ಬೆಂಗಳೂರು: ಕರ್ನಾಟಕ ಎಸ್ಸೆಸ್ಸೆಲ್ಸಿ ಫಲಿತಾಂಶಗಳು ಪ್ರಕಟವಾಗಿದ್ದು, ಈ ಬಾರಿ ಶೇ.71.80 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ರಾಜ್ಯಾದ್ಯಂತ 8, 48, 203 ವಿದ್ಯಾರ್ಥಿಗಳು ಪರೀಕ್ಷೆ ನೋಂದಾಯಿಸಿಕೊಂಡಿದ್ದು, ಈ ಪೈಕಿ 8,11,050 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. 19, 086 ವಿದ್ಯಾರ್ಥಿಗಳ ಕೊರತೆಯುಂಟಾಗಿತ್ತು. ರಾಜ್ಯಾದ್ಯಂತ 34 ಶೈಕ್ಷಣಿಕ ಜಿಲ್ಲೆಗಳ 22 ಕೇಂದ್ರಗಳಲ್ಲಿ ಮೌಲ್ಯಮಾಪನ ಮಾಡಲಾಗಿತ್ತು ಎಂದು ಹೇಳಿದರು.
ಈ ವರ್ಷ ಶೇ.71.80 ಮಂದಿ ಅಂದರೆ 5, 82, 314 ಮಂದಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಕಳೆದ ವರ್ಷ 73.70 ಮಂದಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು. ಈ ಬಾರಿ ಚಿಕ್ಕಬಳ್ಳಾಪುರ ಜಿಲ್ಲೆಗೆ ಪ್ರಥಮ ಸ್ಥಾನ ಲಭಿಸಿದ್ದು, ಬೆಂಗಳೂರು ಗ್ರಾಮಾಂತರ ದ್ವಿತೀಯ ಮಧುಗಿರಿ ತೃತೀಯ, ಮಂಡ್ಯ ಜಿಲ್ಲೆಗೆ ನಾಲ್ಕನೇ ಸ್ಥಾನ ಲಭಿಸಿದೆ. ಯಾದಗಿರಿ ಕೊನೆಯ ಸ್ಥಾನ ಲಭಿಸಿದೆ. 2, 28, 734 ವಿದ್ಯಾರ್ಥಿಗಳು ಅನುತೀರ್ಣರಾಗಿದ್ದಾರೆ.
ಈ ಪೈಕಿ ಸರ್ಕಾರಿ ಶಾಲೆಗಳ ಶೇ.72.79 ಮಂದಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಅನುದಾನಿತ ಶಾಲೆಗಳ ಶೇ. 70.60 ಮಂದಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಅನುದಾನ ರಹಿತ ಶಾಲೆಗಳ ಶೇ.83.12ಮಂದಿ ವಿದ್ಯಾರ್ಥಿಗಲು ಉತ್ತೀರ್ಣರಾಗಿದ್ದಾರೆ.
ವಿದ್ಯಾರ್ಥಿಗಳು ಶಿಕ್ಷಣ ಇಲಾಖೆ ಅಧಿಕೃತ ವೆಬ್ ಸೈಟ್ http://karresults.nic.in ನಲ್ಲಿ ಫಲಿತಾಂಶ ಪಡೆಯಬಹುದು.
ಪ್ರತೀ ಬಾರಿಯಂತೆಯೂ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಈ ಬಾರಿ ಶೇ.66.41 ಬಾಲಕರು ಉತ್ತೀರ್ಣರಾಗಿದ್ದು, ಶೇ.77.74ರಷ್ಟು ಬಾಲಕಿಯರು ಉತ್ತೀರ್ಣರಾಗಿದ್ದಾರೆ. 6 ಮಂದಿ ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳನ್ನು ಗಳಿಸಿದ್ದು, ಕಳೆದ ಬಾರಿ ಇಬ್ಬರು ಮಾತ್ರ ಈ ಸಾಧನೆ ಗೈದಿದ್ದರು.
