NEWSನಮ್ಮಜಿಲ್ಲೆನಮ್ಮರಾಜ್ಯ

KSRTC ನೌಕರರ ವೇತನ ಹೆಚ್ಚಳ ಸಂಬಂಧ ಪ್ರಕರಣ: ಜೂನ್‌ 9ರಂದು ವಿಚಾರಣೆ – ವಕೀಲ ಶಿವರಾಜು

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಅಧಿಕಾರಿಗಳು/ ನೌಕರರ ವೇತನ ಹೆಚ್ಚಳ ಸಂಬಂಧ ಸರ್ಕಾರ ಹಾಗೂ ಸಾರಿಗೆ ನಿಗಮಗಳ ಆಡಳಿತ ಮಂಡಳಿ ವಿರುದ್ಧ ಕಳೆದ ಮಾರ್ಚ್‌ನಲ್ಲಿ ಅರ್ಜಿ ಹಾಕಿದ್ದು ಅದರ ವಿಚಾರಣೆ ನಾಳೆ ನಡೆಯಬೇಕಿತ್ತು ಆದರೆ, ಕೆಲ ಕಾರಣಗಳಿಂದ ಇದೇ ಜೂನ್‌ 9ಕ್ಕೆ ಕೋರ್ಟ್‌ ಹಾಲ್‌ಗೆ ಬರಲಿದೆ ಎಂದು ಸುಪ್ರೀಂ ಕೋರ್ಟ್‌ ಮತ್ತು ಹೈಕೋರ್ಟ್‌ವಕೀಲ ಎಚ್‌.ಬಿ.ಶಿವರಾಜು ತಿಳಿಸಿದ್ದಾರೆ.

ಕಳೆದ 2020ರ ಜನವರಿ 1ರಿಂದ ಅನ್ವಯವಾಗುವಂತೆ ಶೇ.15ರಷ್ಟು ಮೂಲ ವೇತನ ಹೆಚ್ಚಳ ಮಾಡಿರುವ 38 ತಿಂಗಳ ಹಿಂಬಾಕಿ ಹಾಗೂ 2024ರ ಜನವರಿ 1ರಿಂದ ಜಾರಿಗೆ ಬರುವಂತೆ ವೇತನ ಹೆಚ್ಚಳವಾಗಬೇಕಿದ್ದು 16ತಿಂಗಳಗಳು ಕಳೆದರೂ ಸರ್ಕಾರ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ.

ಈ ವೇಳೆ ರಾಜ್ಯ ಸರ್ಕಾರದ ಪರ ಹಾಗೂ ಸಾರಿಗೆ ಸಂಸ್ಥೆಯ ಪರ ವಕೀಲರು ವಕಾಲತ್ತು ಹಾಕಲು ಏಪ್ರಿಲ್‌ 7ಂದು 2 ವಾರಗಳ ಕಾಲ ಸಮಯ ಕೇಳಿದ್ದರಿಂದ ನ್ಯಾಯಾಲಯವು ಅವರಿಗೆ ಅವಕಾಶ ಕೊಟ್ಟು ವಿಚಾರಣೆಯನ್ನು ಮುಂದೂಡಿತ್ತು. ಆದರೆ, ಈ ನಡುವೆ ನ್ಯಾಯಾಲಯದಿಂದ ಜನರೇಟರ್‌ ಆಗಿರುವ ದಿನಾಂಕದವರೆಗೆ ನೌಕರರ ಪರ ವಕೀಲರು ಕಾಯುವ ಅಗತ್ಯವಿಲ್ಲ ಎಂದು ಈ ಹಿಂದೆ ವಕೀಲರು ಹೇಳಿದ್ದರು.

ಅಂದರೆ ವೇತನ ಸೌಲಭ್ಯ ಸಂಬಂಧ ನೌಕರರ ಪರವಾಗಿ ಪ್ರಕರಣವನ್ನು ದಾಖಲು ಮಾಡಿರುವ ವಕೀಲ ಎಚ್‌.ಬಿ.ಶಿವರಾಜು ಅವರು ಪ್ರಕರಣದ ತುರ್ತು ವಿಚಾರಣೆಗಾಗಿ ಮೆಮೋ ಸಲ್ಲಿಸಿದ್ದೇ ಆದಲ್ಲಿ ಪ್ರಕರಣವನ್ನು ಈ ಎರಡು ವಾರಗಳ ನಡುವೆ ಯಾವಾಗಬೇಕಾದರೂ ನ್ಯಾಯಾಲಯ ಕೈಗೆತ್ತಿಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿವೆ ಎಂದು ಹೇಳಿದ್ದರು.

