ನಾಳೆ EPS ಪಿಂಚಣಿದಾರರ 94ನೇ ಮಾಸಿಕ ಸಭೆ: ಕನಿಷ್ಠ ಪಿಂಚಣಿ 7500 ರೂ. ಸೇರಿ ವಿವಿಧ ಬೇಡಿಕೆಗಳ ಈಡೇರಿಕೆ ಸಂಬಂಧ ಚರ್ಚೆ


ಬೆಂಗಳೂರು: ಇಪಿಎಸ್-95 ಪಿಂಚಣಿದಾರರ 94ನೇ ಮಾಸಿಕ ಸಭೆ ಲಾಲ್ಬಾಗ್ ಆವರಣದಲ್ಲಿ ನವೆಂಬರ್ 2ರ ಭಾನುವಾರ ಬೆಳಗ್ಗೆ 8 ಗಂಟೆಗೆ ಜರುಗಲಿದೆ ಎಂದು ಬಿಎಂಟಿಸಿ ಹಾಗೂ ಕೆಎಸ್ಆರ್ಟಿಸಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ನಂಜುಂಡೇಗೌಡ ತಿಳಿಸಿದ್ದಾರೆ.
ಇನ್ನು ಕಳೆದ ಅಕ್ಟೋಬರ್ ತಿಂಗಳು ಫ್ರೀಡಂಪಾರ್ಕ್ನಲ್ಲಿ ಜರುಗಿದ ಬೃಹತ್ ಪ್ರತಿಭಟನೆ, ಮೊನ್ನೆ ಇಪಿಎಫ್ಓ ಕಚೇರಿ ಆವರಣದಲ್ಲಿ ಜರುಗಿದ ಪ್ರತಿಭಟನೆ ಇವೆಲ್ಲವೂ ಸಹಾ ದೇಶಾದ್ಯಂತ ಇರುವ ಇಪಿಎಸ್ ನಿವೃತ್ತರಲ್ಲಿ ಸಾಕಷ್ಟು ಜಾಗೃತಿ ಹಾಗೂ ಅರಿವು ಮೂಡಿಸಿದೆ. ಭಾಗವಹಿಸಿದ್ದ ಎಲ್ಲರಿಗೂ ಅಭಿನಂದನೆಗಳು.
2014ರ ನಂತರ ನಿವೃತ್ತರಾದ ಬಿಎಂಟಿಸಿ ಹಾಗೂ ಕೆಎಸ್ಆರ್ಟಿಸಿ ನೌಕರರು ಅಧಿಕ ಪಿಂಚಣಿ ಕೋರಿ ಜಂಟಿ ಆಯ್ಕೆ ಪತ್ರ ಸಲ್ಲಿಸಿದ್ದು, ಈ ಎಲ್ಲ ಅರ್ಜಿಗಳನ್ನು ಇಪಿಎಫ್ಒ ಅಧಿಕಾರಿಗಳು ತಮ್ಮ ಆದೇಶ 18/01/2025 ರಂದು ವಜಾ ಗೊಳಿಸಿದ್ದಾರೆ. ಇತ್ತೀಚೆಗೆ ಮಧುರೈ ಉಚ್ಚ ನ್ಯಾಯಾಲಯವು ಅಧಿಕ ಪಿಂಚಣಿಗೆ ಸಂಬಂಧಪಟ್ಟಂತೆ ಮಹತ್ವದ ತೀರ್ಪು ನೀಡಿದ್ದು, ಈ ಸಂಬಂಧ ಸಂಸ್ಥೆಯ ನಿವೃತ್ತರು ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲು ಉತ್ಸವಕರಾಗಿದ್ದು, ಈ ಬಗ್ಗೆ ತಜ್ಞ ವಕೀಲರು ನೀಡಿರುವ ಅಭಿಪ್ರಾಯ, ಈ ಎಲ್ಲ ಸಂಗತಿಗಳನ್ನು 94ನೇ ಮಾಸಿಕ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ನಂಜುಂಡೇಗೌಡ ತಿಳಿಸಿದ್ದಾರೆ.
