NEWSನಮ್ಮರಾಜ್ಯ

ನ್ಯಾಯಾಧೀಶರು ಹಿಂದಿನ ಮೊಘಲರಂತೆ ವರ್ತಿಸುವುದು ಸಲ್ಲ: ಹೈ ಕೋರ್ಟ್‌ ವಿಭಾಗೀಯ ಪೀಠ ಖಡಕ್‌ ಸೂಚನೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ನ್ಯಾಯಾಧೀಶರು ಹಿಂದಿನ ಕಾಲದ ಮೊಘಲರಂತೆ ವರ್ತಿಸದೆ ಕಾನೂನಿನಡಿಯೇ ಕೆಲಸ ಮಾಡಬೇಕು ಎಂದು ಕರ್ನಾಟಕ ಉಚ್ಚನ್ಯಾಯಾಲಯದ ವಿಭಾಗೀಯ ಪೀಠ ಖಡಕ್‌ ಸೂಚನೆ ನೀಡಿದೆ.

ಕಾನೂನಿನಡಿ 12 ವರ್ಷ ಮಾತ್ರ ಅಂಗಡಿ ಗುತ್ತಿಗೆ ನವೀಕರಿಸಲು ಅವಕಾಶವಿದೆ. ಆದರೆ, ಅದನ್ನು 20 ವರ್ಷಗಳವರೆಗೆ ವಿಸ್ತರಿಸಲು ನಿರ್ಧರಿಸಿರುವುದು ಕಾನೂನು ಬಾಹಿರ ಎಂದು ಅಭಿಪ್ರಾಯಪಟ್ಟ ದ್ವಿಸದಸ್ಯ ನ್ಯಾಯಪೀಠ ಏಕ ಸದಸ್ಯ ನ್ಯಾಯಪೀಠದ ಆದೇಶವನ್ನು ರದ್ದುಪಡಿಸಿ ಆದೇಶ ಹೊರಡಿಸಿದೆ.

ಅಂಗವಿಕಲ ವ್ಯಕ್ತಿಯೊಬ್ಬರಿಗೆ 12 ವರ್ಷಗಳ ಅವಧಿಗೆ ನೀಡಿದ್ದ ಗುತ್ತಿಗೆಯನ್ನು 20 ವರ್ಷಕ್ಕೆ ವಿಸ್ತರಿಸಲು ಸೂಚಿಸಿದ್ದ ಏಕ ಸದಸ್ಯ ಪೀಠದ ಆದೇಶ ಪ್ರಶ್ನಿಸಿ ಚನ್ನಪಟ್ಟಣದ ಪುರಸಭೆ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಹಾಗೂ ನ್ಯಾಯಮೂರ್ತಿ ರಾಮಚಂದ್ರ ಡಿ.ಹುದ್ದಾರ್ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಪ್ರಕರಣ ಸಂಬಂಧ ದಾಖಲೆಗಳನ್ನು ಪರಿಶೀಲಿಸಿದ ದ್ವಿಸದಸ್ಯ ನ್ಯಾಯಪೀಠ, ಗುತ್ತಿಗೆಯನ್ನು ಸಿದ್ದರಾಮು ಎಂಬವರಿಗೆ ಅಂಗವಿಕಲರ ಕಾಯ್ದೆಯಡಿ ಅಸಾಮರ್ಥ್ಯದ ನಿರ್ದಿಷ್ಟ ಆಧಾರದ ಮೇಲೆ ನೀಡಲಾಗಿದೆ. ಅಲ್ಲದೆ, ಈ ಕುರಿತಾಗಿ 2009ರ ಅ.26ರಂದು ಸರ್ಕಾರ ಹೊರಡಿಸಿರುವ ಸುತ್ತೋಲೆಯಲ್ಲಿ ಗುತ್ತಿಗೆಯನ್ನು ಗರಿಷ್ಠ ಅವಧಿ 12 ವರ್ಷಗಳ ಮಾತ್ರ ನವೀಕರಿಸಲು ಅವಕಾಶವಿದೆ.

ಹೀಗಾಗಿ ಈ ರೀತಿಯ ಹಂಚಿಕೆಯನ್ನು ಆನುವಂಶೀಯವಾಗಿ ಪರಿಗಣಿಸಲಾಗುವುದಿಲ್ಲ. ಹಂಚಿಕೆದಾರನ ಮರಣದ ನಂತರ ಗುತ್ತಿಗೆ ಕೊನೆಗೊಳ್ಳುತ್ತದೆ. ಹಾಗಾಗಿ ಪತ್ನಿ ಹಾಗೂ ಮಕ್ಕಳು ಯಾವುದೇ ರೀತಿಯಲ್ಲಿ ಆನುವಂಶೀಯವಾಗಿ ಏನನ್ನೂ ಪಡೆಯುವುದಿಲ್ಲ ಎಂದು ಹೇಳಿದ ನ್ಯಾಯಪೀಠ, ಅಷ್ಟೇ ಅಲ್ಲದೆ 2017ರ ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ನಿಯಮಗಳ ಪ್ರಕಾರ ಅಂಗವಿಕಲರು ಕೊನೆಯುಸಿರೆಳೆದ ನಂತರ ಅವರನ್ನು ಅವಲಂಬಿಸಿರುವವರ ರಕ್ಷಿಸುವ ಉದ್ದೇಶ ಹೊಂದಿಲ್ಲ ಎಂದು ಪೀಠ ತಿಳಿಸಿತು.

