NEWSನಮ್ಮಜಿಲ್ಲೆ

ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಬದ್ಧ: ಉಸ್ತುವಾರಿ ಸಚಿವ ಮುನಿಯಪ್ಪ

ವಿಜಯಪಥ ಸಮಗ್ರ ಸುದ್ದಿ

ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಬದ್ಧ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್. ಮುನಿಯಪ್ಪ ತಿಳಿಸಿದ್ದಾರೆ.

ಇಂದು ದೇವನಹಳ್ಳಿಯ ಪ್ರವಾಸ ಮಂದಿರದಲ್ಲಿ ಮುಖಂಡರೊಂದಿಗೆ ಸಭೆ ನಡೆಸಿದ ನಂತರ ಮಾತನಾಡಿದ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಮುನಿಯಪ್ಪ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಮ್ಮ ಸರ್ಕಾರದ ಎರಡು ವರ್ಷಗಳ ಸಾಧನೆಯ ಸಮಾವೇಶವನ್ನು ಇದೇ ಏ.27ರಂದು ಚಾಲನೆ ನೀಡಲು ಜಿಲ್ಲೆಗೆ ಆಗಮಿಸುತ್ತಿದ್ದಾರೆ ಎಂದು ಹೇಳಿದರು.

ನಮ್ಮ ಜಿಲ್ಲೆಯಲ್ಲಿ ಮೊದಲ ಬಾರಿಗೆ ಈ ಸಾಧನಾ ಸಮಾವೇಶ ನಡೆಸುತ್ತಿದ್ದು ವಸತಿ ಇಲಾಖೆಯ ವತಿಯಿಂದ ದೇವನಹಳ್ಳಿ ಕ್ಷೇತ್ರದಲ್ಲಿ 2500 ಮನೆಗಳನ್ನು ನೀಡಲು ಈಗಾಗಲೇ ಸಚಿವರೊಂದಿಗೆ ಚರ್ಚೆ ನಡೆಸಿ ತೀರ್ಮಾನಿಸಲಾಗಿದ್ದು ಜಿಲ್ಲೆಯ ಎಲ್ಲ ತಾಲೂಕುಗಳಿಗೆ 10 ಸಾವಿರ ನಿವೇಶನಗಳಿಗೆ ಮನವಿ ಸಲ್ಲಿಸಿದ್ದು ಅದು ಮಂಜೂರಾತಿ ಯಾಗಲಿದೆ. ಪ್ರತಿ ತಾಲೂಕಿಗೆ 2500 ನಿವೇಶನಗಳನ್ನು ಹಂಚಿಕೆ ಮಾಡಿ ಜಿಲ್ಲೆಯ ಎಲ್ಲ ಅರ್ಹ ಫಲಾನುಭವಿಗಳಿಗೆ ಅನುಕೂಲಕರವಾಗಲಿದೆ ಎಂದರು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯದವರಿಗೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಸಹಾಯಧನದ ಯೋಜನೆಗಳು, ರಸ್ತೆಗಳ ಅಭಿವೃದ್ಧಿ ಮತ್ತು ಕೊಳವೆ ಬಾವಿಗಳನ್ನು ಮಂಜೂರು ಮಾಡಿಸಿದ್ದು ಅದು ಅರ್ಹ ಫಲಾನುಭವಿಗಳಿಗೆ ಅನುಕೂಲಕರವಾಗಲಿದೆ ಎಂದರು.

