NEWSನಮ್ಮರಾಜ್ಯಬೆಂಗಳೂರು

BMTC: ವಜಾಗೊಂಡು ಮರಳಿ ಡ್ಯೂಟಿ ಮಾಡುತ್ತಿರುವ ನೌಕರರು ಅಪಘಾತ ವಿಮೆಗೆ ಅರ್ಹರು- ಎಂಡಿ ಆದೇಶ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆಯ ಸಂಸ್ಥೆ ನೌಕರರು ಮುಷ್ಕರದ ಸಮಯದಲ್ಲಿ ವಜಾಗೊಂಡು ಮತ್ತೆ ಕರ್ತವ್ಯಕ್ಕೆ ಹಾಜರಾಗಿದ್ದು, ಅವರೆಲ್ಲರೂ ಕೂಡ 50 ಲಕ್ಷ ರೂ.ಗಳ ಅಪಘಾತ ವಿಮೆ ಯೋಜನೆಯಡಿ ಬರಲಿದ್ದಾರೆ ಎಂದು ವ್ಯವಸ್ಥಾಪಕ ನಿರ್ದೇಶಕರು ಆದೇಶ ಹೊರಡಿಸಿದೆ.

ನಿನ್ನೆ ಅಂದರೆ ಮೇ 28ರಂದು ಈ ಆದೇಶ ಹೊರಡಿಸಿದ್ದು, ಇದರಿಂದ ಅಪಘಾತ ವಿಮೆಯಿಂದ ಈವರೆಗೂ ಹೊರಗುಳಿದಿದ್ದ ಈ ಎಲ್ಲ ನೌಕರರಿಗೆ ಈಗ ಸಿಹಿ ಸುದ್ದಿ ಸಿಕ್ಕಂತಾಗಿದೆ. ಅಲ್ಲದೆ ಈ ವಜಾಗೊಂಡಿದ್ದ ಎಲ್ಲ ನೌಕರರು ತಾವು ಮಾಡದ ತಪ್ಪಿಗೆ ಮುಷ್ಕರದ ಸಮಯದಲ್ಲಿ ವಜಾಗೊಂಡು ನೋವು ಅನುಭವಿಸಿದ್ದಾರೆ. ಆದರೂ ಕೆಲ ಕಿಡಿಗೇಡಿ ಅಧಿಕಾರಿಗಳು ಅವರನ್ನು ಇನ್ನಷ್ಟು ನೋಯಿಸುವ ನಿಟ್ಟಿನಲ್ಲಿ ತಮಗಿಷ್ಟ ಬಂದ ರೀತಿಯಲ್ಲಿ ನಿಯಮ ರೂಪಿಸಿ ದೌರ್ಜನ್ಯ ಎಸಗುತ್ತಿದ್ದರು.

ಆದರೆ, ಕರ್ನಾಟಕ ಹೈ ಕೋರ್ಟ್‌ ಅಧಿಕಾರಿಗಳಿಂದ ದೌರ್ಜನ್ಯಕ್ಕೊಳಗಾದ ನೌಕರರಿಗೆ ನ್ಯಾಯ ದೊರಕಿಸಿಕೊಟ್ಟಿದ್ದು, ಈವರೆಗೂ ಅಪಘಾತ ವಿಮೆ 50 ಲಕ್ಷ ರೂ.ಗಳು ಸಿಗದಂತಾಗಿದ್ದ ಈ ನೌಕರರಿಗೆ ಸಿಗುವಂತೆ ಮಧ್ಯಂತರ ಆದೇಶ ಮಾಡಿದೆ. ಇದು ನೊಂದಿದ್ದ ನೌಕರರ ಪಾಲಿಗೆ ಆಸರೆ ಸಿಕ್ಕಂತಾಗಿದೆ. ಅಲ್ಲದೆ ಸತ್ಯಕ್ಕೆ ಸಾವಿಲ್ಲ ಎಂಬುದನ್ನು ನಿರೂಪಿಸಿದೆ.

ಇನ್ನು ಈಗಲೂ ಸಂಸ್ಥೆಯ ಕೆಲ ಭ್ರಷ್ಟ ಅಧಿಕಾರಿಗಳ ದರ್ಪಕ್ಕೆ ಅಮಾಯಕರು ಬಲಿಯಾಗುತ್ತಿರುವುದು ಶೋಚನೀಯ ಸಂಗತಿಯಾಗಿದೆ. ಇದರ ನಡುವೆ ವಜಾಗೊಂಡು ಮರಳಿ ಡ್ಯೂಟಿ ಮಾಡುತ್ತಿರುವ ನೌಕರರಿಗೆ ಈಗ ಗುಂಪು ವಿಮಾ ಯೋಜನೆಯ ಅಪಘಾತ (ಕರ್ತವ್ಯ ನಿರತ ಮತ್ತು ಖಾಸಗಿ ಅಪಘಾತ ಸೇರಿದಂತೆ) ಪ್ರಕರಣಗಳ ಕ್ಷೇಮ್‌ಗಳನ್ನು ಸಲ್ಲಿಸಲು ಅವಕಾಶ ನೀಡಿರುವುದು ಖುಷಿಯ ವಿಚಾರ.