ಈ ವೇಳೆ ಪ್ರಕರಣದಲ್ಲಿ ಏಕಸದಸ್ಯ ಪೀಠ ಹೊರಡಿಸಿದ ಆದೇಶ ಉದ್ದೇಶಿಸಿ ನ್ಯಾಯಧೀಶರು ಮೊಘಲರಂತೆ ವರ್ತಿಸುವಂತಿಲ್ಲ. ಕಾನೂನು ವ್ಯಾಪ್ತಿ ಮೀರಿ ಆದೇಶ ಹೊರಡಿಸಬಾರದು. ಸಾರ್ವಜನಿಕ ಹಿತಾಸಕ್ತಿಯನ್ನು ಪರಿಗಣಿಸಿ ಕಾನೂನುಬದ್ಧವಾಗಿ ಆದೇಶ ನೀಡಬೇಕಾಗುತ್ತದೆ. ನ್ಯಾಯ ಒದಗಿಸುವ ನೆಪದಲ್ಲಿ ಕಾನೂನು ಮೀರಿ ಕಾರ್ಯಾಚರಿಸಲು ಅಧಿಕಾರವಿಲ್ಲ ಎಂದು ಹೇಳಿತು.

ಇನ್ನು ಪತಿ ಳೆದುಕೊಂಡ ಪತ್ನಿ ವಿರುದ್ಧ ಅನುಕಂಪ ವ್ಯಕ್ತಪಡಿಸಿದ ನ್ಯಾಯಪೀಠ, ಮಹಿಳೆ ತನ್ನ ವ್ಯವಹಾರವನ್ನು ಬೇರೆಡೆ ಬದಲಾಯಿಸಲು ಕಾಲಾವಕಾಶ ನೀಡುವಂತೆ ಅರ್ಜಿದಾರರಿಗೆ ನಿರ್ದೇಶಿಸಿದೆ. ವಿಧವೆಯನ್ನು ತಕ್ಷಣವೇ ಖಾಲಿ ಮಾಡಲು ಕೇಳಿದರೆ, ಅವಳು ಮತ್ತು ಅಪ್ರಾಪ್ತ ಮಕ್ಕಳು ಬಹಳ ಕಷ್ಟಕ್ಕೆ ಒಳಗಾಗಬಹುದು. ವ್ಯಾಪಾರವನ್ನು ಬೇರೆ ಸ್ಥಳಕ್ಕೆ ಸ್ಥಳಾಂತರಿಸಲು ಅಂಗಡಿ ಆವರಣವನ್ನು ಖಾಲಿ ಮಾಡಲು ಸಮಯಾವಕಾಶ ನೀಡಬೇಕಾಗಿದೆ ಎಂದು ಪೀಠ ಆದೇಶಿಸಿದೆ.

ಪ್ರಕರಣ ಏನು?: 2009ರ ಸೆಪ್ಟಂಬರ್​ನಲ್ಲಿ ಹರಾಜಿನ ಮೂಲಕ ಕೆಲವು ಶಾಪಿಂಗ್ ಮಳಿಗೆಗಳನ್ನು ಗುತ್ತಿಗೆ ಕರೆದು ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಈ ವೇಳೆ ಶೇ.80 ಅಂಗವೈಕಲ್ಯ ಹೊಂದಿರುವ ಸಿದ್ದರಾಮು ಎಂಬವರಿಗೆ ಒಂದು ಮಳಿಗೆ ಮಂಜೂರಾಗಿತ್ತು.

1995ರ ವಿಶೇಷಚೇತನರ ಕಾಯ್ದೆಯಡಿಯಲ್ಲಿ ಹಾಗೂ 2003ರ ವಿಶೇಷಚೇತನ ವ್ಯಕ್ತಿಗಳ ಹಕ್ಕುಗಳ ಕಾಯ್ದೆಯಡಿಯಲ್ಲಿ 12 ವರ್ಷ ಗುತ್ತಿಗೆಗೆ ನೀಡಲಾಯಿತು. ವಿಫಲವಾದರೆ ಅವರ ಠೇವಣಿ ಮುಟ್ಟುಗೋಲು ಹಾಕಿಕೊಳ್ಳಲಾಗುವುದಾಗಿ ಆದೇಶಿಸಿತ್ತು. ಈ ನಡುವೆ 12 ವರ್ಷಕ್ಕಿರುವ ಗುತ್ತಿಗೆ ಅವಧಿಯನ್ನು 20 ವರ್ಷಗಳವರೆಗೆ ವಿಸ್ತರಿಸುವಂತೆ ನ್ಯಾಯಾಲಯದ ಮೊರೆ ಹೋಗಿದ್ದು, ನ್ಯಾಯಲಯ ಅವರ ಮನವಿ ಅಂಗಕರೀಸಿತ್ತು.

