ದಾವಣಗೆರೆ: ಲಂಚ ಪಡೆಯುತ್ತಿದ್ದ ವೇಳೆ ಜಿಲ್ಲೆಯ ಹರಿಹರ ತಾಲೂಕಿನ ಬೆಸ್ಕಾಂ ಸಹಾಯಕ ಅಭಿಯಂತರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಹರಿಹರ ನಗರ ಬೆಸ್ಕಾಂ ಕಚೇರಿಯ ಸಹಾಯಕ ಅಭಿಯಂತರ ಬಿ.ಎಂ. ಕರಿಬಸಯ್ಯ ಹಣದ ಸಮೇತ ಬೆಸ್ಕಾಂ ಕಚೇರಿಯಲ್ಲಿ ಲೋಕಾಯುಕ್ತಕ್ಕೆ ಸಿಕ್ಕಿ ಬಿದ್ದಿದ್ದಾರೆ.
ಐಪಿ ಪಂಪ್ಸೆಟ್ಗೆ ವಿದ್ಯುತ್ ಸಂಪರ್ಕಕ್ಕೆ ಅನುಮೋದನೆ ನೀಡಲು ಪ್ರತಿ ಸಂಪರ್ಕಕ್ಕೆ 5 ಸಾವಿರ ರೂಪಾಯಿಯಂತೆ ಬೇಡಿಕೆ ಇಟ್ಟು, ಅಂತಿಮವಾಗಿ 1 ಸಾವಿರ ರೂ.ಗೆ ಒಪ್ಪಿ 6 ಸಾವಿರ ರೂಪಾಯಿಯನ್ನು ಮಹೇಶ್ವರಪ್ಪ ಬೇವಿನಹಳ್ಳಿ ಅವರಿಂದ ಪಡೆಯುತ್ತಿದ್ದಾರೆ ಸಿಕ್ಕಿ ಬಿದ್ದಿದ್ದಾರೆ.
ಐಪಿ ಪಂಪ್ಸೆಟ್ಗಳಿಗೆ ವಿದ್ಯುತ್ ಸಂಪರ್ಕಕ್ಕೆ ಅನುಮೋದನೆ ನೀಡುವ ಮುಂಚೆಯೇ ಪ್ರತಿ ಸಂಪರ್ಕಕ್ಕೆ 5 ಸಾವಿರ ರೂ.ಗಳಿಗೆ ಆರೋಪಿ ಎಇ ಕರಿಬಸಯ್ಯ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಮಹೇಶ್ವರಪ್ಪ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ನಂತರ ಹರಿಹರ ನಗರ ಬೆಸ್ಕಾಂ ಕಚೇರಿಯಲ್ಲಿ ಸಹಾಯಕ ಇಂಜಿನಿಯರ್ ಬಿ.ಎಂ. ಕರಿಬಸಯ್ಯ ಮಹೇಶ್ವರಪ್ಪನಿಂದ 6 ಸಾವಿರ ರೂ. ಲಂಚ ಪಡೆಯುವಾಗ ಹಣದ ಸಮೇತ ಲೋಕಾಯುಕ್ತ ಅಧಿಕಾರಿಗಳು ಖೆಡ್ಡಕ್ಕೆ ಕೆಡವಿದ್ದಾರೆ.
ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಂ.ಎಸ್. ಕೌಲಾಪುರೆ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಕೆ.ಜಿ.ರಾಮಕೃಷ್ಣ, ಇನ್ಸ್ಪೆಕ್ಟರ್ಗಳಾದ ಎಚ್.ಎಸ್. ರಾಷ್ಟ್ರಪತಿ, ಆಂಜನೇಯ, ಪ್ರಭು ನೇತೃತ್ವದ ತಂಡ ಕಾರ್ಯಾಚರಣೆ ಕೈಗೊಂಡು, ಆರೋಪಿ ಕರಿಬಸಯ್ಯನನ್ನು ಬಂಧಿಸಿದ್ದು, ತನಿಖೆ ಮುಂದುವರಿಸಿದೆ.
ಕಷ್ಟಪಟ್ಟು ನಾಡಿನ ದೇಶದ ಜನರಿಗೆ ಅನ್ನ ನೀಡುವ ಅನ್ನದಾತನಿಗೆ ಆತನ ದುಡಿಮೆಯಿಂದಲೇ ಹಣ ಬರಬೇಕು. ಅದು ಕೂಡ ಸಾಲಸೋಲಮಾಡಿ ಬಡ್ಡಿಗೆ ಹಣ ತಂದು ವರ್ಷ, 6 ತಿಂಗಳ ಬಳಿಕ ಫಸಲು ಚೆನ್ನಾಗಿ ಬಂದರೆ ಒಂದಷ್ಟು ಲಾಭ ನೋಡಲು ಸಾಧ್ಯ. ಇಲ್ಲದಿದ್ದರೆ ಸಾಲವನ್ನು ತೀರಸಲಾಗಷ್ಟು ನಷ್ಟಹೊಂದುತ್ತಾನೆ.
ಇಂಥ ಅನ್ನದಾತರನ್ನು ತಿಂಗಳ ಮೊದಲ ವಾರದಲ್ಲಿ ವೇತನ ಪಡೆಯುವ ಈ ಕೆಲ ನೀಚ ಅಧಿಕಾರಿಗಳು ಲಂಚದ ರೂಪದಲ್ಲಿ ಕಿತ್ತು ತಿನ್ನುವುದು ಈ ದೇಶದ ನಾಡಿನ ಜನರ ದುರಾದೃಷ್ಟಕರ ಸಂಗತಿ. ಇಂಥ ಅಧಿಕಾರಿಗಳಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ನೊಂದ ಲಕ್ಷಾಂತರ ರೈತರು ಶಪಿಸುತ್ತಿದ್ದಾರೆ.