ಅದರಲ್ಲೂ ಬಿಎಂಟಿಸಿ ಹಾಗೂ ಕೆಎಸ್ಆರ್ಟಿಸಿ ನಿವೃತ್ತರು, ಇತರೆ ಎಲ್ಲ ಕಂಪನಿ ಹಾಗೂ ಕಾರ್ಖಾನೆಗಳ ನಿವೃತ್ತರು ಈ ಸಭೆಯಲ್ಲಿ ಭಾಗವಹಿಸಿ ತಮ್ಮ ಅಭಿಪ್ರಾಯ, ಅನಿಸಿಕೆಗಳನ್ನು ಹಂಚಿಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ದಿನ ಕಳೆದಂತೆ ಇಪಿಎಸ್ ನಿವೃತ್ತರ ಸಹನೆಯ ಕಟ್ಟೆ ಒಡೆಯುತ್ತಿದೆ. ಕೇಂದ್ರ ಸರ್ಕಾರದ ಉದ್ಯೋಗ ಹಾಗೂ ಕಾರ್ಮಿಕ ಸಚಿವ ಮುನ್ಸೂಖ್ ಮಾಂಡವೀಯ ಅವರು ಅಕ್ಟೋಬರ್ 17ರಂದು ರಾಷ್ಟ್ರೀಯ ಸಂಘರ್ಷ ಸಮಿತಿ ಮುಖ್ಯಸ್ಥ ಅಶೋಕ್ ರಾವುತ್ ಅವರಿಗೆ ಲಿಖಿತ ರೂಪದಲ್ಲಿ ನೀಡಿರುವ ಪತ್ರ, ಇಪಿಎಸ್ ನಿವೃತ್ತರಲ್ಲಿ ಬಹಳಷ್ಟು ಕುತೂಹಲ ಮೂಡಿಸಿದ್ದು, ಕೇಂದ್ರ ಸರ್ಕಾರದ ಸಕಾರಾತ್ಮಕ ಆದೇಶದ ನಿರೀಕ್ಷೆಯಲ್ಲಿದ್ದಾರೆ ಎಂದರೆ ತಪ್ಪಾಗಲಾರದು.
ನಾಲ್ಕು ತಿಂಗಳ ಕೆಳಗೆ ರಾಜ್ಯ ಸಂಸದರು ಹಾಗೂ ಪಾರ್ಲಿಮೆಂಟರಿ ಕಮಿಟಿ ಅಧ್ಯಕ್ಷರು ಆದ ಬಸವರಾಜ ಬೊಮ್ಮಾಯಿ aವರು ಇಪಿಎಸ್ ನಿವೃತ್ತರ ಪರ ಕೇಂದ್ರ ಸರ್ಕಾರಕ್ಕೆ ವರದಿಯೊಂದನ್ನು ನೀಡಿದ್ದು, ಕಳೆದ 11 ವರ್ಷಗಳಿಂದ ಇಪಿಎಸ್ ನಿವೃತ್ತರೆಗೆ kನಿಷ್ಠ ಪಿಂಚಣಿ 1,000 ರೂ. ಮಾತ್ರ ನೀಡುತ್ತಿದ್ದು, ಬೆಲೆ ಸೂಚ್ಯಂಕಕ್ಕೆ ಅನುಗುಣವಾಗಿ ನಿವೃತ್ತರ ಕನಿಷ್ಠ ಮಾಸಿಕ ಪಿಂಚಣಿ ಈಗ 7,500 ರೂ. ನಿಗದಿಪಡಿಸುವುದು ಸೂಕ್ತ ಎಂದು ತಮ್ಮ ವರದಿಯಲ್ಲಿ ಉಲ್ಲೇಖಿಸಿ, ಡಿಸೆಂಬರ್ 2025ರ ಒಳಗೆ ನಿಗದಿಪಡಿಸಿ, ನೀಡಬೇಕೆಂದು ಶಿಫಾರಸ್ಸು ಮಾಡಿದ್ದಾರೆ. ಬಲ್ಲ ಮೂಲಗಳ ಪ್ರಕಾರ ಬಿಹಾರ ವಿಧಾನಸಭಾ ಚುನಾವಣೆ ಮುಗಿದ ನಂತರ ಪರಿಗಣಿಸಲಾಗುವುದು ಎಂಬ ಮಾಹಿತಿ ಇದೆ.

