CRIMENEWSನಮ್ಮರಾಜ್ಯ

KSRTC: ಒಣ ಮೆಣಸಿನ ಕಾಯಿ ಅವಾಂತರ- ಸಂಕಷ್ಟದಲ್ಲಿ ಸಿಲುಕಿದ ಇಬ್ಬರು ಕಂಡಕ್ಟರ್‌

ವಿಜಯಪಥ ಸಮಗ್ರ ಸುದ್ದಿ
  • ಒಣ ಮೆಣಸಿನ ಕಾಯಿ ತೆಗೆದುಕೊಂಡು ಹೋಗುವುದಕ್ಕೆ ಅವಕಾಶ ಕೊಟ್ಟ ನಿರ್ವಾಹಕನಿಗೆ ತನಿಖಾ ಸಿಬ್ಬಂದಿಯಿಂದ ಮೆಮೋ
  • ಅವಕಾಶ ಕೊಡದ ಕಂಡಕ್ಟರ್‌ಗೆ ಘಟಕ ವ್ಯವಸ್ಥಾಪಕರಿಂದ ಮೆಮೋ!

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳಲ್ಲಿ ಜಾರಿಯಲ್ಲಿರುವ ಕೆಲ ನಿಯಮಗಳು ಚಾಲನಾ ಸಿಬ್ಬಂದಿಗಳಿಗೆ ಅತ್ತ ದರಿ ಇತ್ತ ಪುಲಿ ಎಂಬಂತಿವೆ. ಕಾರಣ ನಿಯಮದಂತೆ ನಡೆದುಕೊಂಡರೂ ಶಿಕ್ಷೆ ಅನುಭವಿಸಬೇಕು ನಡೆದುಕೊಳ್ಳದಿದ್ದರೂ ಶಿಕ್ಷೆ ಅನುಭವಿಸಬೇಕಿದೆ.

ಇದಕ್ಕೆ ತಾಜಾ ನಿದರ್ಶನ ಒಂದನ್ನು ಕೇವಲ ಎರಡೇ ದಿನಗಳ ಅಂತರದಲ್ಲಿ ನಾವು ಕಾಣಬಹುದಾಗಿದೆ. ಒಂದು ಕಡೆ ಪ್ರಯಾಣಿಕರೊಬ್ಬರು ಒಣ ಮೆಣಸಿಕಾಯಿಯ ಚೀಲವೊಂದನ್ನು ತೆಗೆದುಕೊಂಡು ಬಸ್‌ನಲ್ಲಿ ಪ್ರಾಯಾಣಿಸುವುದಕ್ಕೆ ಅವಕಾಶ ಮಾಡಿಕೊಡುವ ಮೂಲಕ ಸಂಸ್ಥೆಯ ನಿಯಮವನ್ನು ಗಾಳಿ ತೂರಿದ್ದೀರಿ ಎಂದು ಅಪಾಧಿಸಿ ತಾಳಿಕೋಟೆ ಮಾರ್ಗದ ಸಾರಿಗೆ ಬಸ್‌ ನಿರ್ವಾಹಕರಿಗೆ ಏ.19ರಂದು ತನಿಖಾ ಸಿಬ್ಬಂದಿಗಳು ಮೆಮೋ ಕೊಟ್ಟಿದ್ದಾರೆ.

ಇದಾದ ಬಳಿಕ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಉ.ಕ.ವಿಭಾಗ ಯಲ್ಲಾಪುರ ಘಟಕದ ವ್ಯವಸ್ಥಾಪಕರು ಪ್ರಯಾಣಿಕರೊಬ್ಬರು ಏ.20ರಂದು ಒಣ ಮೆಣಸಿನ ಕಾಯಿಯನ್ನು ಬಸ್‌ನಲ್ಲಿ ತೆಗೆದುಕೊಂಡು ಪ್ರಯಾಣಿಸುವುದಕ್ಕೆ ನೀವು ಅನುವು ಮಾಡಿಕೊಡದೆ ಪ್ರಯಾಣಿಕರಿಗೆ ತೊಂದರೆ ಕೊಡುವ ಮೂಲಕ ಸಂಸ್ಥೆಯ ನಿಮವನ್ನು ಉಲ್ಲಂಘನೆ ಮಾಡಿ ಬೇಜವಾಬ್ದಾರಿಯಿಂದ ವರ್ತಿಸಿದ್ದೀರಿ. ಏಕೆ ನಾವು ನಿಮ್ಮ ವಿರುದ್ಧ ಕ್ರಮ ತೆಗೆದುಕೊಳ್ಳಬಾರದು ಎಂದು ಕಾರಣ ಕೇಳಿ ಮೆಮೋ ಕೊಟ್ಟಿದ್ದಾರೆ.