ಅದರಂತೆ  ಏ.22ರಂದು ಪ್ರಕರಣದ ವಿಚಾರಣೆಗೆ ಬಂದಿತ್ತು. ನೌಕರರ ಪರ ವಕೀಲರು ಪ್ರಕರಣವನ್ನು ತುರ್ತು ವಿಚಾರಣೆ ಮಾಡುವಂತೆ ಮತ್ತೆ  ಮನವಿ ಮಾಡಿದ್ದರಿಂದ ಜೂ.4ರಂದು ಪ್ರಕರಣ ವಿಚಾರಣೆ ಮಾಡಲು ತಿಳಿಸಿದ್ದರು,ಆದರೆ ಹೊಸ  ನ್ಯಾಯಮೂರ್ತಿಗಳು ಬಂದಿರುವುದರಿಂದ ಜೂ.9ರಂದು ವಿಚಾರಣೆಗೆ ಬರಲಿದೆ ಎಂದು ತಿಳಿಸಿದ್ದಾರೆ.

ವೇತನ ಹೆಚ್ಚಳ ಸಂಬಂಧ 2025ರ ಮಾರ್ಚ್‌ 10ರಂದು ಈ ಸಂಬಂಧ ಹೈ ಕೋರ್ಟ್‌ನಲ್ಲಿ ಶಿವರಾಜು ಹಾಗೂ ಅವರ ವಕೀಲರ ತಂಡ ಅರ್ಜಿ ಹಾಕಿದೆ. ಅರ್ಜಿಯನ್ನು ಮಾ.11ರಂದು ಮಾನ್ಯಮಾಡಿದ ಹೈ ಕೋರ್ಟ್‌ ಸಂಬಂಧಪಟ್ಟ ಸರ್ಕಾರಕ್ಕೆ ಹಾಗೂ ಅಧಿಕಾರಿಗಳಿಗೆ ನೋಟಿಸ್‌ ಜಾರಿ ಮಾಡಿ ವಿಚಾರಣೆಯನ್ನು ಏ.7ಕ್ಕೆ ಮುಂದೂಡಿತ್ತು. ಆ ವಿಚಾರಣೆ ಏ.7ರಂದು ನಡೆದಿದ್ದು, ನೌಕರರ ಪರವಾಗಿ ಶಿವರಾಜು ಹಾಗೂ ಕೆಲ ಹಿರಿಯ ವಕೀಲರು ವಾದ ಮಂಡಿಸಿದ್ದರು.

ಪ್ರಕರಣವೇನು?: ಸಾರಿಗೆ ನೌಕರರಿಗೆ 38 ತಿಂಗಳ ವೇತನ ಹೆಚ್ಚಳದ ಹಿಂಬಾಕಿ ಕೊಟ್ಟಿಲ್ಲ. ಜತೆಗೆ 2024ರ ಜನವರಿ 1ರಿಂದ ಆಗಬೇಕಿರುವ ವೇತನ ಹೆಚ್ಚಳವನ್ನು ಮಾಡಿಲ್ಲ. ಹೀಗಾಗಿ ನೌಕರರ ಸಹಿಯೊಂದಿಗೆ ಮಾ.10ರಂದು ಪಿಟಿಶನ್‌ ಫೈಲ್‌ ಮಾಡಿದ್ದಾರೆ.

ಇನ್ನು ಸರ್ಕಾರ ಸಾರಿಗೆ ನೌಕರರನ್ನು ಒಂದು ರೀತಿ ಮಲತಾಯಿಯಂತೆ ನೋಡುತ್ತಿದೆ. ಹೀಗಾಗಿ ನೌಕರರಿಗೆ ಸಿಗಬೇಕಿರುವ ಸೌಲಭ್ಯಗಳು ಸಮಯಕ್ಕೆ ಸರಿಯಾಗಿ ಸಿಗುತ್ತಿಲ್ಲ. ಜತೆಗೆ ಕೆಲ ಸಂಘಟನೆಗಳ ಮುಖಂಡರು ವೈಯಕ್ತಿಕ ದ್ವೇಷದಿಂದ ಸರ್ಕಾರಕ್ಕೆ ಎಚ್ಚರಿಕೆ ಕೊಡದೆ ಮೀನಮೇಷ ಎಣಿಸುತ್ತಿದ್ದಾರೆ.

ಇತ್ತ ಸಾರಿಗೆ ನೌಕರರಿಗೆ ಕೊಡುವುದಕ್ಕೆ ಸರ್ಕಾರ ಈವರೆಗೂ ಮುಂದೆ ಬಂದಿಲ್ಲ. ಹೀಗಾಗಿ ನೌಕರರು ತಮ್ಮ ವೇತನ ಸೌಲಭ್ಯ ಪಡೆಯಲೂ ಇನ್ನೂ ಸಾಧ್ಯವಾಗಿಲ್ಲ. ಈ ಎಲ್ಲವನ್ನು ಗಮನಿಸಿರುವ ಶಿವರಾಜು ಅವರು ನೌಕರರಿಗೆ ವೇತನಕ್ಕೆ ಸಂಬಂಧಪಟ್ಟಂತೆ  ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

Megha
the authorMegha

Leave a Reply

error: Content is protected !!