಕರ್ತವ್ಯದಲ್ಲಿ ಅಪಘಾತವಾದಾಗ ಮೇಲಿನ ನಿರ್ದೇಶನಗಳನ್ನು ತಪ್ಪದೆ ಪಾಲಿಸಬೇಕು.

5) ಅಪಘಾತದ ಸಂಪೂರ್ಣ ವರದಿಯೊಂದಿಗೆ ಮತ್ತು ಅಗತ್ಯ ವೈದ್ಯಕೀಯ ದಾಖಲೆಗಳನ್ನು ಅಡಕಗೊಳಿಸಿ ವಿಳಂಬವಿಲ್ಲದೆ ಐಓಡಿ ಮಂಜೂರಿಗೆ ಕಾರ್ಮಿಕ ಶಾಖೆಗೆ ಕಳುಹಿಸಬೇಕು.

6) ಅಪಘಾತ ಮತ್ತು ತುರ್ತು ಸಮಯದಲ್ಲಿ ಎಲ್ಲ ಘಟಕ ವ್ಯವಸ್ಥಾಪಕರು ಮತ್ತು ಎಲ್ಲಾ ಮೇಲ್ವಿಚಾರಕ ಸಿಬ್ಬಂದಿಗಳು ವಿಭಾಗೀಯ ಕಾರ್ಮಿಕ ಮತ್ತು ಕಲ್ಯಾಣಾಧಿಕಾರಿಗಳ ಸಲಹೆಯಂತೆ ಕಾರ್ಯನಿರ್ವಹಿಸಬೇಕು. ಅಲ್ಲದೆ ಈ ವಿಷಯವನ್ನು ಗಂಭೀರ ಎಂದು ಪರಿಗಣಿಸಬೇಕು. ಇನ್ನು ಈ ಎಲ್ಲ ನಿರ್ದೇಶನಗಳನ್ನು ಯಾವುದೇ ದೂರುಗಳಿಗೆ ಆಸ್ಪದ ಕೊಡದೇ ನಿರ್ವಹಿಸಬೇಕು ಎಂದು ಅದೇಶಿಸಿದ್ದಾರೆ.

ಇಂಥ ಅಧಿಕಾರಿಗಳು ಎಲ್ಲ ವಿಭಾಗಗಳಲ್ಲೂ ಬೇಕಿರುವುದು. ಈ ರೀತಿ ಕ್ರಮ ತೆಗೆದುಕೊಂಡರೆ ನೌಕರರು ಯಾವುದೇ ಒತ್ತಡವಿಲ್ಲದೆ ತುಸು ನಮ್ಮದಿಯಿಂದ ಡ್ಯೂಟಿ ಮಾಡಲು ಸಾಧ್ಯವಾಗುತ್ತದೆ. ಈ ರೀತಿ ನಾಲ್ಕೂ ನಿಗಮಗಳ ಪ್ರತಿ ವಿಭಾಗದಲ್ಲೂ ಆಗಬೇಕು. ಜತೆಗೆ ಅಪಘಾತದಲ್ಲಿ ಗಾಯಗೊಂಡ ಸಿಬ್ಬಂದಿಯ ನೆರವಿಗೆ ತಕ್ಷಣ ಧಾವಿಸುವ ಕಾರ್ಯವಾಗಬೇಕಿದೆ. ನಿಜಕ್ಕೂ ಕಲಬುರಗಿ ವಿಭಾಗ-2ರ ವಿಭಾಗೀಯ ನಿಯಂತ್ರಣಾಧಿಕಾರಿಗಳ ನಡೆ ಶ್ಲಾಘನೀಯವಾದುದು.

Megha
the authorMegha

Leave a Reply

error: Content is protected !!