ಬೆಂಗಳೂರು: ಸಾರಿಗೆ ಇಲಾಖೆಯಲ್ಲಿ ಖಾಸಗಿ ವ್ಯಕ್ತಿಯ ಹುಟ್ಟಿದ ಹಬ್ಬ ಆಚರಿಸಿದ ಸಿಬ್ಬಂದಿಗಳ ಅಮಾನತಿಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಸೂಚನೆ ನೀಡಿದ್ದರು. ಸಚಿವರ ಸೂಚನೆ ಮೇರೆಗೆ ಆಯುಕ್ತರು ಹುಟ್ಟಿದ ಹಬ್ಬ ಆಚರಿಸಿದ ಅಧಿಕಾರಿಗಳನ್ನ ಅಮಾನತು ಮಾಡಿದ್ದಾರೆ.
ಇನ್ನು ಈ ಮೂಲಕ ಸಾರಿಗೆ ಇಲಾಖೆಯಲ್ಲಿ ಯಾವುದೇ ನಿಯಮ ಬಾಹಿರ ಚಟುವಟಕೆಗಳನ್ನು ಸಹಿಸುವುದಿಲ್ಲ ಎಂಬ ಸಂದೇಶವನ್ನು ಎಲ್ಲ ಅಧಿಕಾರಿಗಳು/ ಸಿಬ್ಬಂದಿಗಳಿಗೆ ರವಾನಿಸಿದ್ದಾರೆ.
ಇದೇ ಜುಲೈ 11 ರಂದು ಸಕಲೇಶಪುರ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ (ARTO) ಕಚೇರಿಯಲ್ಲಿ ಸಿಬ್ಬಂದಿಗಳು ಖಾಸಗಿ ವ್ಯಕ್ತಿಯ ಹುಟ್ಟು ಹಬ್ಬದ ಆಚರಣೆ ಮಾಡಿದ್ದರು. ಆ ವಿಡಿಯೋ ಯೂಟ್ಯೂಬ್ನಲ್ಲಿ ಪ್ರಸಾರವಾಗಿತ್ತು.
ಈ ಬಗ್ಗೆ ಮಾಹಿತಿ ಪಡೆದ ಸಾರಿಗೆ ಹಾಗೂ ಮುಜರಾಯಿ ಸಚಿವರು, ಕೂಡಲೇ ಈ ಬಗ್ಗೆ ವಿಚಾರಣೆ ನಡೆಸಿ ಸೂಕ್ತ ಶಿಸ್ತು ಕ್ರಮ ತೆಗೆದು ಕೊಳ್ಳಲು ಸಾರಿಗೆ ಆಯುಕ್ತರಿಗೆ ಸೂಚಿಸಿದ್ದರು. ಅದರಂತೆ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ (ಆಡಳಿತ) ಎಸ್.ಎನ್. ಮಧುರ, ಅಧೀಕ್ಷಕರಾದ ಎಂ.ಕೆ. ಗಿರೀಶ್ ಮತ್ತು ಎನ್.ಆರ್.ಆಶಾ ಹಾಗೂ ಮೋಟಾರು ವಾಹನ ನಿರೀಕ್ಷಕಕರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದರು.
ಬಳಿಕ ಅಧಿಕಾರಿಗಳು ವಿವರಣೆ ನೀಡಿದ್ದರು ಆದರೆ ಅವರ ವಿವರಣೆ ಸಮರ್ಪಕವಾಗಿಲ್ಲದ ಕಾರಣ ಹಾಗೂ ಕಚೇರಿ ವೇಳೆಯಲ್ಲಿಯೇ ಒಬ್ಬ ಖಾಸಗಿ ವ್ಯಕ್ತಿಯ ಹುಟ್ಟು ಹಬ್ಬವನ್ನು ಅದೂಕೂಡ ಕಚೇರಿಯಲ್ಲಿಯೇ ಆಚರಣೆ ಮಾಡಿರುವುದಲ್ಲದೇ, ತಾವೇ ಖುದ್ದು ಹಾಜರಾಗಿ ಶಾಲು ಹೊದಿಸಿ ಶುಭ ಹಾರೈಸಿರುವುದು ಕಂಡುಬಂದಿದೆ.
ಒಬ್ಬ ಜವಾಬ್ದಾರಿಯುತ ಸರ್ಕಾರಿ ನೌಕರರಾಗಿದ್ದು, ಈ ರೀತಿ ನಡೆದುಕೊಂಡಿರುವುದು ಕಾನೂನು/ ನಿಯಮ ಬಾಹಿರವಾಗಿದೆ ಎಂದು ಮನಗಂಡು ಆಯುಕ್ತರು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

Related









