ಶ್ರೀರಂಗಪಟ್ಟಣ: ರಾಜ್ಯ ಕಾಂಗ್ರೆಸ್ನಲ್ಲಿ ಮತ್ತೆ ಸಚಿವರು V/S ಶಾಸಕರ ವಾರ್ ಶುರುವಾಗಿದೆ. ಶ್ರೀರಂಗಪಟ್ಟಣ ಶಾಸಕ ರಮೇಶ್ ಬಂಡಿಸಿದ್ದೇಗೌಡ ಅವರು ಸ್ವಪಕ್ಷೀಯ ಸಚಿವರ ವಿರುದ್ಧವೇ ಸರ್ಕಾರಿ ಜಮೀನು ನುಂಗಿದ ಆರೋಪ ಮಾಡಿದ್ದಾರೆ.

ಸಚಿವರು ಒತ್ತಡ ಹಾಕುತ್ತಿದ್ದಾರೆ ಎಂದು ಪಾಂಡವಪುರ ಎಸಿ (ಉಪವಿಭಾಗೀಯ ಅಧಿಕಾರಿ) ಶ್ರೀನಿವಾಸ್ಗೌಡ ಸರ್ಕಾರಿ ದಾಖಲೆಗಳನ್ನು ತಿದ್ದಿ ಒಂದೇ ದಿನಕ್ಕೆ ಬೇರೆಯವರ ಜಮೀನನ್ನು ಇನ್ನೊಬ್ಬರಿಗೆ ಖಾತೆ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಅದು ಶ್ರೀರಂಗಪಟ್ಟಣದ ಬೆಳವಾಡಿ ಗ್ರಾಮದಲ್ಲಿ ಕೋಟ್ಯಂತರ ರೂ. ಬೆಲೆ ಬಾಳುವ ಜಮೀನನ್ನು ಇನ್ನೊಬ್ಬರಿಗೆ ಮಾಡಿದ್ದಾರೆ. ಅಲ್ಲದೇ ಸತ್ತವರ ಹೆಸರಿಗೆ ಕೋರ್ಟ್ ನೋಟಿಸ್ ಕಳುಹಿಸಿ ಬಳಿಕ ಅದೇ ದಿನವೇ ಎಸಿ ಕೋರ್ಟ್ನಲ್ಲಿ ಆದೇಶ ಹೊರಡಿಸಿದ್ದಾರೆ ಎಂದು ವಿವರಿಸಿದ್ದಾರೆ.
ಇನ್ನು ಶ್ರೀರಂಗಪಟ್ಟಣ ತಹಸೀಲ್ದಾರ್ಗೆ ಸಚಿವರ ಒತ್ತಡ ಇದೆ. ಬೇಗ ಖಾತೆ ಮಾಡಿ ಎಂದು ಖಾತೆ ಮಾಡಿಸಿದ್ದಾರೆ. ಜತೆಗೆ ಶ್ರೀರಂಗಪಟ್ಟಣದ ಹುಲಿಕೆರೆಯಲ್ಲಿ 3 ಎಕರೆ ಪ್ರದೇಶದ ಕೆರೆಯನ್ನು ಮುಚ್ಚಿದ್ದಾರೆ. ಈ ಬಗ್ಗೆ ನಾನು ಸದನದಲ್ಲಿ ಪ್ರಶ್ನೆ ಮಾಡಲು ಸಹ ಕೇಳಿದ್ದೇನೆ. ಆದರೆ ನಮ್ಮ ಕ್ಷೇತ್ರದ ಈ ಅಕ್ರಮದ ಬಗ್ಗೆ ಧ್ವನಿ ಎತ್ತಲು ನನಗೆ ಸದನದಲ್ಲಿ ಅವಕಾಶವೆ ಸಿಗುತ್ತಿಲ್ಲ ಅಂತ ಆಕ್ರೋಶ ಹೊರಹಾಕಿದ್ದಾರೆ.
ಈ ಬಗ್ಗೆ ದೃಶ್ಯ ಮಾಧ್ಯಮವೊಂದರ ಜತೆ ಮಾತಾಡಿದ ಶಾಸಕರು, ನನ್ನ ಕ್ಷೇತ್ರದಲ್ಲಿ ಸರ್ಕಾರಿ ಜಾಗವನ್ನು ಖಾಸಗಿಯವರ ಹೆಸರಿಗೆ ವರ್ಗಾವಣೆ ಮಾಡಿದ ನೂರಾರು ಪ್ರಕರಣಗಳು ನಡೆದಿವೆ. ಕಾಲಿಂಗ್ ಅಟೆನ್ಷನ್ ಕೂಡ ಕೊಟ್ಟಿದ್ದೇನೆ. ಸದನದಲ್ಲಿ ಇದರ ಬಗ್ಗೆ ಮಾತನಾಡುತ್ತೇನೆ ಎಂದು ಹೇಳಿದ್ದಾರೆ.
Related