ಕುಡಿಯುವ ನೀರಿಗೆ ಈಗಾಗಲೇ ಮಂಜೂರಾತಿ ದೊರಕಿದ್ದು ಕಾವೇರಿ ನೀರನ್ನು ವಿಜಯಪುರ, ದೇವನಹಳ್ಳಿ ಭಾಗದವರೆಗೂ 5ನೇ ಹಂತದಲ್ಲಿ ನೀಡಲು ನಿರ್ಧರಿಸಿದ್ದ ಯೋಜನೆ 4ನೇ ಹಂತದಲ್ಲಿ ಕೊಡಲು ತೀರ್ಮಾನವನ್ನು ಕೈಗೊಳ್ಳಲಾಗಿದೆ. ವೃಷಭಾವತಿ ನೀರನ್ನು ಎರಡನೇ ಹಂತದಲ್ಲಿ ಈ ಭಾಗಕ್ಕೆ ಹರಿಸಲು ಕ್ರಮವಹಿಸಲಾಗುತ್ತಿದೆ. ಈ ಭಾಗದ ಪಂಚಾಯಿತಿ ಮಟ್ಟದ ಕೆರೆಗಳಿಗೆ ನೀರು ತುಂಬಿಸಲು ಸಣ್ಣ ನೀರಾವರಿ ಸಚಿವರಿಗೆ ಮನವಿ ಸಲ್ಲಿಸಿದ್ದು ಈ ಕಾರ್ಯವು ಪ್ರಗತಿಯಲ್ಲಿದೆ ಎಂದು ತಿಳಿಸಿದರು.

ಇನ್ನು 25 ಕೋಟಿ ರೂ.ಗಳ ವೆಚ್ಚದಲ್ಲಿ ದೇವನಹಳ್ಳಿಯ ರಸ್ತೆಗಳ ಅಭಿವೃದ್ಧಿ ಮತ್ತು ದ್ವಿಪಥ ರಸ್ತೆ ಕಾಮಗಾರಿ ಪ್ರಗತಿಯಲಿದೆ. ನಮ್ಮ ಜಿಲ್ಲೆಯುಲ್ಲಿ ರೈತರು ಕಚೇರಿಗೆ ಅಲೆಯವುದನ್ನು ತಪ್ಪಿಸುವ ಸಲುವಾಗಿ ಪೋಡಿ ಮುಕ್ತ ಜಿಲ್ಲೆಯಾಗಿ ರಾಜ್ಯದಲ್ಲಿ ಮೊದಲನೇ ಸ್ಥಾನದಲ್ಲಿದೆ. ಸಾರ್ವಜನಿಕರಿಗೆ ಅನುಕೂಲವಾಗಲು ನಮ್ಮ ಮೆಟ್ರೋ ಯೋಜನೆಯು ದೇವನಹಳ್ಳಿಯ ವರೆಗೂ ಮಂಜೂರಾಗಿದ್ದು ಮುಂದಿನ ದಿನಗಳಲ್ಲಿ ವಿಜಯಪುರದವರೆಗೂ ವಿಸ್ತರಣೆ ಮಾಡಲು ಯೋಜನೆಯನ್ನು ರೂಪಿಸಿ ಅನುಕೂಲ ಮಾಡಲಾಗುವುದು ಎಂದರು.

ಒಟ್ಟಾರೆಯಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಹಲವಾರು ಅಭಿವೃದ್ಧಿ ಯೋಜನೆಗಳನ್ನು ರೂಪಿಸುವ ಮೂಲಕ ಜಿಲ್ಲೆಯ ಸಮಗ್ರ ಹಾಗೂ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗಲಿದೆ. ಸರ್ಕಾರದ ಎರಡು ವರ್ಷಗಳ ಸಾಧನಾ ಸಮಾವೇಶದಲ್ಲಿ ಜಿಲ್ಲೆಯಾದ್ಯಂತ ಹೆಚ್ವಿನ ಮಟ್ಟದಲ್ಲಿ ಜನಸಾಮಾನ್ಯರು ಸೇರುವ ನಿರೀಖ್ಷೆ ಇದೆ ಎಂದರು.

ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ರಾಜಣ್ಣ, ತಾಲೂಕು ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಜಗನ್ನಾಥ್, ಬಯ್ಯಪ್ಪಾ ಸದಸ್ಯರಾದ ಪ್ರಸನ್ನಕುಮಾರ್,ಕೃಷಿಕ ಸಮಾಜದ ಅಧ್ಯಕ್ಷರಾದ ರವಿಕುಮಾರ್ ಹಾಗೂ ತಾಲೂಕಿನ ಪ್ರಮುಖ ಮುಖಂಡರು ಉಪಸ್ಥಿತರಿದ್ದರು.

Deva
the authorDeva

Leave a Reply

error: Content is protected !!