ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಸುರಕ್ಷಿತ ಯುಗಾದಿ, ಸಂತಸ ಯುಗಾದಿ ಎಂಬ ಧ್ಯೇಯದೊಂದಿಗೆ ನಗರದೆಲ್ಲೆಡೆ ಆಮ್ ಆದ್ಮಿ ಪಕ್ಷದಿಂದ ಸೋಂಕು ನಿವಾರಕ ಸಿಂಪಡನೆ ಅಭಿಯಾನವನ್ನು ಇದೇ ಭಾನುವಾರ (ಏ.11)ದಿಂದ ನಗರಾದ್ಯಂತ ಹಮ್ಮಿಕೊಂಡಿದೆ ಎಂದು ರಾಜ್ಯ ಉಪ ಸಂಚಾಲಕಿ ಹಾಗೂ ಬಿಬಿಎಂಪಿ ಕ್ಯಾಂಪೇನ್ ಉಸ್ತುವಾರಿ ಶಾಂತಲಾ ದಾಮ್ಲೆ ತಿಳಿಸಿದ್ದಾರೆ.
ಈ ಸಂಬಂಧ ಇಂದು ನಗರದ ಪ್ರಸ್ಕ್ಲಬ್ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, ಈ ಕಾರ್ಯಕ್ರಮಕ್ಕೆ ಅಂದು ಬೆಳಗ್ಗೆ 9 ಗಂಟೆಗೆ ಪಕ್ಷದ ರಾಜ್ಯಾಧ್ಯಕ್ಷ ಹಾಗೂ ರಾಷ್ಟ್ರೀಯ ವಕ್ತಾರರೂ ಆಗಿರುವ ಪೃಥ್ವಿರೆಡ್ಡಿ ನಗರದ ಎನ್ .ಆರ್ .ರಸ್ತೆಯಲ್ಲಿನ ಬಿಬಿಎಂಪಿ ಕೇಂದ್ರ ಕಚೇರಿಯ ಮುಂಭಾಗದ ಬಸ್ ನಿಲ್ದಾಣದಲ್ಲಿ ಚಾಲನೆ ನೀಡಲಿದ್ದಾರೆ ಎಂದರು.
ಕೋವಿಡ್ ಮಹಾಮಾರಿಯ ಎರಡನೇ ಅಲೆ ಇದೀಗ ದೇಶವ್ಯಾಪಿ ಹರಡುತ್ತಿದೆ. ಅದರಲ್ಲೂ ಬೆಂಗಳೂರು ನಗರದಲ್ಲಿ ಪ್ರತಿ ದಿವಸ 5 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿ ಭಾರಿ ಆತಂಕಕ್ಕೆ ಈಡುಮಾಡುತ್ತಿದೆ. ಈ ಸಂಧರ್ಭದಲ್ಲಿ ಸಾರ್ವಜನಿಕರೆಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಸಭೆ ಸಮಾರಂಭಗಳಿಗೆ ಹೋಗುವುದಕ್ಕೆ ಕಡಿವಾಣ ಹಾಕುವುದು ಇನ್ನೂ ಮುಂತಾದ ಹತ್ತು ಹಲವಾರು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುವುದು ತೀರಾ ಅವಶ್ಯಕವಾಗಿದೆ ಎಂದು ಹೇಳಿದರು.
ಈಗ ಜೀವ ಮತ್ತು ಜೀವನ ಎರಡನ್ನೂ ಸಮ ತೂಕದಲ್ಲಿ ನಡೆಸಿಕೊಂಡು ಹೋಗುವುದು ಅವಶ್ಯಕವಾಗಿದೆ. ಈ ದಿಶೆಯಲ್ಲಿ ಆಮ್ ಆದ್ಮಿ ಪಕ್ಷದ ದೇಶಭಕ್ತ ಕಾರ್ಯಕರ್ತರು ನಗರದ ಎಲ್ಲಾ ವಾರ್ಡುಗಳಲ್ಲಿನ ಮಾರುಕಟ್ಟೆಗಳು, ಧಾರ್ಮಿಕ ಕ್ಷೇತ್ರಗಳು, ಬಸ್ ಹಾಗೂ ರೈಲು ನಿಲ್ದಾಣಗಳು ಸೇರಿದಂತೆ ಹಲವಾರು ಜನ ನಿಬಿಡ ಪ್ರದೇಶಗಳಲ್ಲಿ ಸೋಂಕು ಸಿಂಪಡಣೆ (ಸ್ಯಾನಿಟೇಷನ್) ಮಾಡುವ ಕಾರ್ಯಕ್ರಮವನ್ನು ಸುರಕ್ಷಿತ ಯುಗಾದಿ – ಸಂತಸ ಯುಗಾದಿ ಎಂಬ ಘೋಷವಾಕ್ಯದೊಂದಿಗೆ ಪ್ರಾರಂಭ ಗೊಳಿಸುತ್ತಿದ್ದೇವೆ ಎಂದರು.
ಇದೇ ಸಂದರ್ಭದಲ್ಲಿ ಉಚಿತವಾಗಿ ಮಾಸ್ಕ್ ಗಳನ್ನು ಸಹ ವಿತರಿಸಲಾಗುತ್ತದೆ. ನಗರದ ಎಲ್ಲೆಡೆ ಈ ಮಹತ್ವದ ಸಮಾಜಮುಖಿ ಕಾರ್ಯ ಕ್ರಮವನ್ನು ಯಶಸ್ವಿಗೊಳಿಸಲು ಬೆಂಗಳೂರಿಗರ ಸಹಭಾಗಿತ್ವ ಅತ್ಯಗತ್ಯ ವಾಗಿದೆ. ಈ ಮೂಲಕ ಕೋವಿಡ್ ಎಂಬ ಮಹಾಮಾರಿಯನ್ನು ಹೊಡೆದೋಡಿಸಿ ಕೋವಿಡ್ ಮುಕ್ತ ಬೆಂಗಳೂರು ನಿರ್ಮಿಸೋಣ ಎಂಬುದೇ ನಮ್ಮೆಲ್ಲರ ಆಶಯವಾಗಿದೆ ಎಂದರು.