NEWSನಮ್ಮಜಿಲ್ಲೆನಮ್ಮರಾಜ್ಯ

KSRTC ಬಸ್‌ ಶುಚಿಗೊಳಿಸಿ ಸಮಾಜಕ್ಕೆ ಮಾದರಿಯಾದ ಮಡಪ್ಪಾಡಿಯ ಯುವಕರು

ವಿಜಯಪಥ ಸಮಗ್ರ ಸುದ್ದಿ

ದಕ್ಷಿಣ ಕನ್ನಡ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಚಾಲನಾ ಸಿಬ್ಬಂದಿಯ ಪ್ರಾಮಾಣಿಕ ಸೇವೆಯನ್ನು ಶ್ಲಾಘಿಸಿರುವ ಗ್ರಾಮವೊಂದರ ಯುವಕರು ತಮ್ಮೂರಿಗೆ ಬರುವ ಬಸ್‌ಅನ್ನು ತಾವು ಸ್ವತಃ ಶುಚಿಗೊಳಿಸಿ ನೈರ್ಮಲ್ಯದ ಬಗ್ಗೆ ಅರಿವು ಮೂಡಿಸಿದ್ದಾರೆ.

ಹೌದು! ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಮಡಪ್ಪಾಡಿಯ ಯುವಕರ ತಂಡ ತಮ್ಮೂರಿಗೆ ಬರುವ KSRTC ಬಸ್ಸನ್ನು ಶುಚಿಗೊಳಿಸುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ.

ಈ ಯುವಕರು ಮುಂಜಾನೆಯೇ ಎದ್ದು ಬಸ್‌ ಹೊರಡುವ ವೇಳೆಗೆ ಬಸ್‌ಅನ್ನು ಅಚ್ಚುಕಟ್ಟಾಗಿ ತೊಳೆದು ಪ್ರಯಾಣ ಆನಂದದಾಯಕವಾಗಿರಲಿ ಎಂದು ವಿಷ್‌ ಮಾಡಿದ್ದು, ಆ ಕ್ಷಣ ಸಂತೋಷಕ್ಕೆ ಪಾರವೇ ಇಲ್ಲ ಎಂಬುದನ್ನು ನೆನಪಿಸುತ್ತದೆ.

ಇನ್ನು ಕೆಲವು ವಿಭಾಗ ಹಾಗೂ ಘಟಕದಲ್ಲಿರುವ ಅಧಿಕಾರಿಗಳು ಕೂಡ ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು. ಎಲ್ಲವನ್ನು ಚಾಲನಾ ಸಿಬ್ಬಂದಿಯೇ ಮಾಡಬೇಕು. ಕಾರಣ ಶುಚಿಗೊಳಿಸಲು ಗುತ್ತಿಗೆ ಆಧಾರದ ಮೇಲೆ ನೇಮಕಮಾಡಿಕೊಳ್ಳಲಾಗುವ ಕಾರ್ಮಿಕರು  ಕೆಲವೊಮ್ಮೆ ಬರುವುದಿಲ್ಲ ಎಂದು ಬಸ್‌ಗಳನ್ನು ಶುಚಿಗೊಳಿಸದೆ ರೂಟ್‌ ಮೇಲೆ ಕಳಿಸುತ್ತಾರೆ.

ಇಲ್ಲ ಚಾಲನಾ ಸಿಬ್ಬಂದಿಗಳಿಗೆ ನೀವೆ ಈ ದಿನ ಶುಚಿ ಮಾಡಿಕೊಂಡು ಹೋಗಿ ಎಂದು ಆದೇಶ ಮಾಡುತ್ತಾರೆ. ಆದರೆ, ಚಾಲನಾ ಸಿಬ್ಬಂದಿಯ ಕೆಲಸ ಅದಲ್ಲ ಎಂಬುವುದು ಗೊತ್ತಿದ್ದರೂ ಕೂಡ ಆದೇಶ ಮಾಡುತ್ತಾರೆ. ಈ ವೇಳೆ ಚಾಲನಾ ಸಿಬ್ಬಂದಿಗಳು ಈ ಕೆಲಸ ಮಾಡಲು ನನಗೆ ಆಗುತ್ತಿಲ್ಲ ಎಂದರೆ ಅವರನ್ನು ಶತ್ರುಗಳಂತೆ ನೋಡುತ್ತಾರೆ.

ಇನ್ನಾದರೂ ಈ ಎಲ್ಲ ಶತ್ರುತ್ವವನ್ನು ಬಿಟ್ಟು ಚಾಲನಾ ಸಿಬ್ಬಂದಿಗಳು ಅವರ ಕೆಲಸ ಅವರು ಮಾಡುತ್ತಾರೆ, ಅವರದಲ್ಲದ ಕೆಲಸವನ್ನು ನಾವು ಹೇಳ ಬಾರದು ಎಂದು ಅರಿವಿಟ್ಟುಕೊಂಡರೆ ಸಾಕು. ಇಂಥ ಪರಿಸ್ಥಿತಿ ತಿಳಿಯದಿದ್ದರೂ ಕೂಡ ಸುಳ್ಯ ತಾಲೂಕಿನ ಮಡಪ್ಪಾಡಿಯ ಯುವಕರ ತಂಡ ಸಮಾಜಕ್ಕೆ ಮಾದರಿಯಾಗುವ ಕೆಲಸ ಮಾಡಿರುವುದು ನಿಜಕ್ಕೂ ಶ್ಲಾಘನೀಯವಾದುದು.

ಇದೇ ರೀತಿ ಈ ಬಸ್‌ ನಮ್ಮದು ಎಂಬ ಭಾವನೆಯಿಂದ ಸಾರಿಗೆ ಬಸ್‌ಗಳು ನಿಲ್ಲುವ ಪ್ರತಿ ಗ್ರಾಮದಲ್ಲೂ ಯುವಕರು ಇಂಥ ಸಮಾಜಮುಖಿ ಕೆಲಸ ಮಾಡುವ ಮೂಲಕ ಸಾರ್ವಜನಿಕ ಆಸ್ತಿಯನ್ನು ಅಚ್ಚುಕಟ್ಟಾಗಿ ಇಟ್ಟುಕೊಂಡರೆ ಎಷ್ಟು ಚೆಂದ ಅಲ್ವಾ..!

Megha
the authorMegha

Leave a Reply

error: Content is protected !!