ಹೈದರಾಬಾದ್: ಸರ್ಕಾರಿ ನೌಕರರು ತಮ್ಮ ಪೋಷಕರನ್ನು ನಿರ್ಲಕ್ಷಿಸಿದರೆ, ಅವರ ಸಂಬಳದ 10 ರಿಂದ 15ರಷ್ಟು ವೇತನವನ್ನು ಕಡಿತಗೊಳಿಸಿ ನಿರ್ಲಕ್ಷ್ಯಕ್ಕೊಳಗಾದ ಪೋಷಕರಿಗೆ ನೀಡುವ ಕಾನೂನನ್ನು ತೆಲಂಗಾಣ ಸರ್ಕಾರ ಜಾರಿಗೆ ತರಲಿದೆ ಎಂದು ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಘೋಷಿಸಿದ್ದಾರೆ.
ಹೊಸದಾಗಿ ಆಯ್ಕೆಯಾದ ಗ್ರೂಪ್-II ಉದ್ಯೋಗಿಗಳಿಗೆ ನೇಮಕಾತಿ ಆದೇಶ ಪತ್ರ ಕೊಡುವ ಮುನ್ನ ಸಭೆಯಲ್ಲಿ ಅವರು ಮಾತನಾಡಿದರು.
ಸಮಸ್ಯೆಗಳೊಂದಿಗೆ ಅಧಿಕಾರಿಗಳನ್ನು ಸಂಪರ್ಕಿಸುವ ಜನರೊಂದಿಗೆ ಸಹಾನುಭೂತಿಯಿಂದ ವರ್ತಿಸಬೇಕು. ಆಗ ರಾಜ್ಯದ ಜನತೆ ಸಮಸ್ಯೆಯಿಂದ ಹೊರಬರಲು ಸಾಧ್ಯ ಎಂದರು.
ಇನ್ನು ನಾವು ಒಂದು ಕಾನೂನನ್ನು ತರುತ್ತಿದ್ದೇವೆ. ಸರ್ಕಾರಿ ನೌಕರರು ತಮ್ಮ ಪೋಷಕರನ್ನು ನಿರ್ಲಕ್ಷಿಸಿದರೆ, ಅಂಥವರ ಸಂಬಳದಲ್ಲಿ 10 ರಿಂದ 15ರಷ್ಟು ಕಡಿತಗೊಳಿಸಿ ಪೋಷಕರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ ಎಂದು ಹೇಳಿದರು.
ಅಲ್ಲದೆ ಈ ಸಂಬಂಧ ಶಾಸನದ ಕರಡು ಪ್ರತಿಯನ್ನು ರಚಿಸುವವರು ನೀವೇ. ನೀವು ಮಾಸಿಕ ಸಂಬಳವನ್ನು ಪಡೆಯುವಂತೆಯೇ, ನಿಮ್ಮ ಪೋಷಕರು ಸಹ ಅದರಿಂದ ಮಾಸಿಕ ಆದಾಯವನ್ನು ಪಡೆಯುವುದನ್ನು ನಾವು ಖಚಿತಪಡಿಸಿಕೊಳ್ಳುತ್ತೇವೆ ಎಂದು ಸಿಎಂ ವಿವರಿಸಿದರು.
ಕಾನೂನನ್ನು ರೂಪಿಸಲು ಅಧಿಕಾರಿಗಳ ಸಮಿತಿಯನ್ನು ರಚಿಸುವಂತೆ ರೇವಂತ್ ರೆಡ್ಡಿ ಮುಖ್ಯ ಕಾರ್ಯದರ್ಶಿ ರಾಮಕೃಷ್ಣ ರಾವ್ ಅವರಿಗೆ ಸೂಚಿಸಿದರು. ಅಲ್ಲದೆ ಇದು ವಯಸ್ಸಾದ ಪೋಷಕರು ಯಾವುದೇ ಸಮಸ್ಯೆ ಇಲ್ಲದೆ ಜೀವನ ಸಾಗಿರುವುದಕ್ಕೆ ದಾರಿಯಾಗಲಿದೆ ಎಂದು ಹೇಳಿದರು.

Related
