ಬೆಂಗಳೂರು: ರೈತ ಮುಖಂಡರ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಇಂದು ಭೇಟಿ ಮಾಡಿ ರಾಜ್ಯದ ರೈತರ ವಿವಿಧ ಸಮಸ್ಯೆಗಳನ್ನು ಬಗೆಹರಿಸುವಂತೆ ಚರ್ಚಿಸಿ ಮನವಿ ಸಲ್ಲಿಸಲಾಯಿತು.
ಸಿಎಂ ನಿವಾಸದಲ್ಲಿ ಭೇಟಿ ಮಾಡಿದ ರೈತ ಮುಖಂಡರ ನಿಯೋಗ ಮಳೆ ಹಾನಿ, ಬೆಳೆ ನಷ್ಟ ಪರಿಹಾರ ಹೆಚ್ಚಿಸಬೇಕು. ಇನ್ನು ರಾಜ್ಯಾದ್ಯಂತ ಇರುವ 38,000 ಕೆರೆಗಳ ಹೂಳು ತೆಗೆಸಿ ರೈತರ ಜಮೀನಿಗೆ ಆ ಹೂಳು ಮಣ್ಣನ್ನು ಸರಬರಾಜು ಮಾಡಲು ಯೋಜನೆಯ ರೂಪಿಸಿ ಅನುದಾನ ನಿಗದಿ ಮಾಡಬೇಕು ಎಂದು ಒತ್ತಾಯಿಸಿದರು.
2025- 26ರಲ್ಲಿ ಕಬ್ಬಿನ ಉತ್ಪನ್ನವೆಚ್ಚ ಏರಿಕೆಯಾಗಿದ್ದು ಎಫ್ಆರ್ಪಿ ದರ ಸಮಂಜಸವಾಗಿಲ್ಲ. ಕಬ್ಬಿನ ಎಫ್ಆರ್ಪಿ ದರಕ್ಕೆ ಹೆಚ್ಚುವರಿಯಾಗಿ ರಾಜ್ಯ ಸಲಹಾ ಬೆಲೆ (ಎಸ್ಎಪಿ) ನಿಗದಿ ಮಾಡಬೇಕು. 2023-24ನೇ ಸಾಲಿನಲ್ಲಿ ಟನ್ ಕಬ್ಬಿಗೆ ಹೆಚ್ಚುರಿಯಾಗಿ ನಿಗದಿಪಡಿಸಿರುವ 150 ರೂ.ಬಾಕಿ ಹಣ ರೈತರಿಗೆ ಕೂಡಿಸಬೇಕು ಎಂದು ಆಗ್ರಹಿಸಿದರು.
ರಾಜ್ಯಾದ್ಯಂತ ಅತಿವೃಷ್ಟಿ ಮಳೆ ಹಾನಿ ಪರಿಹಾರವನ್ನು ವೈಜ್ಞಾನಿಕವಾಗಿ ನಿರ್ಧರಿಸಿ ಮಳೆ ಆಶ್ರಯ ಎಕ್ಕರೆಗೆ 25,000 ಹಾಗೂ ನೀರಾವರಿ ಜಮೀನಿಗೆ 40,000 ರೂಪಾಯಿಯನ್ನು ರೈತರಿಗೆ ವಿತರಿಸುವಂತೆ ಸೂಚನೆ ನೀಡಬೇಕು ಎಂದು ಒತ್ತಾಯಿಸಿದರು.
ಇನ್ನು ಕೆಐಡಿಬಿ ರೈತರ ಜಮೀನು ವಶಪಡಿಸಿಕೊಂಡು 25 ವರ್ಷವಾದರೂ ಯಾವುದೇ ಉದ್ದೇಶಕ್ಕೂ ಅದನ್ನು ಬಳಸದೆ ಖಾಲಿ ಬಿಟ್ಟಿದ್ದು, ಅಂತಹ ಜಮೀನುಗಳನ್ನು ರೈತರಿಗೆ ವಾಪಸ್ ನೀಡಬೇಕು ಎಂದರು.
ಭತ್ತ, ರಾಗಿ, ಜೋಳಗಳನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಖರೀದಿಸುವ ಖಾತ್ರಿ ಯೋಜನೆ ಜಾರಿಗೆ ತಂದಿರುವುದು ಸ್ವಾಗತಾರ್ಹ ನಿರ್ಧಾರ. ಸಹಕಾರ ಸಂಘಗಳು ಹಾಗೂ ಸ್ವಸಹಾಯ ಸಂಘಗಳ ಜೊತೆಯಲ್ಲಿ ರೈತ ಉತ್ಪಾದಕ ಸಂಸ್ಥೆಗಳಿಗೂ ಖರೀದಿಗೆ ಅವಕಾಶ ಕಲ್ಪಿಸಲು ಕ್ರಮ ಕೈಗೊಳ್ಳಬೇಕು. ಈ ಎಲ್ಲ ಒತ್ತಾಯಗಳ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಮನವಿ ಸಲ್ಲಿಸಿದರು.

ಈ ವೇಳೆ ನಿಯೋಗದೊಂದಿಗೆ ಮಾತನಾಡಿದ ಸಿಎಂ ನಿಮ್ಮ ಬೇಡಿಕೆಗಳನ್ನು ಆದಷ್ಟು ಶೀಘ್ರದಲ್ಲೇ ಈಡೇರಿಸಲಾಗುವುದು ಎಂದು ಭರವಸೆ ನೀಡಿರುವುದಾಗಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ.
ನಿಯೋಗದಲ್ಲಿ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್, ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಕರ್ನಾಟಕ ರಾಜ್ಯ ರೈತ ಸಂಘ ಪ್ರಧಾನ ಕಾರ್ಯದರ್ಶಿ ಬಲ್ಲೂರ್ ರವಿಕುಮಾರ್, ಗದಗ ಜಿಲ್ಲಾಧ್ಯಕ್ಷ ರವಿಕುಮಾರ್, ಹಸಿರು ಸೇನೆ ಕರ್ನಾಟಕ ರಾಜ್ಯಾಧ್ಯಕ್ಷ ಕರಬಸಪ್ಪಗೌಡ, ರಾಜ್ಯ ಉಪಾಧ್ಯಕ್ಷ, ಎನ್.ಎಚ್. ದೇವಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬರಡನಪುರ ನಾಗರಾಜ್, ಶ್ರೀನಿವಾಸಲು ಚಿಕ್ಕಬಳ್ಳಾಪುರ, ಅಂಜನಪ್ಪ ಪೂಜಾರ್ ದಾವಣಗೆರೆ, ಬೈರಾರೆಡ್ಡಿ ಕಾರ್ಯದರ್ಶಿ, ಕೊಟ್ರೇಶ್ ಚೌದರಿ ಯಾದಗಿರಿ, ವಿಶ್ವನಾಥ್ ಶಿರಹಟ್ಟಿ ಪರಮೇಶ್ ಹುಲಗೂರು ಮತ್ತಿತರರು ಇದ್ದರು.
Related