ಈ ರೀತಿ ಅಧಿಕಾರಿಗಳು ದ್ವಿಮುಖ ನಡೆ ಅನುಸರಿಸಿದರೆ ನಿರ್ವಾಹಕರು ಕರ್ತವ್ಯ ನಿರ್ವಹಿಸುವುದಾದರೂ ಹೇಗೆ? ಒಂದು ಕಡೆ ಒಣ ಮೆಣಸಿನಕಾಯಿ ಹಾಕಿದರೆ ಅದಕ್ಕೂ ಮೆಮೋ ಕೊಡುತ್ತಾರೆ ಇನ್ನೊಂದು ಕಡೆ ಹಾಕಿಸಿಕೊಳ್ಳದಿದ್ದರೆ ಅದಕ್ಕೂ ಮೆಮೋ ಕೊಡುತ್ತಾರೆ. ಹೀಗಾಗಿ ನಿರ್ವಾಹಕರು ಕರ್ತವ್ಯ ನಿರ್ವಹಿಸುವುದು ತುಂಬ ಕಷ್ಟಕರವಾಗುತ್ತಿದೆ.

ಹೀಗೆ ಅಧಿಕಾರಿಗಳು ತಮಗೆ ಮನ ಬಂದಂತೆ ಅಧಿಕಾರ ಚಲಾಯಿಸಿ ವರ್ತಿಸಿದರೆ  ನಿರ್ವಾಹಕರು ಏನು ಮಾಡುವುದು. ಒಂದು ಸ್ಪಷ್ಟವಾದ ನಿರ್ದೇಶನ ನೀಡಿ ಹಾಕುವುದಾದರೆ ಹಾಕಬೇಕು ಬೇಡವೆಂದರೆ ಬೇಡವೆಂದು ಆದೇಶ ಹೊರಡಿಸಬೇಕು. ಹೀಗೆ ಸಮಯಕ್ಕೆ ತಕ್ಕಂತೆ ಮನಬಂದಂತೆ ವರ್ತಿಸಿದರೆ ಹೇಗೆ ಎಂದು 4 ನಿಗಮಗಳ ನೌಕರರು ಪ್ರಶ್ನಿಸುತ್ತಿದ್ದಾರೆ.

ಯಲ್ಲಾಪುರ ಘಟಕ ವ್ಯವಸ್ಥಾಪಕರು ಕೊಟ್ಟಿರುವ ಮೆಮೋದಲ್ಲೇನಿದೆ?: ನಾನು ಘಟಕ ವ್ಯವಸ್ಥಾಪಕ/ ಶಿಸ್ತುಪಾಲನಾಧಿಕಾರಿ ವಾ.ಕ.ರ.ಸಾ.ಸಂಸ್ಥೆ ಉ.ಕ.ವಿಭಾಗ ಶಿರಸಿ ಯಲ್ಲಾಪುರ ಘಟಕ ನಿಮ್ಮ ಮೇಲೆ ಆರೋಪಗಳ ಬಗ್ಗೆ ನಿಜ ಸಂಗತಿಗಳನ್ನು ತಿಳಿಯಲು ಕೆಲವು ಆಧಾರಗಳು ಪುಷ್ಟಿಕರಿಸುತ್ತೇನೆಂದು ಅಭಿಪ್ರಾಯ ಪಟ್ಟಿರುತ್ತೇನೆ. ಆದ್ದರಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸೇವೆ (ನಡವಳಿಕೆ ಶಿಸ್ತಿ) 1971 ರ ನಿಯಮಾವಳಿ 22 ವಿಧಿಯ ಪ್ರಕಾರ ಬಸವರಾಜ ಅಂಬಿಗೇರ ಚಾಲಕ/ನಿರ್ವಾಹಕರಾದ (ಬಿಲ್ಲೆ ಸಂ:1581) ನಿಮ್ಮ ಮೇಲೆ ಈ ಕೇಳ ಕಾಣಿಸಿದ ಆರೋಪಗಳನ್ನು ಮಂಡಿಸಲಾಗಿದೆ.

ದಿನಾಂಕ: 20/04/2025 ರಂದು ಅನುಸೂಚಿ 76/77 ರ ಮೇಲೆ ನಿರ್ವಾಹಕರಾಗಿ ಕರ್ತವ್ಯದ ಮೇಲಿದ್ದ ವೇಳೆ ಅಂದರೆ 20/04/2025ರ ಬೆಳಗ್ಗೆ 11:30ರ ವೇಳೆಗೆ ಮಾಗೋಡ ಸರದಿಯಲ್ಲಿ ತಾವು ಯಲ್ಲಾಪುರ ಬಸ್ ನಿಲ್ದಾಣದಿಂದ ಕಾರ್ಯಾಚರಿಸುವಾಗ ಯಲ್ಲಾಪುರದಿಂದ ಮಾಗೋಡ ಕಾಲೋನಿಗೆ ಪ್ರಯಾಣಿಸಲು ಬಂದ ಮಹಿಳಾ ಪ್ರಯಾಣಿಕರಿಗೆ ತಾವು ಒಣ ಮೆಣಸನ್ನು ಒಯ್ಯುವ ಹಾಗಿಲ್ಲ ಎಂದು ಹೇಳಿ ಬಸ್ಸಿನಿಂದ ಕೆಳಗೆ ಇಳಿಸಿರುತ್ತೀರಿ. ಈ ರೀತಿ ತಾವು ನೌಕರನಿಗೆ ತಕ್ಕುದಲ್ಲದ ರೀತಿಯಲ್ಲಿ ಕರ್ತವ್ಯ ನಿರ್ವಹಿಸಿದ್ದು ತಮ್ಮ ಮೇಲೆ ಏಕೆ ಶಿಸ್ತಿನ ಕ್ರಮ ಕೈಗೋಳ್ಳಬಾರದೆಂದು. ಈ ಆರೋಪಣ ಪತ್ರ ತಲುಪಿದ 3 ದಿನದೋಳಗಾಗಿ ಲಿಖಿತ ಉತ್ತರ ಸಲ್ಲಿಸಬೇಕು.