ಚಳಿಗಾಲದ ಪಾರ್ಲಿಮೆಂಟ್ ಅಧಿವೇಶನ ನವೆಂಬರ್ 25ಕ್ಕೆ ಪ್ರಾರಂಭವಾಗಿ ಡಿಸೆಂಬರ್ 20ಕ್ಕೆ ಅಂತ್ಯಗೊಳ್ಳಲಿದೆ. ಇಪಿಎಸ್ ಪಿಂಚಣಿ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯ ಸಂಸದರನ್ನು ಕಂಡು, ಮುಂಬರುವ ಪಾರ್ಲಿಮೆಂಟ್ ಅಧಿವೇಶನದಲ್ಲಿ ನಮ್ಮ ಪರ ವಾದ ಮಂಡಿಸುವ ಮೂಲಕ ನಮ್ಮ ಮೂಲಭೂತ ಬೇಡಿಕೆಗಳನ್ನು ಈಡೇರಿಸಿ ಕೊಡಬೇಕೆಂದು, ಮುಂದಿನ ದಿನಗಳಲ್ಲಿ ಸಂಸದರನ್ನು ಕಂಡು ವಿನಂತಿಸಿಕೊಳ್ಳಲಾಗುವುದು.
ಇನ್ನು ಭರವಸೆ ಎಂಬುದು ಬದುಕಿನ ಜೀವ ಜಲ, ಅದನ್ನು ಎಂದಿಗೂ ಬತ್ತಲು ಬಿಡಬಾರದು. ಸಂಘರ್ಷವಿಲ್ಲದೆ ಏನನ್ನು ಪಡೆಯಲು ಸಾಧ್ಯವಿಲ್ಲ ಎಂಬುದು ತಮಗೂ ತಿಳಿದಿದೆ. ಏನೇ ಆಗಲಿ ಹೋರಾಟ ಮುಂದುವರೆಯಲಿದೆ. 78 ಲಕ್ಷ ಇಪಿಎಸ್ ನಿವೃತ್ತರ ಬದುಕು ಇಂದಿಗೂ ಅತಂತ್ರ ಸ್ಥಿತಿಯಲ್ಲಿದ್ದು, ಇದಕ್ಕೆ ಯಾರು ಕಾರಣ ಎಂದು ಹೇಳಬೇಕಾಗಿಲ್ಲ, ಇಪಿಎಫ್ಒ ಅಧಿಕಾರಿಗಳ ಧೋರಣೆ, ಅಸಹಕಾರ, ನಿರ್ಲಜ್ಜ ನಡೆ, ಇಪಿಎಸ್ ನಿವೃತ್ತರನ್ನು ಈ ಸ್ಥಿತಿಗೆ ತಂದು ನಿಲ್ಲಿಸಿದೆ. ಏನೇ ಆಗಲಿ ನಾವೆಲ್ಲರೂ ಒಂದೇ, ಒಗ್ಗಟ್ಟಾಗಿ ನಮ್ಮ ಗುರಿ ಮುಟ್ಟಲು ಪ್ರಯತ್ನಿಸೋಣ ಎಂದು ನಂಜುಂಡೇಗೌಡ ಕರೆ ನೀಡಿದ್ದಾರೆ.