ಅಂತೆಯೇ ಈ ಬಾರಿ 11 ಮಂದಿ 625ಕ್ಕೆ 624 ಅಂಕಗಳನ್ನು ಪಡೆದಿದ್ದು, ಕಳೆದ ಬಾರಿ 11 ಇಷ್ಚು ಅಂಕಗಳಿಸಿದ್ದರು. 625ಕ್ಕೆ 623 ಅಂಕಗಳನ್ನು 43 ಮಂದಿ ಕಳೆದ ಬಾರಿ 19 ಮಂದಿ, 625ಕ್ಕೆ 622 ಅಂಕಗಳನ್ನು 61 ಮಂದಿ ಕಳೆದಬಾರಿ 39 ಮಂದಿ ಗಳಿಸಿದ್ದರು. ಹಾಗೆಯೇ 625ಕ್ಕೆ 621 ಅಂಕಗಳಿಸಿದವರು 68 ಮಂದಿ ಕಳೆದ ಬಾರಿ 43 ಮಂದಿ ಮತ್ತು 625ಕ್ಕೆ 620 ಅಂಕಗಳಿಸಿದವರು 117, ಕಳೆದ ಬಾರಿ 56 ವಿದ್ಯಾರ್ಥಿಗಳು ಅಂಕಗಳಿಸಿದ್ದರು ಎಂದ ಸಚಿವರು ವಿವರಿಸಿದರು.
ಇನ್ನು ನಗರ ಪ್ರದೇಶದಲ್ಲಿ ಶೇ.73.41 ರಷ್ಟು ಮಂದಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಗ್ರಾಮೀಣ ಭಾಗದ ಶೇ.77.18 ಮಂದಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಅಂತೆಯೇ ಕನ್ನಡ ಮಾಧ್ಯಮದ ಶೇ. 70.49 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು. ಆಂಗ್ಲ ಮಾಧ್ಯಮದ ಶೇ.86.98 ಮಂದಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಆರು ಮಂದಿ ಟಾಪರ್
ಸನ್ನಿಧಿ ಮಹಾಬಲೇಶ್ವರ ಹೆಗಡೆ (ಸರ್ಕಾರಿ ಮಾರಿಕಾಂಬಾ ಪಿಯು ಕಾಲೇಜು ಶಿರಸಿ )
ಚಿರಾಯು ಕೆ. ಎಸ್. (ಸೇಂಟ್ ಮೇರಿ ಹೈಸ್ಕೂಲ್, ಬೆಂಗಳೂರು)
ನಿಖಿಲೇಶ್ ಎಂ. ಮುರಳಿ (ಪೂರ್ಣಪ್ರಜ್ಞ ಶಿಕ್ಷಣ ಕೇಂದ್ರ, ಬೆಂಗಳೂರು)
ಧೀರಜ್ ರೆಡ್ಡಿ ಎಂ.ಪಿ. (ಸತ್ಯಸಾಯಿ ಸರಸ್ವತಿ ಇಂಗ್ಲಿಷ್ ಮಾಧ್ಯಮ ಶಾಲೆ ಮಂಡ್ಯ )
ಅನುಷ್ ಎ.ಎಲ್. (ಕುಮಾರಸ್ವಾಮಿ ಇಂಗ್ಲಿಷ್ ಮೀಡಿಯಂ ಸ್ಕೂಲ್ ಸುಳ್ಯ )
ತನ್ಮಯಿ ಐ.ಪಿ. (ಸೇಂಟ್ ಜೋಸೆಫ್ ಕಾನ್ವೆಂಟ್ ಚಿಕ್ಕಮಗಳೂರು) ಇವರು 625ಕ್ಕೆ 625 ಅಂಕಗಳಿಸಿ ಸಾಧನೆ ಮೆರೆದಿದ್ದಾರೆ.