ಮೈಸೂರು: ನಾಡ ಅಧಿದೇವತೆ ಶ್ರೀ ಚಾಮುಂಡೇಶ್ವರಿಯ ವರ್ಧಂತಿ ಮಹೋತ್ಸವದ ಅಂಗವಾಗಿ ಮೈಸೂರು ಒಡೆಯರ್ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು, ಬೆಳ್ಳಿ ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ನೀಡಿದರು.
ಅರ್ಚಕ ಶಶಿಶೇಖರ್ ದೀಕ್ಷಿತ್ ನೇತೃತ್ವದಲ್ಲಿ ಪಲ್ಲಕ್ಕಿ ಮೇಲೆ ಚಾಮುಂಡೇಶ್ವರಿ ದೇವಿಯ ಮೂರ್ತಿಯನ್ನು ಕೂರಿಸಿ ದೇವಾಲಯದ ಸುತ್ತ ಮೆರವಣಿಗೆ ಮಾಡಲಾಯಿತು. ದೇಗುಲದ ಆವರಣದಲ್ಲೇ ಸಾವಿರಾರು ಭಕ್ತರು ಪಲ್ಲಕ್ಕಿ ಮೆರವಣಿಯನ್ನು ಕಣ್ತುಂಬಿ ಕೊಂಡರು.
ತಾಯಿಯ ವರ್ಧಂತಿ ಮಹೋತ್ಸವದ ಪ್ರಯುಕ್ತ ಬೆಟ್ಟದಲ್ಲಿ ಸಡಗರ ಸಂಭ್ರಮ ಮನೆಮಾಡಿದ್ದು, ಚಾಮುಂಡೇಶ್ವರಿ ದರ್ಶನಕ್ಕೆ ಸಹಸ್ರಾರು ಭಕ್ತರು ಆಗಮಿಸುತ್ತಿದ್ದಾರೆ. ಇನ್ನು ದೇವಿಯ ಜನ್ಮದಿನದ ಪ್ರಯುಕ್ತ ದೇವಾಲಯದ ಗರ್ಭಗುಡಿಯನ್ನು ವಿವಿಧ ಬಗೆಯ ಹೂವುಗಳಿಂದ ಅಲಂಕರಿಸಲಾಗಿದೆ.
ವರ್ಧಂತಿ ಮಹೋತ್ಸವದ ಪ್ರಯುಕ್ತ ರಾಜಮಾತೆ ಪ್ರಮೋದಾದೇವಿ ಒಡೆಯರ್ ಹಾಗೂ ರಾಜವಂಶಸ್ಥ, ಮೈಸೂರು ಸಂಸದರೂ ಆದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ನೀಡುವ ವೇಳೆ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಸೇರಿದಂತೆ ಹಲವು ಗಣ್ಯರು ಕೂಡ ಉಪಸ್ಥಿತರಿದ್ದರು.
ಇನ್ನು ಇಂದು ಶನಿವಾರ ರಾತ್ರಿ 8 ಗಂಟೆ ಬಳಿಕ ದರ್ಬಾರ್ ಉತ್ಸವ ನಡೆಯಲಿದ್ದು, ಅರಮನೆಯ ದರ್ಬಾರ್ ಮಾದರಿಯಲ್ಲೇ ಚಾಮುಂಡೇಶ್ವರಿ ಅಮ್ಮನವರಿಗೆ ದರ್ಬಾರ್ ಉತ್ಸವ ನೆರವೇರಲಿದೆ.