ನಂಜನಗೂಡು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗದ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದರೂ ಭಾರಿ ಅನಾಹುತವೊಂದು ತಪ್ಪಿರುವ ಘಟನೆ ತಾಲೂಕಿನ ಕಲಹಳ್ಳಿ ಗೇಟ್ ಬಳಿ ಇಂದು ನಡೆದಿದೆ.
ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಕಲಹಳ್ಳಿ ಗೇಟ್ ಬಳಿ ಬಸ್ನ ಬ್ರೇಕ್ ಫೇಲಾದ ಪರಿಣಾಮ ಬಸ್ ನೇರವಾಗಿ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿದೆ. ಈ ವೇಳೆ ಕಂಬ ಮುರಿದು ಬಿದಿದ್ದರಿಂದ ಪವರ್ ಕಟ್ಟಾಗಿ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ನಂಜನಗೂಡು ಮತ್ತು ತಿ.ನರಸೀಪುರ ನಡುವಿನ ಮಾರ್ಗದಲ್ಲಿ ಸಂಚರಿಸುತ್ತಿದ್ದ ಬಸ್, ತಿರುವು ತೆಗೆದುಕೊಳ್ಳುವ ವೇಳೆ ಚಾಲಕನ ನಿಯಂತ್ರಣ ತಪ್ಪಿದ್ದರಿಂದ ಈ ಅವಘಡ ನಡೆದಿದೆ. ಈ ವೇಳೆ ವಿದ್ಯುತ್ ಕಂಬ ಮುರಿದು ಬಿದ್ದಿದ್ದರಿಂದ ವಿದ್ಯುತ್ ಸಂಪರ್ಕ ತಕ್ಷಣವೇ ಕಡಿತಗೊಂಡಿದೆ. ಹೀಗಾಗಿ ಯಾವುದೇ ಅನಾಹುತ ಸಂಭವಿಸಿಲ್ಲ.
ಘಟನೆ ಸಂಭವಿಸಿದ ವೇಳೆ ಬಸ್ಸಿನಲ್ಲಿ ಹಲವಾರು ಪ್ರಯಾಣಿಕರು ಇದ್ದರೂ ಯಾವುದೇ ಗಂಭೀರ ಗಾಯಗಳಾಗಿಲ್ಲ. ಇನ್ನು ಈ ಘಟನೆಯ ಸಂಬಂಧ ಬಿಳಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ.
ಈ ಘಟನೆಯಿಂದ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಈ ಅವಘಡಕ್ಕೆ ಬಸ್ನ ತಾಂತ್ರಿಕ ದೋಷವೇ ಪ್ರಮುಖ ಕಾರಣವೆಂದು ಶಂಕಿಸಲಾಗಿದ್ದು ಪರಿಶೀಲನೆ ಬಳಿಕ ಸತ್ಯ ಹೊರಬೀಳಲಿದೆ.
ಯೋಗ್ಯವಲ್ಲ ಬಸ್ಗಳನ್ನು ಚಾಲಕರಿಗೆ ಓಡಿಸಲು ಅಧಿಕಾರಿಗಳು ಒತ್ತಡ ಹೇರುತ್ತಿರುವುದರಿಂದ ಇಂಥ ಅನಾಹುತನಗಳು ಸಂಬವಿಸುತ್ತಿವೆ ಎಂದು ಚಾಲನಾ ಸಿಬ್ಬಂದಿಗಳು ಆರೋಪಿಸುತ್ತಿದ್ದಾರೆ. ಒಂದು ವೇಳೆ ನಿರ್ವಾಹಣೆ ಮಾಡದ ಬಸ್ಅನ್ನು ಅಧಿಕಾರಿಗಳು ಕೊಟ್ಟಿದ್ದರೆ ಅಂಥ ಅಧಿಕಾರಿಗಳನ್ನು ಅಮಾನತು ಮಾಡಿ ಸೂಕ್ತ ಕ್ರಮ ಜರುಗಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Related

 