ಇನ್ನು ಈ ಪ್ರಕರಣ ವಿಚಾರಣಾ ಹಂತದಲ್ಲಿ ಇರುವಾಗಲೇ ಸಿದ್ದರಾಮು ನಿಧನರಾದರು. ಬಳಿಕ ಅವರ ಪತ್ನಿ ಪ್ರಕರಣವನ್ನು ಮುಂದುವರಿಸಿದ್ದರು. ಆ ವೇಳೆ ಹೈಕೋರ್ಟ್‌ ಏಕಸದಸ್ಯ ಪೀಠ 20 ವರ್ಷಗಳವರೆಗೆ ವಿಸ್ತರಿಸುವಂತೆ ಆದೇಶ ಹೊರಡಿಸಿತ್ತು.

Leave a Reply

error: Content is protected !!
LATEST
ಮೈತ್ರಿ ತೆಕ್ಕೆಗೆ ಬನ್ನೂರು ಪುರಸಭೆ: ಜೆಡಿಎಸ್‌ಗೆ ಅಧ್ಯಕ್ಷ ಗದ್ದುಗೆ, ಬಿಜೆಪಿಗೆ ಉಪಾಧ್ಯಕ್ಷ ಗಾದಿ ರಾಜ್ಯದ ಆರು ಪ್ರತ್ಯೇಕ ಸ್ಥಳಗಳಲ್ಲಿ ಅಪಘಾತ: 13 ಮಂದಿ ಸಾವು, ಹಲವರಿಗೆ ಗಾಯ ಯಡಿಯೂರು ಕೆರೆ: ಗಣಪತಿ ವಿಸರ್ಜನಾ ಕಲ್ಯಾಣಿಗೆ ನೀರು ತುಂಬಿಸಿದ ಬಿಬಿಎಂಪಿ ತಂದೆ ನಿಧನರಾದ ದುಃಖದಲ್ಲಿರುವ ನೌಕರನಿಗೆ ರಜೆ ಕೊಡದೆ ಗೈರು ತೋರಿಸಿದ್ದು ಅಲ್ಲದೆ ಕಾರಣ ಕೇಳಿ ನೋಟಿಸ್‌ ಕೊಟ್ಟ ಅಧಿಕಾರಿ... KKRTC ಬಸ್‌-ಶಾಲಾ ಬಸ್‌ ಮುಖಾಮುಖಿ ಡಿಕ್ಕಿ: ಇಬ್ಬರು ಮೃತ- 25ಕ್ಕೂ ಹೆಚ್ಚು ಮಕ್ಕಳಿಗೆ ಗಾಯ KSRTC: 38 ತಿಂಗಳ ವೇತನ ಹೆಚ್ಚಳ ಹಿಂಬಾಕಿಗೆ ಆಗ್ರಹಿಸಿ BMS ಪ್ರತಿಭಟನೆ- ಸರ್ಕಾರದ ವಿರುದ್ಧ ಕಿಡಿ MSRTC: ನೌಕರರ ಮುಷ್ಕರಕ್ಕೆ ಮಣಿದು 6500 ರೂ. ವೇತನ ಹೆಚ್ಚಳಕ್ಕೆ ಒಪ್ಪಿದ ಸರ್ಕಾರ- ಧರಣಿ ವಾಪಸ್‌ MSRTC: ತೀವ್ರಗೊಂಡ ನೌಕರರ ಮುಷ್ಕರ- 11 ಸಂಘಟನೆಗಳ ಒಗ್ಗಟ್ಟು- ನಿಗಮಕ್ಕೆ ನಡುಕ ಚಾಮುಂಡಿಬೆಟ್ಟದಲ್ಲಿ ಧೂಮಪಾನ, ಮದ್ಯಪಾನ, ಗುಟ್ಕಾ ನಿಷೇಧ: ಸಿಎಂ ಘೋಷಣೆ ಪೋಡಿ ಮುಕ್ತ ಅಭಿಯಾನ, ಪೌತಿ ಖಾತೆ ಆಂದೋಲನಕ್ಕೆ ಕ್ರಮ: ಕಂದಾಯ ಸಚಿವ ಕೃಷ್ಣ ಬೈರೇಗೌಡ