ಸಂಸ್ಥೆಯ ಆದೇಶ ಏನು?: ಬಿಎಂಟಿಸಿ ಸಂಸ್ಥೆಯಲ್ಲಿ ನೌಕರರ ಇಲಾಖಾ ಗುಂಪು ವಿಮಾ ಯೋಜನೆಯಡಿ ಸೇವೆಯಲ್ಲಿರುವ ಅಧಿಕಾರಿ, ನೌಕರರು ಅಪಘಾತದಲ್ಲಿ (ಕರ್ತವ್ಯ ನಿರತ ಮತ್ತು ಖಾಸಗಿ ಅಪಘಾತ ಸೇರಿದಂತೆ) ಮರಣ ಹೊಂದಿದರೆ ₹50 ಲಕ್ಷಗಳ ಪರಿಹಾರ ಮೊತ್ತವನ್ನು ನೀಡುವ ಸಂಬಂಧ ಈಗಾಗಲೇ ಯೋಜನೆ 2024ರ ಫೆ19 ರಿಂದ ಜಾರಿಗೆ ಬಂದಿದೆ. ಈ ಸಂಬಂಧ ಅಪಘಾತದಿಂದ ಮರಣ ಹೊಂದಿದ ಪ್ರಕರಣಗಳಲ್ಲಿ ಕ್ಷೇಮ್‌ಗಳನ್ನು ಸಲ್ಲಿಸಲು ಅನುಸರಿಸಬೇಕಾದ ಕ್ರಮಗಳ ಕುರಿತು ಮಾರ್ಗದರ್ಶನವನ್ನು ಈ ಹಿಂದೆಯೇ ನೀಡಲಾಗಿದೆ.

ಇನ್ನು ವಿಮಾ ಪರಿಹಾರ ಮೊತ್ತ ₹50 ಲಕ್ಷಗಳನ್ನು ವಿತರಿಸುವ ಸಂಬಂಧ ಕೆಲವೊಂದು ಪ್ರಮುಖ ಷರತ್ತುಗಳನ್ನು ಅಳವಡಿಸಿಕೊಳ್ಳಲಾಗಿದೆ. ಅದರಂತೆ ಈ ಷರತ್ತುಗಳ ಪೈಕಿ ಅನರ್ಹ ಪ್ರಕರಣಗಳಡಿ (ಅಂದರೆ ವಜಾಗೊಂಡ ನೌಕರರನ್ನು ಗುರಿಯಾಗಿಸಿಕೊಂಡು ಮಾಡಿದ ನಿಯಮ) ಕ್ರಮ ಸಂಖ್ಯೆ-2 ರಲ್ಲಿ “ನ್ಯಾಯಾಲಯದ ಮಧ್ಯಂತರ ಆದೇಶದ ಮೇರೆಗೆ ಕರ್ತವ್ಯ ನಿರ್ವಹಿಸುತ್ತಿರುವ ನೌಕರರು ಈ ಯೋಜನೆಯ ವ್ಯಾಪ್ತಿಗೆ ಬರುವುದಿಲ್ಲ” ಎಂದು ನಿಯಮ ರೂಪಿಸಲಾಗಿತ್ತು.

ಆದರೆ ಈಗ ಉಚ್ಚ ನ್ಯಾಯಾಲಯವು ರಿಟ್ ಅರ್ಜಿ ಪ್ರಕರಣದಲ್ಲಿ ಈ ಯೋಜನೆಯು ನ್ಯಾಯಾಲಯದ ಮಧ್ಯಂತರ ಆದೇಶದ ಮೇರೆಗೆ ಕರ್ತವ್ಯ ನಿರ್ವಹಿಸುತ್ತಿರುವ ನೌಕರರಿಗೆ ಅನ್ವಯಿಸದಿರುವುದು ಸೂಕ್ತವಲ್ಲವೆಂದು ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಅನರ್ಹ ಪ್ರಕರಣಗಳಡಿ ನಮೂದಿಸಲಾಗಿದ್ದ ಕ್ರಮ ಸಂಖ್ಯೆ-2 ನ್ನು ಈ ಕೂಡಲೆ ಜಾರಿಗೆ ಬರುವಂತೆ ಹಿಂಪಡೆಯಲಾಗಿದೆ. ಉಳಿದಂತೆ ಬಾಕಿ ವಿವರಗಳಲ್ಲಿ ಯಾವುದೇ ಬದಲಾವಣೆಗಳಿಲ್ಲ. ಪರಿಷ್ಕೃತ ಸುತ್ತೋಲೆಯು ಈ ಕೂಡಲೇ ಜಾರಿಗೆ ಬರುತ್ತದೆ ಎಂದು ವ್ಯವಸ್ಥಾಪಕ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.

Megha
the authorMegha

Leave a Reply

error: Content is protected !!