ರಂಗಭೂಮಿ ಕಲಾವಿದರು, ಉತ್ತಮ ವಾಗ್ಮಿಯೂ ಆಗಿರುವ ಬಿಎಂಟಿಸಿ ನಿರ್ವಾಹಕಿ ಪಿ.ಉಮಾ ಅವರು ಕಳೆದ 25 ವರ್ಷಗಳಿಂದ ಸರ್ಕಾರಿ ಹಾಗೂ ನಮ್ಮ ಸಂಸ್ಥೆಯ ಸಭೆ ಸಮಾರಂಭಗಳಲ್ಲಿ ನಿರೂಪಕಿಯಾಗಿಯೂ ಸೇವೆ ಸಲ್ಲಿಸುವ ಮೂಲಕ, ಜನ ಮನ್ನಣೆಗೆ ಪಾತ್ರರಾಗಿದ್ದಾರೆ. ಈ ಮಾಸಿಕ ಸಭೆಯಲ್ಲಿ ನಿವೃತ್ತರ ಸಂಕಷ್ಟಗಳ ಕುರಿತು ಸವಿಸ್ತಾರವಾಗಿ ಮಾತನಾಡಲಿದ್ದಾರೆ.
ರಾಷ್ಟ್ರೀಯ ಸಂಘರ್ಷ ಸಮಿತಿ ಮುಖ್ಯಸ್ಥ ಜಿಎಸ್ಎಂ ಸ್ವಾಮಿರವರು, ನಮ್ಮ ಸಂಘದ ಎಲ್ಲ ಪದಾಧಿಕಾರಿಗಳು, ಚಿಕ್ಕಬಳ್ಳಾಪುರ ಕೆಎಸ್ಆರ್ಟಿಸಿ ಕ್ಷೇಮಾಭಿವೃದ್ಧಿ ಟ್ರಸ್ಟ್ ಪದಾಧಿಕಾರಿಗಳು, ಸದಸ್ಯರು, ಸಂಸ್ಥೆಯ ಸೇವೆಯಿಂದ ನಿವೃತ್ತರಾದ ಹಲವಾರು ಕಾರ್ಮಿಕ ಮುಖಂಡರು ಹಾಗೂ ಇತರೆ ಕಾರ್ಖಾನೆ ಹಾಗೂ ಕಂಪನಿಗಳ ನಿವೃತ್ತರು, ಈ ಮಾಸಿಕ ಸಭೆಯಲ್ಲಿ ಭಾಗವಹಿಸಲಿದ್ದು, ಮುಖಂಡರು ಇತ್ತೀಚಿನ ಎಲ್ಲ ಬೆಳವಣಿಗೆಗಳು ಹಾಗೂ ನಮ್ಮ ಮುಂದಿನ ಹೋರಾಟದ ರೂಪುರೇಷೆಗಳ ಬಗ್ಗೆ ಚರ್ಚಿಸಲಿದ್ದಾರೆ.
ಹೀಗಾಗಿ ತಾವೆಲ್ಲರೂ ವಿಶ್ವ ಪಾರಂಪರಿಕ ಲಾಲ್ಬಾಗ್ ಹೋತೊಟದಲ್ಲಿ ವಾಯು ವಿಹಾರ ನಡೆಸಿ, ತಮ್ಮ ಹಳೆಯ ಸ್ನೇಹಿತರ ಭೇಟಿ, ವಿಚಾರ ವಿನಿಮಯದ ಜತೆಗೆ ಈ ಎಲ್ಲ ಅಂಶಗಳ ಬಗ್ಗೆ ಚರ್ಚಿಸೋಣ. ಎಲ್ಲ ನಿವೃತ್ತ ನೌಕರರು ನ.11ರ ಭಾನುವಾರ ಬೆಳಗ್ಗೆ 8 ಗಂಟೆಗೆ ಆಗಬೇಕು ಎಂದು ಕಾರ್ಯಕಾರಿ ಸಮಿತಿ ಪರವಾಗಿ ನಂಜುಂಡೇಗೌಡ ವಿನಂತಿಸಿಕೊಂಡಿದ್ದಾರೆ.

Related