ನೀವು ಒಂದು ಪಕ್ಷ ಮೇಲೆ ಗೋತ್ತು ಪಡಿಸಿದ ಆರೋಪಗಳ ಬಗ್ಗೆ 3 ದಿನಗಳಲ್ಲಿ ಲಿಖಿತ ಉತ್ತರ ನೀಡದೇ ಹೋದಲ್ಲಿ ನಿಮ್ಮಿಂದ ಯಾವುದೇ ವಿವರಣೆ ಇಲ್ಲವೆಂದು ಊಹಿಸಿ ಶಿಸ್ತು ಮತ್ತು ನಡವಳಿಕೆ ನಿಯಮದ ಪ್ರಕಾರ ಏಕಪಕ್ಷಿಯವಾಗಿ ಕ್ರಮ ಕೈಗೋಳ್ಳಲಾಗುವುದು ಎಂದು ಘಟಕ ವ್ಯವಸ್ಥಾಪಕರು ಮೆಮೋ ಕೊಟ್ಟಿದ್ದಾರೆ.

ಇನ್ನು ಸಿ.ವಿ.ಸೊನ್ನದ ಎಂಬ ನಿರ್ವಾಹಕರಿಗೆ ನೀವು ಬಸ್‌ನಲ್ಲಿ ಒಣ ಮೆಣಸಿನ ಕಾಯಿ ತೆಗೆದುಕೊಂಡು ಹೋಗುವುದಕ್ಕೆ ಅವಕಾಶ ಮಾಡಿಕೊಡುವ ಮೂಲಕ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಿಯಮವನ್ನು ಅಂದರೆ ಒಣ ಮೆಣಸಿನ ಕಾತಿ ಘಾಟು ಇರುವ ವಸ್ತುವನ್ನು ತೆಗೆದುಕೊಂಡು ಹೋಗಬಾರದು ಎಂಬ ನಿಯಮವನ್ನು ಉಲ್ಲಂಘನೆ ಮಾಡುವ ಮೂಲಕ ಸಂಸ್ಥೆಯ ನಿಯಮವನ್ನು ಪಾಲಿಸುವಲ್ಲಿ ವಿಫಲರಾಗಿದ್ದೀರಿ. ಹೀಗಾಗಿ ನಿಮ್ಮ ವಿರುದ್ಧ ಏಕೆ ಶಿಸ್ತು ಕ್ರಮ ಜರುಗಿಸಬಾರದು ಎಂದು ಕಾರಣ ಕೇಳಿ ತನಿಖಾ ಸಿಬ್ಬಂದಿಗಳು ಏ.19ರಂದು ಮೆಮೋ ಕೊಟ್ಟಿದ್ದಾರೆ.

ಇನ್ನು ಇದಕ್ಕೆ ಸಂಬಂಧಪಟ್ಟ ಮೇಲಧಿಕಾರಿಗಳು ಉತ್ತರ ಕೊಡಬೇಕು. ಇಲ್ಲಿ ನಿರ್ವಾಹಕರು ಯಾವ ನಿಯಮವನ್ನು ಪಾಲನೆ ಮಾಡಬೇಕು. ಒಂದು ಕಡೆ ಇಳಿಸಿರುವುದು ತಪ್ಪು ಎಂದು ಹೇಳುತ್ತೀರಿ ಮತ್ತೊಂದುಕಡೆ ಒಣ ಮೆಣಸಿನ ಕಾಯಿ ತೆಗೆದುಕೊಂಡು ಹೋಗುವುದಕ್ಕೆ ಅವಕಾಶ ಮಾಡಿಕೊಟ್ಟಿರುವುದು ತಪ್ಪು ಎನ್ನುತ್ತೀರಿ ಹೀಗಾದರೆ ನೌಕರರು ಯಾವ ರೀತಿ ಕೆಲಸ ಮಾಡಬೇಕು. ನೀವೆ ಉತ್ತರ ಕೊಡಬೇಕು.

Deva
the authorDeva

Leave a Reply

error: Content is protected !!